'ಬೆಳಗಾವಿಯೇ ಏಕೆ, ದಾವಣಗೆರೆ, ಕಲಬುರಗಿ ರಾಜಧಾನಿಯಾಗಲಿ'
Recommended Video

ಬೆಂಗಳೂರು, ಅಗಸ್ಟ್ 03: ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸಲು ಮುಂದಾಗಿರುವುದಕ್ಕೆ ಶಿವಸೇನಾ ಗರಂ ಆಗಿದೆ. ಕೂಡಲೇ ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಈ ಪ್ರಕ್ರಿಯೆಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದೆ. ಇನ್ನೊಂದೆಡೆ, ಬೆಳಗಾವಿಯನ್ನೇ 2ನೇ ರಾಜಧಾನಿ ಮಾಡಬೇಕು ದಾವಣಗೆರೆ, ಕಲಬುರಗಿಯನ್ನು ಏಕೆ ಪರಿಗಣಿಸಬಾರದು ಎಂಬ ಕೂಗು ಎದ್ದಿದೆ.
'ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಮಾಡುತ್ತೇವೆ' ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಕೇಸ್ ಹಾಕುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಶಿವಸೇನಾ ಸೂಚಿಸಿದೆ.
ಬೆಳಗಾವಿಯನ್ನು ಕರ್ನಾಟಕದ ರಾಜಧಾನಿಯಾಗಿ ಮಾಡಬೇಕು ಎಂಬುದು 12 ವರ್ಷಗಳಿಂದ ಕೇಳಿ ಬಂದಿರುವ ಬೇಡಿಕೆಯಾಗಿದೆ. ಸದ್ಯಕ್ಕೆ ಸುವರ್ಣ ವಿಧಾನಸೌಧ ನಿರ್ಮಾಣವಾಗಿದ್ದು, ಚಳಿಗಾಲದಲ್ಲಿ ಅಧಿವೇಶನ ನಡೆಯುತ್ತಿದೆ. ಈ ಬಗ್ಗೆ ನಾನು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇನ್ನೊಂದೆಡೆ, ದಾವಣಗೆರೆ ಹಾಗೂ ಕಲಬುರಗಿದಿಂದ ಕೂಡಾ 2ನೇ ರಾಜಧಾನಿ ಸ್ಥಾನಕ್ಕೆ ಪೈಪೋಟಿ ಕೇಳಿ ಬಂದಿದೆ. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿ ಎಂದು ಹೇಳಿ ಆಗಸ್ಟ್ 02ರಂದು 13 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಎರಡನೇ ರಾಜಧಾನಿ ಏಕೆ?
ಕರ್ನಾಟಕಕ್ಕೆ ಎರಡನೇ ರಾಜಧಾನಿಯ ಅಗತ್ಯವಿಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಿದರೆ ಸಾಕು. ಮುಂಬೈ ಕರ್ನಾಟಕ ಹಾಗೂ ಹೈ-ಕ ಪ್ರದೇಶ ಅಭಿವೃದ್ದಿ ಸರ್ಕಾರದ ಆದ್ಯತೆಯಾಗಬೇಕು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಬೇಡಿಕೆ
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಪ್ರತಿಕ್ರಿಯಿಸಿ, ದಾವಣಗೆರೆ- ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಕರ್ನಾಟಕದ ಮಧ್ಯಭಾಗದಲ್ಲಿದ್ದು, ಹಲವಾರು ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಏಕೀಕರಣ ಹಾಗೂ ರಾಜ್ಯಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ದಾವಣಗೆರೆಯನ್ನು ರಾಜಧಾನಿ ಮಾಡುವ ಪ್ರಯತ್ನ ನಡೆದಿತ್ತಾದರೂ, ಸಫಲವಾಗಿರಲಿಲ್ಲ. ಉತ್ತಮವಾದ ರಸ್ತೆ, ರೈಲು ಸಂಪರ್ಕ ಹೊಂದಿದ್ದು, ಎಲ್ಲಾ ರೀತಿಯಲ್ಲೂ ದಾವಣಗೆರೆಯೇ ಸೂಕ್ತ ಎಂದಿದ್ದಾರೆ.

ಬಿಜೆಪಿ ನಾಯಕರೊಬ್ಬರ ಪ್ರತಿಕ್ರಿಯೆ
ಬೆಳಗಾವಿ ಒಮ್ಮೆ ಭೇಟಿ ಕೊಟ್ಟು ಅಲ್ಲಿನ ಮೂಲ ಸೌಕರ್ಯ ಹೇಗಿದೆ ನೋಡಲಿ, ಜನಾಭಿಪ್ರಾಯವೂ ಮುಖ್ಯ. ಬೆಳಗಾವಿ ನಗರದಿಂದ ಸುಮಾರು 13 ಕಿ.ಮೀ ದೂರದಲ್ಲುವ ಸುವರ್ಣ ವಿಧಾನಸೌಧಕ್ಕೆ ಹೋಗುವ ರಸ್ತೆಗಳೇ ಹಾಳಾಗಿವೆ. ಮೊದಲು ಮೂಲಸೌಕರ್ಯ ಸರಿಪಡಿಸಿ, ಅಗತ್ಯ ಸೌಲಭ್ಯಗಳನ್ನು ನೀಡಿ, ನಂತರ ನಿಮ್ಮ ಕನಸಿನ ಯೋಜನೆಯನ್ನು ಸಾಕಾರಗೊಳಿಸುವತ್ತ ಚಿಂತಿಸಿ ಎಂದಿದ್ದಾರೆ.

ಸುವರ್ಣ ವಿಧಾನಸೌಧ ಕ್ಕೆ ಶಿಫ್ಟ್ ಕಷ್ಟಕರ
ಸಿಎಂ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಶಿಫ್ಟ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ, ಸುವರ್ಣ ವಿಧಾನಸೌಧದ ಸ್ಥಿತಿಗತಿ ಬಗ್ಗೆ ಬಸವರಾಜ ರಾಯರೆಡ್ಡಿ ಸಮಿತಿ ಸಲ್ಲಿಸಿದ ಪ್ರಕಾರ, ಸುವರ್ಣ ವಿಧಾನಸೌಧ ಚಿಕ್ಕದಾಗಿದ್ದು, ಪ್ರಮುಖ ಸಚಿವಾಲಯಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದಂತೆ ಅಲ್ಲಿ ಕೂಡಾ ನಿರ್ವಹಿಸಲು ಕಷ್ಟವಾಗಲಿದೆ.
ಬೆಂಗಳೂರಿನಲ್ಲಿರುವ ಎಂಎಸ್ ಬಿಲ್ಡಿಂಗ್ ರೀತಿಯಲ್ಲಿ ಬೆಳಗಾವಿಯಲ್ಲೂ ಕಟ್ಟಡದ ಅಗತ್ಯವಿದೆ. ಸರ್ಕಾರ ಈಗ ರೈತರ ಸಾಲಮನ್ನಾ (48,000 ಕೋಟಿ ರು ಹೊರೆ) ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆ ತಂದಿದೆ.












Click it and Unblock the Notifications