ಕರ್ನಾಟಕಕ್ಕೆ 'ರಾಹುಕಾಲ' ಸರಣಿ ಟ್ವೀಟ್ ಮಾಡಿದ ಬಿಜೆಪಿ!
ಬೆಂಗಳೂರು, ಸೆಪ್ಟೆಂಬರ್ 30; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸಿದೆ. ಮುಂದಿನ 21 ದಿನಗಳ ಕಾಲ ಯಾತ್ರೆ ಕರ್ನಾಟಕದಲ್ಲಿ ಸಾಗಲಿದೆ.
ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಂಡೀಪುರ ಅರಣ್ಯ ಪ್ರದೇಶದ ಮೂಲಕ ಕರ್ನಾಟಕಕ್ಕೆ ಪ್ರವೇಶ ಪಡೆದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಸ್ವಾಗತಿಸಿದರು.
ರಾಹುಲ್ ಕರ್ನಾಟಕ ಭೇಟಿ ಬಗ್ಗೆ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. 'ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ' ಎಂದು ಹೇಳಿದೆ.

"ಜಾಮೀನಿನ ಆಧಾರದಲ್ಲಿ ಜೈಲಿನಿಂದ ಹೊರಗಿದ್ದುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಭ್ರಷ್ಟ ಪರಿವಾರದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ.#Rahukaala#SonsOfTipu#BharatTodoYatra#GoBackRahul pic.twitter.com/V34xXY4d3u
— BJP Karnataka (@BJP4Karnataka) September 30, 2022
ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, "ಭಯೋತ್ಪಾದಕರ ಬಗ್ಗೆ ಮೃದು ಧೊರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸ್ವಾಗತ" ಎಂದು ರಾಹುಲ್ ಗಾಂಧಿ ಭಾಷಣವ ವಿಡಿಯೋ ತುಣಕು ಶೇರ್ ಮಾಡಿದೆ.
"ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ, ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು" ಎಂದು ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಟೀಕೆ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಅಪರಾಧ ಸೂಚ್ಯಂಕ: (NCRB Report)
* ತಮಿಳುನಾಡು - 422.1
* ಕೇರಳ - 401.4
* ರಾಜಸ್ಥಾನ - 269.6
* ಕರ್ನಾಟಕ - 172.8
ಮಾನ್ಯ ರಾಹುಲ್ ಗಾಂಧಿ ಅವರೇ, ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ಹೇಳಿದೆ.
ಶುಕ್ರವಾರ ರಾಹುಲ್ ಗಾಂಧಿ ಸುಲ್ತಾನ್ ಬತ್ತೇರಿ ಮೂಲಕ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬಿಜೆಪಿ ಈ ಕುರಿತು ಟ್ವೀಟ್ ಮಾಡಿದ್ದು, ಟಿಪ್ಪುವಿನ ಮತಾಂಧತೆಗೆ ಹಿಂದೂಗಳ ರಕ್ತ ಹರಿದಿರುವ ನೆಲ ಸುಲ್ತಾನ್ ಬತ್ತೇರಿ. ಇಲ್ಲಿಂದಲೇ ರಾಹುಲ್ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವುದು ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ. ಬನ್ನಿ, ಸುಲ್ತಾನ್ ಬತ್ತೇರಿ ಬಗ್ಗೆ ತಿಳಿಯೋಣ ಎಂದು ವಿಡಿಯೋವೊಂದನ್ನು ಶೇರ್ ಮಾಡಿದೆ.
ವೇದಿಕೆ ಕಾರ್ಯಕ್ರಮ; ಗುಂಡ್ಲುಪೇಟೆಗೆ ಆಗಮಿಸಿದ ರಾಹುಲ್ ಗಾಂಧಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಗಾರಿಯನ್ನು ಬಾರಿಸುವ ಮೂಲಕ ರಾಹುಲ್ ಗಾಂಧಿ ಸಮಾವೇಶ ಉದ್ಘಾಟಿಸಿದರು.
ವೇದಿಕೆಯಲ್ಲಿ ರಾಹುಲ್ ಗಾಂಧಿಗೆ ಸಾಹಿತಿ ದೇವನೂರು ಮಹಾದೇವ ಭಾರತದ ಸಂವಿಧಾನದ ಪ್ರತಿಯನ್ನು ಹಸ್ತಾಂತರಿಸಿದರು. ಸ್ವರಾಜ್ ಪಾರ್ಟಿಯ ಯೋಗೇಂದ್ರ ಯಾದವ್ ಸಂವಿಧಾನದ ಪೀಠಿಕೆಯ ಪ್ರತಿಯನ್ನು ನೀಡಿದರು.
ಶುಕ್ರವಾರ ಕರ್ನಾಟಕ ಪ್ರವೇಶ ಮಾಡಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 511 ಕಿ. ಮೀ. ನಷ್ಟು ದೂರ ಸಾಗಲಿದೆ. ಒಟ್ಟು 21 ದಿನಗಳ ಕಾಲ ರಾಜ್ಯದಲ್ಲಿ ಯಾತ್ರೆ ಸಂಚಾರ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆಯನ್ನು ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಬರಲ್ಲ; ಗುಂಡ್ಲುಪೇಟೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಇನ್ನೂ ಆರು ತಿಂಗಳಿನಲ್ಲಿ ಸರ್ಕಾರ ಬದಲಾಗಲಿದೆ. ತಾರತಮ್ಯ ಮಾಡುತ್ತಿರುವ ಪೊಲೀಸರಿಗೆ ಆಗ ಬುದ್ಧಿ ಕಲಿಸುತ್ತೇವೆ" ಎಂದು ಎಚ್ಚರಿಸಿದರು.












Click it and Unblock the Notifications