Yatnal: ಹೊಸ ಪಕ್ಷ ಕಟ್ಟುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಏನಂದ್ರು?
ಪಕ್ಷ ವಿರೋಧಿ ನಡೆ ಹಿನ್ನೆಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ತೊಡೆ ತಟ್ಟಿದ್ದ ಯತ್ನಾಳ್ ಅವರನ್ನು ದಿಢೀರನೆ ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಬಂಡಾಯ ನಾಯಕರಿಗೆ ಶಾಕ್ ಕೂಡ ನೀಡಿದೆ. ಇದರ ಬೆನ್ನಲ್ಲೇ ಯತ್ನಾಳ್ ಅವರ ಮುಂದಿನ ನಡೆ ಏನು? ಎಂಬ ಕುತೂಹಲ ಕೂಡ ಇತ್ತು. ಕೆಲವರು ಯತ್ನಾಳ್ ಅವರು ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಖುದ್ದು ಯತ್ನಾಳ್ ಅವರೇ ಮಹತ್ವದ ಮಾಹಿತಿ ನೀಡಿದ್ದಾರೆ.
ಮೂರು ನನಗೆ ಲಕ್ಕಿ ನಂಬರ್, ನನ್ನನ್ನು ಮೂರು ಬಾರಿ ಉಚ್ಛಾಟನೆ ಮಾಡಿದ್ದಾರೆ. ಮುಂದೆ ಏನಾತ್ತೋ ನೋಡಬೇಕು. ಇದರಿಂದ ಕಾರ್ಯಕರ್ತರಂತೂ ನಾಶ ಆಗುತ್ತಿದ್ದಾರೆ. ನಾನು ಯಾರಿಗೂ ಮನವರಿಕೆ ಮಾಡೋದಿಲ್ಲ. ಇಲ್ಲಿ ಜನ ಮೆಚ್ಚಿನ ನಾಯಕ ಯಾರೂ ಇಲ್ಲ, ವಿಜಯೇಂದ್ರನೂ ಸೇರಿದಂತೆ ಯಾರಿಗೂ ಮೂರು ಜನರನ್ನು ಸೇರಿಸುವ ಯೋಗ್ಯತೆಯೇ ಇಲ್ಲ. ಆದರೆ ನಾನು ಯಾವ ಬಾಡಿಗೆ ಜನರನ್ನು ಹೊಂದಿಲ್ಲ, ನಿನ್ನೆ ವಿಜಯಪುರದಲ್ಲೂ ನಾನು ಯಾರನ್ನೂ ಬಾಡಿಗೆ ಕೊಟ್ಟು ಕರೆಸಿಕೊಂಡಿಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಬಿಎಸ್ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಒತ್ತಡ ಹಾಕಿಯೇ ನನ್ನ ಉಚ್ಛಾಟನೆ ಮಾಡಿಸಿದ್ದಾರೆ. ಈಗ ಯಾವ ವೀರಶೈವ ಲಿಂಗಾಯತರೂ ಯಡಿಯೂರಪ್ಪ ಅವರ ಜೊತೆಯಲ್ಲಿಲ್ಲ. ಈ ಭ್ರಮೆಯಿಂದ ಹೈಕಮಾಂಡ್ ನಾಯಕರು ಮೊದಲು ಹೊರಬರಬೇಕು. ಹಿಂದೆ ರಾಮಾಯಣ, ಮಹಾಭಾರತದಲ್ಲೂ ಅವಮಾನ ಮಾಡಿರುವ ಘಟನೆಗಳು ನಡೆದಿವೆ. ನನಗೆ ಈ ಉಚ್ಛಾಟನೆಯಿಂದ ಮುಜುಗರ ಆಗುವ ಪ್ರಶ್ನೆಯೇ ಇಲ್ಲ. ನಾನು ಯಡಿಯೂರಪ್ಪ ಅವರ ಕುಟುಂಬವನ್ನು ಹೊರಗೆ ಕಳಿಸುವವರೆಗೂ ಬಿಡೋದಿಲ್ಲ ಎಂದು ಯತ್ನಾಳ್ ತೊಡೆ ತಟ್ಟಿದ್ದಾರೆ.
ಇನ್ನು ಹೊಸ ಪಕ್ಷ ಕಟ್ತಾರಾ? ಎಂಬ ಪ್ರಶ್ನೆಗೂ ಉತ್ತರಿಸಿರುವ ಅವರು, ಜನರೇ ಹೊಸ ಪಕ್ಷ ಕಟ್ಟಲು ನನಗೆ ಸಲಹೆ ಕೊಡ್ತಿದ್ದಾರೆ ಎಂದು ಯತ್ನಾಳ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ನಾನು ಯಾವ ಕಾರಣಕ್ಕೂ ಮತ್ತೆ ದೆಹಲಿಗೆ ಹೋಗೋದಿಲ್ಲ. ಉಚ್ಛಾಟನೆ ಮರುಪರಿಶೀಲನೆ ಮಾಡಿ ಎಂದು ಮನವಿಯೂ ಮಾಡಲ್ಲ. ನಾನು ಹಿಂದೂಗಳ ಪರವಾಗಿ ಹೋರಾಟ ಮಾಡ್ತೀನಿ, ಇದಕ್ಕಾಗಿ ಇಡೀ ರಾಜ್ಯವನ್ನ ಸುತ್ತುತ್ತೇನೆ. ಹೊಸ ಪಕ್ಷ ಕಟ್ಟುವಂತೆ ಜನಗಳೇ ನನಗೆ ಸಲಹೆ ಕೊಡುತ್ತಿದ್ದಾರೆ. ಏಕೆಂದರೆ ಇಲ್ಲಿ ಹಿಂದೂಗಳನ್ನ ರಕ್ಷಣೆ ಮಾಡುವವರು ಯಾರೂ ಇಲ್ಲ. ಉತ್ತರ ಕರ್ನಾಟಕ ಭಾಗದ ಬಗ್ಗೆ ಧ್ವನಿ ಎತ್ತುವವರೂ ಇಲ್ಲ. ನಮ್ಮ ಹಿಂದೆಯೂ ಒಂದು ದೊಡ್ಡ ಶಕ್ತಿಯೇ ಇದೆ. ಬಿವೈ ರಾಘವೇಂದ್ರ ಬಿಟ್ಟು ಎಲ್ಲ ಬಿಜೆಪಿ ಸಂಸದರು ನಮ್ಮ ಪರವಾಗಿದ್ದಾರೆ ಎಂದೂ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಉಚ್ಛಾಟನೆ ಬಳಿಕ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈಕಮಾಂಡ್ ಮಾಡದೆ ಇರುವುದು, ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣ ಎಂದು ದೂರಿದ್ದರು.
ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಬಿಜೆಪಿ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿ, ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡಲಿಲ್ಲ. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಉತ್ತಮ ನಿದರ್ಶನ ಎಂದು ಬೇಸರ ವ್ಯಕ್ತಪಡಿಸಿದ್ದರು.

ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿ ಅವನತಿ: ಯತ್ನಾಳ್
ಕಲ್ಯಾಣ ಕರ್ನಾಟಕದಲ್ಲಿ ಸದೃಢವಾಗಿದ್ದ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಎಂದು ಪಕ್ಷದ ಪ್ರಮುಖರೇ ವಿಶ್ಲೇಷಿಸಲಿ ಎಂದು ಕಿಡಿಕಾರಿದ್ದರು. ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನ ಸಂಘಟಿಸಿದ ಪರಿಣಾಮದಿಂದಲೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿದ್ದು ಎಂದಿದ್ದರು.
ಬಿಡಿಗಾಸಿಲ್ಲದೇ ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ಮಲ್ಲಿಕಾರ್ಜುನಪ್ಪ ಅವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನಡೆಸಿ, ಕಾರ್ಯಕರ್ತರ ಮನೋಬಲ ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನ ಸಂಘಟಿಸಿದ್ದು ಪಕ್ಷವನ್ನು ಮರೆಯಲಾಗದ ಮಾಣಿಕ್ಯ ಡಾ.ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದ್ದರು.
ಹಿಂದುತ್ವವಾದದ ಬಗ್ಗೆ ರಾಜಿ ಮಾಡಿಕೊಳ್ಳದೆ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪ ಅವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು ಮನ ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ "ಪೂಜ್ಯ"ರಿಂದಲ್ಲ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದರು.
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವು. ವಾಲ್ಮೀಕಿ ಹಗರಣ, ದಲಿತರ ಅನುದಾನದ ದುರ್ಬಳಕೆ ಖಂಡಿಸಿದ್ದು, ಹೋರಾಟ ರೂಪಿಸಿದ್ದು, ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಹಕ್ಕೆ ಜೆಪಿಸಿ ಅಧ್ಯಕ್ಷರಾದ ಜಗದಂಬಿಕಾ ಪಾಲ್ ಅವರು ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದರು.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಧೋರಣೆ, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ಕೂಡ ನಾವು. ಕರ್ನಾಟಕ ಲೋಕಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಅಭ್ಯರ್ಥಿಗಳ ಜೊತೆಗೆ ನಿಂತಿದ್ದು ನಾವೇ, ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ, ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ ಅಪಥ್ಯವಾಗಿದೆ ಎಂದು ತಿರುಗೇಟು ನೀಡಿದ್ದರು.
ಹೊಂದಾಣಿಕೆ ರಾಜಕಾರಣ ನಿಲ್ಲದಿದ್ದರೆ, ಬಿಜೆಪಿ ಪಕ್ಷ ಮಕಾಡೆ ಮಲಗುವುದು ಫಿಕ್ಸ್. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನಪರ ಕಾಳಜಿ ಇರುವ ನಾಯಕರಿಗೆ ಪಕ್ಷವು ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ, ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯಕತೆ ಪಕ್ಷಕ್ಕಿಲ್ಲ. ದೇಶ ಮೊದಲು, ಪಕ್ಷ ನಂತರ, Self last ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದರು.












Click it and Unblock the Notifications