ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಮರುಸೃಷ್ಟಿಗೆ ಮುಂದಾದ ಸರ್ಕಾರ
ಬೆಂಗಳೂರು, ಜನವರಿ 25: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಹನ್ನೆರಡನೇ ಶತಮಾನದ ಬಸವಣ್ಣನ ಅನುಭವ ಮಂಟಪದ ತದ್ರೂಪವನ್ನೇ ಮರುಸೃಷ್ಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಪ್ರಗತಿ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ್ದಾರೆ. ಅನುಭವ ಮಂಟಪದ ಪ್ರಾತ್ಯಕ್ಷಿಕೆಯನ್ನು ಇದೇ ಸಂದರ್ಭದಲ್ಲಿ ವೀಕ್ಷಣೆ ಮಾಡಿದರು.
ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪವನ್ನೇ ಮರುಸೃಷ್ಟಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವು ಸದಾ ಚಟುವಟಿಕೆಯಿಂದ ಕೂಡಿದ್ದು, ವಿಚಾರ ಮಂಥನ ನಡೆಯುತ್ತಿತ್ತು. ಪ್ರಸ್ತುತ ನಿರ್ಮಿಸುತ್ತಿರುವ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಸಭಾಂಗಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸೃಷ್ಟಿಸುವಂತೆ ಸೂಚನೆ ನೀಡಿದರು.
ಇದಲ್ಲದೆ ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೇಗಿತ್ತು ಎಂಬ ಅರಿವು ಮೂಡಿಸುವ ರೀತಿಯಲ್ಲಿ ಇದನ್ನು ನಿರ್ಮಿಸಬೇಕು. ಜೊತೆಗೆ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿ, ಹಾಲೋಗ್ರಾಫಿಕ್ ಪ್ರದರ್ಶನ ಮೊದಲಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪದ ಅನುಭವ ಜನರಿಗೆ ಆಗುವಂತೆ ಮಾಡಬೇಕು. ಕನಿಷ್ಠ 200 ಜನ ಕುಳಿತುಕೊಳ್ಳುವ ಎರಡು ಸಭಾಂಗಣ ನಿರ್ಮಾಣ ಮಾಡಿ ಎಂದು ಸೂಚಿಸಿದರು.
ದಿನದ 24 ತಾಸು ಕಾಲ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳಿ. ಕಟ್ಟಡದ ಗುಣಮಟ್ಟ ಉತ್ಕೃಷ್ಟವಾಗಿ ಇರಲಿ. ಅನುಭವ ಮಂಟಪದ ಸುರಕ್ಷತೆ ಮತ್ತು ನಿರ್ವಹಣೆ ಬಗ್ಗೆ ಆದ್ಯತೆ ನೀಡುವಂತೆ ಹಾಗೂ ಯೋಜನೆಯ ಭಾಗವಾಗಿ ಪರಿಗಣಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
Recommended Video
ಸಭೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ, ಮಾಜಿ ಶಾಸಕ ಬಸವರಾಜ ಪಾಟೀಲ್ ಸೇಡಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಮತ್ತು ಇತರರು ಉಪಸ್ಥಿತರಿದ್ದರು.