ಖಾಸಗಿ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸರ್ಕಾರ
ಬೆಂಗಳೂರು, ನ.6 : ಹಣದ ಆಸೆಗಾಗಿ ಅವಧಿಗೂ ಮುನ್ನವೇ ಮಕ್ಕಳ ಪ್ರವೇಶಗಳನ್ನು ಮಾಡಿಕೊಳ್ಳುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಸರ್ಕಾರ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಮಾಡಿಕೊಳ್ಳುವ ಪ್ರವೇಶ ಕಾನೂನು ಬಾಹಿರ ಎಂದು ಪ್ರಕಟಿಸಿದೆ.
ಸರ್ಕಾರದ ಸುತ್ತೋಲೆಯಂತೆ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಖಾಸಗಿ ಶಾಲೆಗಳು ಮಕ್ಕಳ ಪ್ರವೇಶವನ್ನು ಮಾಡಿಕೊಂಡರೆ ಅದು ಕಾನೂನು ಬಾಹಿರ, ಅದನ್ನು ಅನೂರ್ಜಿತಗೊಳಿಸಲು ಅವಕಾಶವಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಈ ಮೂಲಕ ಖಾಸಗಿ ಶಾಲೆಗಳು ಮತ್ತು ಪೋಷಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.

ಸಾರವಜನಿಕ ಶಿಕ್ಷಣ ಇಲಾಖೆ 2014-15ರ ಶೈಕ್ಷಣಿಕ ವರ್ಷದ ಅಧಿಸೂಚನೆಯನ್ನು ಜನವರಿಯಲ್ಲಿ ಹೊರಡಿಸಲಿದೆ. ಆದರೆ, ಕೆಲವು ಖಾಸಗಿ ಶಾಲೆಗಳು ಅವಧಿಗೂ ಮುನ್ನವೇ ಮಕ್ಕಳ ಪ್ರವೇಶ ಪ್ರಕ್ರಿಯೆ ಆರಂಭಿಸಿರುತ್ತದೆ. ಹಣದ ಆಸೆಗಾಗಿ ಹೆಚ್ಚು ಡೋನೇಷನ್ ನೀಡಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ.
ಖಾಸಗಿ ಶಾಲೆಗಳ ಇಂತಹ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೂ ಮೊದಲು ನಡೆದ ಎಲ್ಲಾ ಪ್ರವೇಶಗಳು ಕಾನೂನು ಬಾಹಿರವಾರುತ್ತವೆ. ಸರ್ಕಾರ ಈ ಪ್ರವೇಶಗಳನ್ನು ರದ್ದು ಪಡಿಸುವ ಅಧಿಕಾರವನ್ನು ಹೊಂದಿದೆ.
ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವು ಖಾಸಗಿ ಶಾಲೆಗಳು ಮಕ್ಕಳ ಪರೀಕ್ಷೆ ಪ್ರಕ್ರಿಯೆ ಚಾಲನೆ ನೀಡಿದೆ. ಹೀಗೆ ಮಕ್ಕಳಿಗೆ ಪ್ರವೇಶ ನೀಡಿದ ಶಾಲೆಗಳು ಆರ್ ಟಿಇ ನಿಯಮವನ್ನು ಪಾಲನೆ ಮಾಡುವುದಿಲ್ಲ. ಆದ್ದರಿಂದ ಇಂತಹ ಸುತ್ತೋಲೆ ಹೊರಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications