ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಓಪನ್?
ಬೆಂಗಳೂರು, ಡಿಸೆಂಬರ್ 1: ಮುಂದಿನ ತಿಂಗಳು 2023ರ ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ನ ಬಹುತೇಕ ರಸ್ತೆಗಳು ತೆರೆಯಲಿದ್ದು, ಮುಂದಿನ ವರ್ಷ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಚ್ 2014ರಲ್ಲಿ ಕೇಂದ್ರ ಹೆದ್ದಾರಿ ಸಾರಿಗೆ ಸಚಿವಾಲಯವು ದೇಶಾದ್ಯಂತ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಎಕ್ಸ್ಪ್ರೆಸ್ ವೇಗೆ ನವೀಕರಿಸಲಾಗುವುದು ಎಂದು ಘೋಷಿಸಿತ್ತು. ಇದರಲ್ಲಿ ಮೈಸೂರು ಬೆಂಗಳೂರು ರಸ್ತೆ ಅವುಗಳಲ್ಲಿ ಒಂದಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಹೆದ್ದಾರಿಯನ್ನು (ಎನ್ಎಚ್ 275) ಆರು ಲೈನ್ ಎಕ್ಸ್ಪ್ರೆಸ್ವೇ ಸೇರಿದಂತೆ 10 ಲೈನ್ಗಳಾಗಿ ಪರಿವರ್ತಿಸುತ್ತಿದೆ. 117 ಕಿಮೀ ಹೆದ್ದಾರಿ ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗೆ ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಅಂದರೆ ಒಂದೂವರೆ ಗಂಟೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಡುವಿನ ಅಂತರವು ಸುಮಾರು 140 ಕಿ.ಮೀ. ಸಂಪೂರ್ಣ ವ್ಯಾಪ್ತಿ ಎರಡು ಟೋಲ್ ಗೇಟ್ಗಳನ್ನು ಹೊಂದುವ ನಿರೀಕ್ಷೆಯಿದೆ ಪ್ರತಿ ಟೋಲ್ಗೆ 200 ರಿಂದ 250 ರೂ. ಇರಲಿದೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 10 ಲೈನ್ಗಳ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ ಕುರಿತು ಟ್ವೀಟ್ ಮಾಡಿದ್ದರು.

8,172 ಕೋಟಿ ವೆಚ್ಚದ ಮೈಸೂರು ಬೆಂಗಳೂರು ಕಾರಿಡಾರ್
8,172 ಕೋಟಿ ವೆಚ್ಚದ ಮೈಸೂರು ಬೆಂಗಳೂರು ಕಾರಿಡಾರ್ ಶರ ವೇಗದಲ್ಲಿ ನಿರ್ಮಾಣವಾಗುತ್ತಿದ್ದು, 2022ರ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಗಡ್ಕರಿ ಹೇಳಿಕೆ ನೀಡಿದ್ದರು. ಆದರೆ ಭಾರೀ ಮಳೆ ಸೇರಿದಂತೆ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಯೋಜನೆಯ ಪ್ರಕಾರ, ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿರುತ್ತದೆ. ಕೆಲವೆಡೆ ಸೇತುವೆ ಹಾಗೂ ಅಂಡರ್ಪಾಸ್ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

40 ನಿಮಿಷಗಳಲ್ಲಿ ಮದ್ದೂರಿಗೆ ತಲುಪಬಹುದು
ಈ ಬಗ್ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಸ್ತುತ, ಮಂಡ್ಯ ಜಿಲ್ಲೆಯ ಮದ್ದೂರಿನವರೆಗೆ ಮುಖ್ಯ ರಸ್ತೆ ತೆರೆದಿದೆ. ಇದನ್ನು ಬೆಂಗಳೂರಿನ ಕುಂಬಳಗೋಡಿನಿಂದ 40 ನಿಮಿಷಗಳಲ್ಲಿ ತಲುಪಬಹುದು. ಇನ್ನು ನಾಲ್ಕೈದು ದಿನಗಳಲ್ಲಿ ಮದ್ದೂರು ಬಳಿ ಬೈಪಾಸ್ ತೆರೆಯಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಮಂಡ್ಯ ಬಳಿಯ ಬೈಪಾಸ್ ಬಳಕೆದಾರರಿಗೆ ಮುಕ್ತವಾಗಲಿದೆ. ಜನವರಿ ವೇಳೆಗೆ ಮೈಸೂರಿನವರೆಗೆ ರೈಲು ಮಾರ್ಗವನ್ನು ತೆರೆಯಲಾಗುವುದು. ಇದರ ಹೊರತಾಗಿ, ಫುಡ್ ಕೋರ್ಟ್ಗಳು ಮತ್ತು ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ನವೆಂಬರ್ ಅಂತ್ಯದೊಳಗೆ ಬೈಪಾಸ್ ಮುಕ್ತ
ಈಗಾಗಲೇ ರಾಮನಗರ ಜಿಲ್ಲಾ ವ್ಯಾಪ್ತಿಯ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀರಂಗಪಟ್ಟಣ ಬೈಪಾಸ್ ಎಕ್ಸ್ಪೆನ್ಷನ್ ಜಾಯಿಂಟ್ಸ್ ಕೆಲಸವೂ ಮುಕ್ತಾಯ ಹಂತದಲ್ಲಿದ್ದು, ನವೆಂಬರ್ ಅಂತ್ಯದೊಳಗೆ ಎರಡು ಬೈಪಾಸ್ಗಳನ್ನು ಸಂಚಾರಕ್ಕೆ ಮುಕ್ತ ಮಾಡುತ್ತೇವೆ. ಮಂಡ್ಯ ನಗರದ ಬೈಪಾಸ್ ಡಿಸೆಂಬರ್ ಅಂತ್ಯದೊಳಗೆ ಓಪನ್ ಮಾಡುತ್ತೇವೆ ಎಂದು ಹೇಳಿದ್ದರು.

ಕಾರುಗಳ ಮೇಲ್ಮೆವರೆಗೂ ನೀರು
ಇನ್ನೂ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಆದ ಅವಾಂತರಗಳಿಂದ ಶಾಸಕರು, ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದರು. ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಕಾರುಗಳ ಮೇಲ್ಮೆವರೆಗೂ ನೀರು ತುಂಬಿಕೊಂಡಿತ್ತು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಆ ವೇಳೆ ಕಾಮಗಾರಿ ವಾರಗಳ ಕಾಲ ವಿಳಂಬವಾಗಿತ್ತು.












Click it and Unblock the Notifications