ರಾಮನಗರದಲ್ಲಿ ಹೆದ್ದಾರಿ ಜಲಾವೃತ: ಮೈಸೂರು-ಬೆಂಗಳೂರಿಗೆ ಪರ್ಯಾಯ ಮಾರ್ಗ ಅನುಸರಿಸಿ
ರಾಮನಗರ, ಆಗಸ್ಟ್ 29: ನಿರಂತರವಾಗಿ ಸುರಿದ ಅತ್ಯಧಿಕ ಮಳೆಯಿಂದಾಗಿ ರಾಮನಗರ ಜಿಲ್ಲೆ ಸಂಪೂರ್ಣ ದ್ವೀಪವಾಗಿದೆ. ರಾಮನಗರ, ಚನ್ನಪಟ್ಟಣದಲ್ಲಿ ಹೆದ್ದಾರಿಗಳು ಜಲಾವೃತಗೊಂಡಿದೆ. ಇದರಿಂದ ಮೈಸೂರು-ಬೆಂಗಳೂರು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಸಂಬಂಧ ಎರಡು ಪ್ರಮುಖ ನಗರಗಳಿಗೆ ಸಂಪರ್ಕಿಸಲು ವಾಹನ ಸವಾರರು ಅನಿವಾರ್ಯವಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.
ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಮಳೆಯಿಂದ ರಸ್ತೆ ಅಂಡರ್ಪಾಸ್, ಹೆದ್ದಾರಿ ಮುಳುಗಡೆಯಾಗಿದ್ದರಿಂದ ರಾಮನಗರ ಜಿಲ್ಲಾ ಪೊಲೀಸರು ವಾಹನ ಸವಾರರಿಗೆ ಸೋಮವಾರದಿಂದ ಮೂರು ದಿನ ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚಿಸಿದ್ದಾರೆ. ಪರ್ಯಾಯ ಮಾರ್ಗದ ಮೂಲಕ ಮೈಸೂರು, ಇಲ್ಲವೇ ಮೈಸೂರಿನಿಂದ ಬೆಂಗಳೂರು ತಲುಪಬಹುದು ಎಂದು ತಿಳಿಸಲಾಗಿದೆ.
Breaking: ರಾಮನಗರ ಹೆದ್ದಾರಿಯಲ್ಲಿ ಸಂಚಾರ ಅಪಾಯಕಾರಿ; ಎಚ್ಡಿಕೆ ಮನವಿ
ನಿರಂತ ಮಳೆಗೆ ರಾಮನಗರ, ಚನ್ನಪಟ್ಟಣ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳೆಲ್ಲ ಒಡೆದು ಕೋಡಿ ಹರಿದಿವೆ. ಕಿಲೋ ಮೀಟರ್ಗಟ್ಟಲೇ ಸಂಚಾರ ದಟ್ಣಣೆ ಉಂಟಾಗಿದೆ. ರಸ್ತೆಗಳು ಕೊಚ್ಚಿಹೋಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮೈಸೂರು-ಬೆಂಗಳೂರಿಗೆ ಸಂಚರಿಸುವ ಏಕೈಕ ಮಾರ್ಗ ಇದಾಗಿದೆ. ಸದ್ಯ ಪರಿಸ್ಥಿತಿಯಿಂದಾಗಿ ಈ ಭಾಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು ಮತ್ತು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಜನರ ಜೀವ ದೃಷ್ಟಿಯಿಂದ ಕೆಲವು ದಿನಗಳು ಬೇರೆ ಮಾರ್ಗ ಅನುಸರಿಸುವುದು ಅನಿವಾರ್ಯವಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ನದಿಯಂತಾದ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ಓಡಾಡುವ ಕಾರು, ಬಸ್, ದ್ವಿಚಕ್ರವಾಹನ ಸೇರಿದಂತೆ ಎಲ್ಲ ವಾಹನಗಳ ಸವಾರರು ಕೆಳಗಿನ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.
ಪರ್ಯಾಯ ಮಾರ್ಗಗಳು
ಮೊದಲ ಮಾರ್ಗ: ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಮೊದಲು ಹಾರೋಹಳ್ಳಿ, ಕನಕಪುರ ಮಾರ್ಗವಾಗಿ ಹಲಗೂರು ಮತ್ತು ಮಳವಳ್ಳಿ ಮಾರ್ಗದಲ್ಲಿ ಹಾದು ಬನ್ನೂರು ಮೂಲಕ ಮೈಸೂರು ಸೇರಬಹುದು.
ಎರಡನೇ ಮಾರ್ಗ: ಬೆಂಗಳೂರಿನಿಂದ ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಬೆಂಗಳೂರು-ಮಂಗಳೂರು ಹೆದ್ದಾರಿ ಮೂಲಕ ಯಡಿಯೂರು, ಬೆಳ್ಳೂರು ಕ್ರಾಸ್ ಹಾದು ಅಲ್ಲಿಂದ ನಾಗಮಂಗಲ, ಕೆಂಪನ ಕೊಪ್ಪಲು ಮೇಲುಕೋಟೆ ಸಮೀಪದ ಜಕ್ಕನಹಳ್ಳಿ, ಮಹದೇಶ್ವರಪುರ, ಕೆನ್ನಾಳು ಮತ್ತು ಶ್ರೀರಂಗಪಟ್ಟಣ ಮೂಲಕ ಮೈಸೂರು ತಲುಪಬಹುದು.
ಮೂರನೇ ಮಾರ್ಗ: ಬೆಂಗಳೂರಿನಿಂದ ತಾವರೆಕೆರೆ ಮಾರ್ಗವಾಗಿ, ಮಾಗಡಿ ಮಾರ್ಗವಾಗಿ ಸಾಗಿ ಬಸವನಗುಡಿ ಪಾಳ್ಯ ಅಲ್ಲಿಂದ ಹುಲಿಯೂರುದುರ್ಗಕ್ಕೆ ಬಂದು ನಂತರ ಮದ್ದೂರು ಮೂಲಕ ಶ್ರೀರಂಗಪಟ್ಟಣ, ಮೈಸೂರು ಸಂಪರ್ಕಿಸಬಹುದು. ಮೈಸೂರಿನಿಂದ ಬೆಂಗಳೂರಿಗೆ ಬರುವವರು ಇದೇ ಮಾರ್ಗಗಳನ್ನು ಅನುಸರಿಸಿಯೇ ಬೆಂಗಳೂರು ತಲಪುಬಹುದು.