ಚನ್ನಪಟ್ಟಣ ಚುನಾವಣೆ: ʼಈ ಯುದ್ಧದಲ್ಲಿ ಭೀಷ್ಮ, ದ್ರೋಣ, ಅರ್ಜುನ ಎಲ್ಲಾರೂ ಜತೆಯಲ್ಲೇ ಇದ್ದಾರೆʼ
ರಾಮನಗರ, ಅಕ್ಟೋಬರ್ 31: ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆಯ ಕಾವು ಜೋರಾಗಿದೆ. ಮಹಾಭಾರತದಲ್ಲಿ ಅಭಿಮನ್ಯು ಯುದ್ಧದಲ್ಲಿ ಒಬ್ಬನೇ ಆಗಿದ್ದ. ಅವನು ಶೂರನಾಗಿದ್ದ, ವೀರನಾಗಿದ್ದ. ಆದರೆ, ಕುತಂತ್ರದಿಂದ ಸೋಲಿಸಲಾಯಿತು, ಅರ್ಜುನನನ್ನು ಹೊರಗೆ ಮೋಸದಿಂದ ಕಳಿಸಿ ಕೊಲ್ಲಲಾಯಿತು. ಆದರೆ, ಆಧುನಿಕ ಅಭಿಮನ್ಯು ನಿಖಿಲ್ ಒಂಟಿಯಲ್ಲ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ನಿಖಿಲ್ ಅವರ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಬಿಸಿ ಪಾಟೀಲ್ ಮಾತನಾಡಿ, ಆಧುನಿಕ ಅಭಿಮನ್ಯು ನಿಖಿಲ್ ಒಂಟಿಯಲ್ಲ, ಭೀಷ್ಮ, ದ್ರೋಣ, ಅರ್ಜುನ ಎಲ್ಲರೂ ಜತೆಯಲ್ಲಿಯೇ ಇದ್ದಾರೆ. ಭೀಷ್ಮ ಎಂದರೆ ದೇವೇಗೌಡರು, ದ್ರೋಣ ಎಂದರೆ ಯಡಿಯೂರಪ್ಪ, ಅರ್ಜುನ ಎಂದರೆ ಕುಮಾರಸ್ವಾಮಿ ಅವರು ಎಂದು ಪಾಟೀಲರು ಬಣ್ಣಿಸಿದರು. ನಿಖಿಲ್ ಈ ಬಾರಿ ಸೋಲುವುದಿಲ್ಲ. ಅವರು ದೊಡ್ಡ ಮಟ್ಟದ ಬಹುಮತದೊಂದಿಗೆ ಗೆಲುವು ಸಾಧಿಸುತ್ತಾರೆ ಎಂದು ಬಿ ಸಿ ಪಾಟೀಲ್ ಅವರು ಭವಿಷ್ಯ ನುಡಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ತಿಟ್ಟಮಾರನಹಳ್ಳಿ, ಕುಂತೂರು ದೊಡ್ಡಿ, ಚಿಕ್ಕನದೊಡ್ಡಿ, ಪಟಲು, ಕಳ್ಳಿ ಹೊಸೂರು, ಮೈಲನಾಯಕನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಾಮಮಾರ್ಗದಲ್ಲಿ ಉಪ ಚುನಾವಣೆ ಗೆಲ್ಲಲು ಸಂಚು ರೂಪಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಕಳೆದ ಚುನಾವಣೆಯಲ್ಲಿ ರಾಮನಗರ ಸೇರಿ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಸೇರಿ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಲುಲು ಮಾಲ್ ನಲ್ಲಿ ಖರೀದಿ ಮಾಡುವ ₹3,000,₹5000 ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಮಾಲ್ ನವರಿಗೆ ಕೊಟ್ಟರೆ ಅವರು ವಾಪಸ್ ಕಳಿಸಿದ್ದಾರೆ. ಇದೇ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿಯೂ ಜಾರಿ ಮಾಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಕೇಂದ್ರ ಸಚಿವರು ಮನವಿ ಮಾಡಿದರು.
ನಿಖಿಲ್ ಕುಮಾರಸ್ವಾಮಿ ಅವರು ಎನ್ ಡಿಎ ಅಭ್ಯರ್ಥಿ ಆಗಿದ್ದು ದೇವರ ನಿರ್ಧಾರ ಎಂದು ಹೇಳಿದ ಕುಮಾರಸ್ವಾಮಿ ಅವರು; ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ವ್ಯಕ್ತಿ ಎನ್ ಡಿಎ ಅಭ್ಯರ್ಥಿ ಆಗಬೇಕಿತ್ತು. ಅವರು ಮೊದಲು ನನಗೆ ಟಿಕೆಟ್ ಬೇಕು ಎಂದು ಕೇಳಿದರು. ಆಮೇಲೆ, ಕಮಲ ಚಿಹ್ನೆ ಆದರೇನು, ತೆನೆ ಹೊತ್ತ ಮಹಿಳೆಯ ಚಿಹ್ನೆ ಆದರೇನು.. ಚುನಾವಣೆಗೆ ನಿಲ್ಲಲು ಸೈ ಎಂದು ಹೇಳಿಕೊಂಡಿದ್ದರು. ಅವರ ಮಾತುಗಳಿಗೆ ನಾವೂ ಮರುಳಾದೆವು. ಜೆಡಿಎಸ್ ಚಿಹ್ನೆ ಅಡಿಯಲ್ಲಿ ನಿಲ್ಲಲ್ಲ, ಆಮೇಲೆ ಕಮಲ ಚಿಹ್ನೆಯೇ ಬೇಕು ಹೊಸ ವರಸೆ ತೆಗೆದರು. ಅದಕ್ಕೂ ನಾವು ಒಪ್ಪಿದೆವು. ಹಿರಿಯರಾದ ಜೆಪಿ ನಡ್ದಾ, ಪ್ರಹ್ಲಾದ್ ಜೋಷಿ ಅವರು ನನಗೇ ಕರೆ ಮಾಡಿ ಆ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಹೇಳಿದರು. ಅವರ ಮಾತು ಮೀರದೆ ಅವರಿಗೆ ಟಿಕೆಟ್ ಕೊಡಲು ತೀರ್ಮಾನ ಮಾಡಿದೆ. ಆದರೆ, ಆ ವ್ಯಕ್ತಿ ಎಲ್ಲರಿಗೂ ಟೋಪಿ ಹಾಕಿ ಹೋದರು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಗೆ ಕ್ಷೇತ್ರದಲ್ಲಿ ಎಷ್ಟು ಕೆರೆ ಇದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಎಷ್ಟು ಕಡೆ ಭೇಟಿ ಕೊಟ್ಟಿದ್ದೇನೆ, ಎಷ್ಟು ಕೆರೆಗಳಿಗೆ ನೀರು ಹರಿಸಿದ್ದೇನೆ. ದಾಖಲೆಗಳಿವೆ, ಬೇಕಾದರೆ ನೋಡಿಕೊಳ್ಳಬಹುದು ಎಂದು ಕುಮಾರಸ್ವಾಮಿ ಹೇಳಿದರು.











Click it and Unblock the Notifications