ದೇಶ ಒಗ್ಗೂಡಿಸಲು 'ಭಾರತ ಐಕ್ಯತಾ ಯಾತ್ರೆ' ನಡೆಯಲಿದೆ: ಸಿದ್ದರಾಮಯ್ಯ
ಬೆಂಗಳೂರು ಆಗಸ್ಟ್ 28: "ದೇಶದಲ್ಲಿ ಹಾಳಾಗುತ್ತಿರುವ ಸಾಮಾಜಿಕ ಸಮರಸ್ಯ, ಐಕ್ಯತೆಯನ್ನು ಪುನಃಸ್ಥಾಪಿಸಲು ಪ್ರಜಾಪ್ರಭುತ್ವ ಕಾಪಾಡಲು, ಸಂವಿಧಾನ ರಚಿಸಲು, ಹೆಚ್ಚಾಗುತ್ತಿರುವ ಧರ್ಮರಾಜಕಾರಣ, ಅದರಿಂದ ಸಮಾಜ ಒಡೆಯುತ್ತಿರುವುದರ ವಿರುದ್ಧ ಭಾರತ ಐಕ್ಯತಾ ಯಾತ್ರೆ ನಡೆಸಲಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಮಯ್ಯ, "75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾಂಗ್ರೆಸ್ ವರಿಷ್ಠರು ದೇಶ ಒಗ್ಗೂಡಿಸುವ ಸದುದ್ದೇಶದಿಂದ ಭಾರತ ಐಕ್ಯತಾ ಯಾತ್ರೆ ನಡೆಸಲು ತಿರ್ಮಾನಿಸಿದ್ದಾರೆ" ಎಂದರು.
"ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಅದರಲ್ಲದೇ ದೇಶದಲ್ಲಿರುವ ಎಲ್ಲರಿಗೂ ಸಮಾನತೆ ನೀಡಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು, ನಮ್ಮ ಬಹುತ್ವ ಸಮಾಜ ಕಾಪಾಡಿ, ಎಲ್ಲಾ ಧರ್ಮಗಳ ನಡುವೆ ಸಮನ್ವಯತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿಕೊಟ್ಟಿದೆ. ಸಹನೆ, ಸಹಿಷ್ಣುತೆ, ಸಹಬಾಳ್ವೆಯನ್ನು ನಾವು ಸಂವಿಧಾನದ ಮೂಲಕ ಒಪ್ಪಿಕೊಂಡಿದ್ದೇವೆ. ಇದು ಪಾಲನೆ ಆಗಬೇಕು. ಆ ಮೂಲಕ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ಸರ್ವರ ಅಭಿವೃದ್ಧಿಯಾಗಬೇಕು. ಸಮ ಸಮಾಜದ ನಿರ್ಮಾಣ ಮಾಡಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ" ಎಂದು ತಿಳಿಸಿದರು.

ಸಮ ಸಮಾಜ ನಿರ್ಮಾಣ
ಸಮ ಸಮಾಜ ನಿರ್ಮಾಣದ ಮಹತ್ತರ ಉದ್ದೇಶದ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವು ದೇಶದಲ್ಲಿ ವಿಭಜನೆಯಾಗಿದ್ದ 600 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭಾರತ ಸಾರ್ವಭೌಮ ಹಾಗೂ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಿತು. ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆ ನಿಯಮ ರೂಪಿಸಲಾಯಿತು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಮೂಲ ಆಶಯವು ಇದೇ ಆಗಿದೆ ಎಂದರು.

ಜಾತಿ, ಧರ್ಮಾಧಾರದಲ್ಲಿ ಸಮಾಜದಲ್ಲಿ ಒಡಕು
ದೇಶದಲ್ಲಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈಗ ಕೋಮುವಾದಿಗಳಿಗೆ ಅಧಿಕಾರ ಸಿಕ್ಕ ನಂತರ ಸಮಾಜ ಒಡಿಯುವಂತಹ, ಜಾತಿ-ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ಒಗ್ಗೂಡಿಸಲು, ನಾವೆಲ್ಲರೂ ಭಾರತೀಯರು ಮನುಷ್ಯರು ಎಂಬ ಭಾವನೆಗಳ ಮೂಲಕ ಜನರನ್ನು ಒಗ್ಗೂಡಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ ಐಕ್ಯತೆ
ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಈ ಮೂರು ಅಂಶಗಳನ್ನು ನಾವು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಅವೆಲ್ಲವನ್ನು ಒಟ್ಟಾಗಿ ನೋಡಿದರೆ ಮಾತ್ರ ದೇಶ ಐಕ್ಯತೆಯಿಂದ ಸಾಧ್ಯ. ದೇಶದ ಎಲ್ಲ ರಾಜ್ಯಗಳಲ್ಲೂ ಈ ಪಾದಯಾತ್ರೆ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3,500 ಕಿ.ಮೀ. ನಷ್ಟು ದೂರ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ 511ಕಿ.ಮೀ.ಪಾದಯಾತ್ರೆ
ಈ ಪಾದಯಾತ್ರೆ ಅನೇಕ ರಾಜ್ಯಗಳಲ್ಲಿ ಹಾದು ಹೋಗಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಕ್ರಮಿಸುವ ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಸುಮಾರು 511 ಕಿ.ಮೀ ದೂರ ಕ್ರಮಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ರಾಹುಲ್ ಗಾಂಧಿಯವರ ಜೊತೆ 125 ನಾಯಕರು ಭಾರತ ಯಾತ್ರಿಗಳಾಗಿ ಎಲ್ಲ ರಾಜ್ಯಗಳಲ್ಲೂ ಹೆಜ್ಜೆ ಹಾಕಲಿದ್ದಾರೆ. ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯದವರು ಸೇರಿದಂತೆ ಕನಿಷ್ಠ 300 ಮಂದಿ ಸದಾ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅವರ ಜೊತೆ ಸ್ಥಳೀಯ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರು ಅವರ ಜೊತೆ ಸೇರಲಿದ್ದಾರೆ ಎಂದು ವಿವರಿಸಿದರು.
ಪಾದಯಾತ್ರೆ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಲಿದ್ದು, ಅದೇ ತಿಂಗಳ 30 ರಂದು ಗುಂಡ್ಲುಪೇಟೆಗೆ ಪ್ರವೇಶಿಸುತ್ತಾರೆ. ನಂತರ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಪಾದಯಾತ್ರೆ ಸಾಗಲಿದೆ. ರಾಹುಲ್ ಗಾಂಧಿಯವರು 150 ದಿನಗಳಲ್ಲಿ 3500 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಆ ಮೂಲಕ ಅವರು ಜನರಲ್ಲಿ ಹೊಸ ಭರವಸೆ, ದೇಶ ಅಭಿಮಾನ, ಭಾವನೆ ಮೂಡಿಸಲಿದ್ದಾರೆ.
ದೇಶದ 130 ಕೋಟಿ ಜನರು ಸಹೋದರರ ಭಾವನೆಯಿಂದ ಬದುಕಬೇಕು. ಇದರ ಜೊತೆಗೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications