ಬೆಂಗಳೂರಿನ ಮಹಿಳೆಯಿಂದ ಅಯೋಧ್ಯೆಗೆ ₹2.5 ಕೋಟಿ ಬೆಲೆಯ ಶ್ರೀರಾಮನ ಚಿನ್ನದ ಕಲಾಕೃತಿ ಅರ್ಪಣೆ
ಬೆಂಗಳೂರಿನ ಮಹಿಳೆಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭವ್ಯವಾದ ಬಾಲ ರಾಮನ ಕಲಾಕೃತಿಯನ್ನು ಅರ್ಪಿಸಿದ್ದಾರೆ. ಅಯೋಧ್ಯೆಯ ರಾಮಲಲ್ಲಾ ದೇವಾಲಯ ಆವರಣದಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಗಳಿಂದ ಕೂಡಿದ ಈ ಭವ್ಯವಾದ ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 12 ಅಡಿ ಎತ್ತರ 8 ಅಡಿ ಅಗಲ ಅಳತೆ ಮತ್ತು ಸುಮಾರು 800 ಕಿಲೋಗ್ರಾಂಗಳಷ್ಟು ತೂಕದ ಈ ಪ್ರತಿಮೆ ಕರ್ನಾಟಕದಿಂದ ಅಯೋಧ್ಯೆ ತಲುಪಿದೆ. ಇದರ ಅಂದಾಜು ಬೆಲೆ ಸುಮಾರು ₹2.5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಈ ಪವಿತ್ರ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರದ ಜಯಶ್ರೀ ಫಣೀಶ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ದಾನ ಮಾಡಿದ್ದಾರೆ. ಈ ವರ್ಣಚಿತ್ರವನ್ನು ಸಾಂಪ್ರದಾಯಿಕ ತಂಜಾವೂರು ಕಲಾ ಶೈಲಿಯಲ್ಲಿ ರಚಿಸಲಾಗಿದೆ. ಅದರ ಮೇಲೆ ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳನ್ನು ಅಳವಡಿಸಲಾದ ಚಿನ್ನದ ತಳಹದಿಯನ್ನು ಹೊಂದಿದ್ದು, ಅಸಾಧಾರಣ ಕಲಾತ್ಮಕ ಮತ್ತು ಪಾರಂಪರಿಕ ಮೌಲ್ಯದ ಅಮೂಲ್ಯ ಸಾಂಸ್ಕೃತಿಕ ಕಲಾಕೃತಿಯಾಗಿದೆ.

ಅಂಚೆ ಇಲಾಖೆಯಿಂದ ರವಾನೆ
ಹವ್ಯಾಸಿ ಕಲಾವಿದೆಯೂ ಆಗಿರುವ ಜಯಶ್ರೀ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಕಳೆದ ದಶಕದಲ್ಲಿ ತಮ್ಮ 10 ಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಈ ಬೃಹತ್ತಾದ ವರ್ಣಚಿತ್ರವನ್ನು ಅಂಚೆ ಇಲಾಖೆಯು ತನ್ನ ಲಾಜಿಸ್ಟಿಕ್ಸ್ ಪೋಸ್ಟ್ ಸೇವೆಯನ್ನು ಬಳಸಿಕೊಂಡು ಬೆಂಗಳೂರಿನಿಂದ ಅಯೋಧ್ಯೆಗೆ ಯಶಸ್ವಿಯಾಗಿ ಕೊಂಡೊಯ್ದಿದೆ ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯುರೋ (ಪಿಐಬಿ) ಮಾಹಿತಿ ಹಂಚಿಕೊಂಡಿದೆ.
1,900 ಕಿ.ಮೀ ಪ್ರಯಾಣ
ಈ ಕಲಾಕೃತಿಯನ್ನು ಬಹು-ಪದರದಿಂದ ಕವರ್ ಮಾಡಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮರದ ಕ್ರೇಟ್ನಲ್ಲಿ ಪ್ಯಾಕ್ ಮಾಡಲಾಗಿತ್ತು. ಸಾಗಣೆಯನ್ನು ನಿರಂತರ ಮೇಲ್ವಿಚಾರಣೆಯಲ್ಲಿ ಸಾಗಿಸಲಾಗಿದೆ. ಇಲಾಖಾ ಅಧಿಕಾರಿಗಳು ಪ್ರಯಾಣದುದ್ದಕ್ಕೂ ವಾಹನವನ್ನು ಬೆಂಗಾವಲು ಮಾಡಿದ್ದಾರೆ. ಈ ಕಲಾಕೃತಿಯನ್ನು ಹೊತ್ತ ವಾಹನವು ಡಿಸೆಂಬರ್ 17ರಂದು ಬೆಂಗಳೂರಿನಿಂದ ಹೊರಟು, ಸರಿಸುಮಾರು 1,900 ಕಿಲೋಮೀಟರ್ ಕ್ರಮಿಸಿ, ಡಿಸೆಂಬರ್ 22ರಂದು ಸುರಕ್ಷಿತವಾಗಿ ಅಯೋಧ್ಯೆಯನ್ನು ತಲುಪಿತು. ಕ್ರೇನ್ಗಳನ್ನು ಬಳಸಿಕೊಂಡು ಅತ್ಯಂತ ಎಚ್ಚರಿಕೆಯಿಂದ ಲೋಡ್ ಮತ್ತು ಅನ್ಲೋಡಿಂಗ್ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಬಹು ಅಂಚೆ ವಲಯಗಳ ನಡುವಿನ ನಿಕಟ ಸಮನ್ವಯದ ಮೂಲಕ ಈ ರೀತಿಯ ಮೊದಲ ಉನ್ನತ-ಮೌಲ್ಯದ ಲಾಜಿಸ್ಟಿಕ್ಸ್ ಪೋಸ್ಟ್ ರವಾನೆಯಾಗಿದೆ. ವಿಭಾಗೀಯ ಮುಖ್ಯಸ್ಥರು ಮತ್ತು ಹಿರಿಯ ಅಂಚೆ ಅಧಿಕಾರಿಗಳು ಬೆಂಗಳೂರು-ಹೈದರಾಬಾದ್-ನಾಗ್ಪುರ-ಜಬಲ್ಪುರ-ರೇವಾ-ಪ್ರಯಾಗರಾಜ್-ಅಯೋಧ್ಯಾ ಮಾರ್ಗದಲ್ಲಿ ಈ ಕಲಾಕೃತಿಯನ್ನು ಜಾಗರೂಕತೆಯಿಂದ ತಲುಪಿಸಿದ್ದಾರೆ. ಪ್ರಯಾಣದ ಕೊನೆಯ ಹಂತದಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿಯ ಹೊರತಾಗಿಯೂ, ರವಾನೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಸುರಕ್ಷಿತವಾಗಿ ತಲುಪಿಸಲಾಯಿತು. ಈ ವರ್ಣಚಿತ್ರವನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲಿ ಸ್ಥಾಪಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಯಶ್ರೀ ಅವರ ಹಿನ್ನೆಲೆ
ಜಯಶ್ರೀ ಫಣೀಶ್ ಬೆಂಗಳೂರು ನಿವಾಸಿಯಾಗಿದ್ದು, ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅಗ್ರಹಾರ ಗ್ರಾಮದವರು. ಇವರ ಪತಿ ಮೂಳೆ ತಜ್ಞರಾದ ಡಾ. ಪಣೀಶ್. ಜಯಶ್ರೀ ಅವರು ಅಯೋಧ್ಯೆಯ ಶ್ರೀಬಾಲ ರಾಮಮೂರ್ತಿಯನ್ನು ಮಾಡುವ ಸಂಕಲ್ಪ ಮಾಡಿಕೊಂಡು, 9 ತಿಂಗಳ ಹಿಂದೆಯೇ ಈ ಕೆಲಸಕ್ಕೆ ಕೈಹಾಕಿದರು. ಪ್ರತಿದಿನ 18 ಗಂಟೆಗಳ ಶ್ರಮದಿಂದ ಶ್ರೀರಾಮನನ್ನು ಜಪಿಸುತ್ತಾ ಚಿನ್ನ, ವಜ್ರ ಮತ್ತು ನವರತ್ನಗಳನ್ನು ತಂದು ಸಂಪೂರ್ಣ ತಮ್ಮ ಸ್ವಂತ ಖರ್ಚಿನಿಂದ ಮಾಡಿದ್ದಾರೆ. ಇದೇ ತಿಂಗಳ 28ರಂದು ಅಯೋಧ್ಯೆಯಲ್ಲಿ ಈ ಕಲಾಕೃತಿ ಅನಾವರಣಗೊಳ್ಳಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications