ಕಾಂಗ್ರೆಸ್, ಬಿಜೆಪಿ ಜಗಳದಲ್ಲಿ ಕುಮಾರಸ್ವಾಮಿಯೇ 'ಜನನಾಯಕ'?
Recommended Video
ಪ್ರಧಾನಿ ಮೋದಿಯವರ ಒಂದು ಚುನಾವಣಾ ರ್ಯಾಲಿಗೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಮಟ್ಟಿನಲ್ಲಿ ಸಮರ ನಡೆಯುತ್ತಿದೆ ಅಂದರೆ, ಮುಂದಿನ ದಿನಗಳಲ್ಲಿ ಇಲೆಕ್ಷನ್ ಕಾವು ಇನ್ನೆಷ್ಟು ತೀವ್ರತೆ ಪಡೆಯುತ್ತೋ? ಈ ನಡುವೆ, ರಾಷ್ಟ್ರೀಯ ಪಕ್ಷಗಳ ಮೇಲಾಟದ ನಡುವೆ, ಬೇರಿಲ್ಲದ ಜಾಗದಲ್ಲೂ ಕುಮಾರಸ್ವಾಮಿ ಪಕ್ಷವನ್ನು ಬಲಪಡಿಸುವತ್ತ ಯಶಸ್ವಿಯಾಗುತ್ತಿದ್ದಾರಾ?
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಲಹದ ಬಗ್ಗೆ ತಲೆಕೆಡಿಸಿಕೊಳ್ಳದೇ, ಜೆಡಿಎಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ವ್ಯವಸ್ಥಿತವಾಗಿ ಮುನ್ನುಗ್ಗುತ್ತಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಕಿಂಗ್, ಕಿಂಗ್ ಮೇಕರ್ ಅಲ್ಲ: ಎಚ್ಡಿಕೆ ವಿಶ್ವಾಸ
ಯೋಗಿ, ಅಮಿತ್ ಶಾ ಮತ್ತು ಮೋದಿ ರಾಜ್ಯಕ್ಕೆ ಬಂದು ಹೋದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ 'ರಾಜಕೀಯ' ಮೇಲಾಟದ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯಿಸದ ಜೆಡಿಎಸ್ ಮುಖಂಡರು, ಪಕ್ಷಕ್ಕೆ ಅಷ್ಟೇನೂ ಅಥವಾ ಏನೂ ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೊಡಗಿರುವುದು ಹೊಸ ರಾಜಕೀಯ ಲೆಕ್ಕಾಚಾರ ಎಂದೇ ಹೇಳಲಾಗುತ್ತಿದೆ.
ನಾಲ್ಕೈದು ಜಿಲ್ಲೆಗಳಿಗೆ ಸೀಮಿತವೆಂದೇ ಬಿಂಬಿಸಲಾಗುತ್ತಿರುವ ಜೆಡಿಎಸ್, ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲೂ ದಿನದಿಂದ ದಿನಕ್ಕೆ ತಮ್ಮ ಬಲವನ್ನು ವೃದ್ದಿಸಿಕೊಳ್ಳುತ್ತಿರುವುದು ಗಮನಿಸಬೇಕಾದ ಅಂಶ. ಇದಕ್ಕೆ ಪ್ರವಾಸದ ವೇಳೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೆ ಸಿಗುತ್ತಿರುವ ಜನಬೆಂಬಲವೇ ಸಾಕ್ಷಿ.
ಸಿದ್ದರಾಮಯ್ಯ ಬಿಜೆಪಿ ಜತೆ ಸೇರಿದರೂ ಅಚ್ಚರಿ ಇಲ್ಲ: ಕುಮಾರಸ್ವಾಮಿ
ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿಯಿರುವುದರಿಂದ ಮತ್ತು ಮತದಾನದ ಹೊತ್ತಿನಲ್ಲಿ ಜೆಡಿಎಸ್ ಇಲ್ಲಿನ ಮತದಾರರಿಗೆ ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ಆಯ್ಕೆಯಾದರೆ ಅಚ್ಚರಿ ಪಡಬೇಕಾಗಿಲ್ಲ ಎನ್ನುವುದು ಈ ಭಾಗದಲ್ಲಿ ಸದ್ಯ ಕೇಳಿಬರುತ್ತಿರುವ ಮಾತು. ಜೆಡಿಎಸ್ ಸರಿಯಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಇಲ್ಲಿ ಅತ್ಯಂತ ನಿರ್ಣಾಯಕ ಎನ್ನುವ ಮಾತೂ ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ಮುಂದೆ ಓದಿ..
ನದಿನೀರು ಹಂಚಿಕೆ ವಿವಾದ ಪ್ರಮುಖ ಪಾತ್ರ
ಈ ಬಾರಿಯ ಚುನಾವಣೆಯಲ್ಲಿ ನದಿನೀರು ಹಂಚಿಕೆ ವಿವಾದ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿರುವುದರಿಂದ, 'ರಾಷ್ಟ್ರೀಯ ಪಕ್ಷಗಳ ಕುಟಿಲ ನೀತಿಗಳಿಂದ ರಾಜ್ಯಕ್ಕೆ ಕಾವೇರಿ, ಮಹದಾಯಿ ನೀರು ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ' ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಜೆಡಿಎಸ್ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಗಳೇ ಜಾಸ್ತಿ.
ರಾಮುಲು ದೇವೆಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ
ಹೈದ್ರಾಬಾದ್ ಕರ್ನಾಟಕದ ಈಡಿಗ ಸಮುದಾಯದ ಹಿರಿಯ ಮುಖಂಡ ಹೆಚ್.ಜಿ.ರಾಮುಲು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶದ ಮೂಲಕ ಅಧಿಕೃತವಾಗಿ ಜನತಾದಳಕ್ಕೆ ರಾಮುಲು ಸೇರ್ಪಡೆಯಾಗಲಿದ್ದಾರೆ. ಇದು ಈ ಭಾಗದಲ್ಲಿ ಜೆಡಿಎಸ್ ಪರವಾದ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಇದೊಂದು ಸಾಕ್ಷಿ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ.
ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವ ಕುಮಾರಣ್ಣ
ಕಳೆದ ವಾರ ಕೋಲಾರ ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶಕ್ಕೂ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಹೋದಲೆಲ್ಲಾ ಬಿಜೆಪಿ ಅಥವಾ ಕಾಂಗ್ರೆಸ್ ಅನ್ನು ಎಷ್ಟು ಬೇಕೋ ಅಷ್ಟು ಮಾತ್ರ ಟೀಕಿಸಿ, ಸ್ಥಳೀಯ ಸಮಸ್ಯೆಗಳಿಗೆ ಜೊತೆಗೆ, ತನ್ನ ಅವಧಿಯಲ್ಲಿನ ಸಾಧನೆ, ನೀರು ಮತ್ತು ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚಿನ ಒತ್ತನ್ನು ಕುಮಾರಸ್ವಾಮಿ ನೀಡುತ್ತಿರುವುದರಿಂದ, ಮತದಾರರಿಗೆ ಎಚ್ಡಿಕೆ ಹತ್ತಿರವಾಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ವಿಜಯಪುರದಲ್ಲಿ ಮುಸ್ಲಿಮರಿಗೆ ಭಾವನಾತ್ಮಕವಾಗಿ ಕರೆ
ಅಲ್ಪಸಂಖ್ಯಾತ ಬಾಂಧವರು ತಮ್ಮ ಮತಗಳು ಕಾಂಗ್ರೆಸ್ಸಿಗೇ ಎನ್ನುವ ಭಾವನೆಯಿಂದ ಹೊರಬರಬೇಕು. ಮುಸ್ಲಿಮರಿಗೆ ಏನೂ ಮಾಡಿಲ್ಲದಿದ್ದರೂ ಅವರು ಕಾಂಗ್ರೆಸ್ಸಿಗೇ ಮತ ಚಲಾಯಿಸುತ್ತಾರೆ ನಿಮ್ಮ ಸಮುದಾಯಕ್ಕೆ ಮಂಕುಬೂದಿ ಎರಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬರುತ್ತಿದೆ. ಈ ಚುನಾವಣೆಯಲ್ಲಿ ನಮಗೂ ಒಂದು ಅವಕಾಶ ನೀಡಿ ಎಂದು ಕುಮಾರಸ್ವಾಮಿ, ವಿಜಯಪುರದಲ್ಲಿ ಮುಸ್ಲಿಮರಿಗೆ ಭಾವನಾತ್ಮಕವಾಗಿ ಕರೆನೀಡಿದ್ದಾರೆ.
ನಮ್ಮಲ್ಲಿ ಕಪ್ಪು ಹಣ ಇಲ್ಲ ನೀವೇ ನನ್ನ ಆಸ್ತಿ, ಎಚ್ಡಿಕೆ
ಫೆಬ್ರವರಿ 17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 4 ಲಕ್ಷ ಜನರನ್ನು ಸೇರಿಸಿ 130 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು. ಅವತ್ತು ನನ್ನ ಅಭಿಮಾನಿಗಳು ಮತ್ತು ಪಕ್ಷದ ಸಮಸ್ತ ಕಾರ್ಯಕರ್ತರು ಹಾಗೂ ನಾಡಿನ ಬಂಧುಗಳು ಸ್ವಯಂಪ್ರೇರಿತರಾಗಿ ಬರಬೇಕೆಂದು ವಿನಂತಿಸುತ್ತೇನೆ, "ನಮ್ಮಲ್ಲಿ ಕಪ್ಪು ಹಣ ಇಲ್ಲ ನೀವೇ ನನ್ನ ಆಸ್ತಿ", ಇಂತಿ ನಿಮ್ಮ ಸೇವಕ ಎಂದು ಕುಮಾರಸ್ವಾಮಿ ಕರೆನೀಡಿದ್ದಾರೆ.
ಕುಮಾರಸ್ವಾಮಿ 'ಜನನಾಯಕ'ನಾಗುವ ಎಲ್ಲಾ ಲಕ್ಷಣ
ಈ ಹೊತ್ತಿನ ರಾಜಕೀಯದ ಬಗ್ಗೆ ಹೇಳುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಇದೇ ರೀತಿ ಕಿತ್ತಾಡುವುದನ್ನು ಮುಂದುವರಿಸಿದರೆ, ಜನರು ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ಭ್ರಮನಿರಸನವಾಗುವ ಸಾಧ್ಯತೆಯಿದೆ. ಜೊತೆಗೆ, ಕುಮಾರಸ್ವಾಮಿ ಈಗ ಸಾಗುತ್ತಿರುವ ವೇಗದಲ್ಲೇ ಸಾಗಿದರೆ, ರಾಜ್ಯದ ಜನತೆಗೆ ಕುಮಾರಸ್ವಾಮಿ 'ಜನನಾಯಕ'ನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.