ಯತ್ನಾಳ್ ಜನಪ್ರಿಯ ನಾಯಕ: ವಿಜಯೇಂದ್ರ ವಿರುದ್ಧ ಅರವಿಂದ್ ಬೆಲ್ಲದ್ ಆಕ್ರೋಶ?
ಬಿಜೆಪಿ ಹೈಕಮಾಂಡ್ ಕರ್ನಾಟಕ ಬಿಜೆಪಿ ನಾಯಕರಿಗೆ ಹೈವೋಲ್ಟೇಜ್ ಕರೆಂಟ್ ಕೊಟ್ಟು, ತಾವು ಸುಮ್ಮನಿಲ್ಲ ಅನ್ನೋ ಸಂದೇಶ ರವಾನಿಸಿದೆ. ಪಕ್ಷದಲ್ಲೇ ಇದ್ದು, ತಮ್ಮದೇ ಪಕ್ಷದ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದ ನಾಯಕರಿಗೆ ಈ ಮೂಲಕ ಆಘಾತ ಎದುರಾಗಿದೆ. ಅದರಲ್ಲೂ ಇಷ್ಟು ದಿನ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಗುರುತಿಸಿಕೊಂಡಿದ್ದ ಅಷ್ಟೂ ನಾಯಕರ ಬುಡ ಅಲ್ಲಾಡಿದ್ದು, ಮುಂದಿನ ಪರಿಸ್ಥಿತಿ ಏನು? ಅನ್ನೋ ಚಿಂತೆ ಅವರಿಗೆ ಈಗ ಶುರುವಾಗಿದೆ. ಇದೇ ಸಮಯದಲ್ಲಿ ಅರವಿಂದ್ ಬೆಲ್ಲದ್ ಏನು ಹೇಳಿದ್ದಾರೆ ಗೊತ್ತಾ?
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಯ ಬಗ್ಗೆ ಮಾತನಾಡಿರುವ ಅರವಿಂದ್ ಬೆಲ್ಲದ್ ಅವರು, ಯತ್ನಾಳ್ ಅವರು ಹಿರಿಯ ಹಾಗೂ ಜನಪ್ರಿಯ ನಾಯಕ. ಅನೇಕ ಹುದ್ದೆ ಅಲಂಕರಿಸಿ ನಿಭಾಯಿಸಿದವರು. ಯತ್ನಾಳ್ ಅವರು ನೇರ ನಡೆ & ನೇರ ನುಡಿಯಿಂದ ಪ್ರಸಿದ್ಧಿ ಪಡೆದ ವ್ಯಕ್ತಿ. ಇಂದು ಅವರು ಪಕ್ಷದಿಂದ ದೂರವಾಗಿರುವುದು ದುಖಃದ ವಿಷಯ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ವಿಜಯೇಂದ್ರ ವಿರುದ್ಧ ಅರವಿಂದ್ ಬೆಲ್ಲದ್ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರಾ? ಅನ್ನೋ ಅನುಮಾನ ಮೂಡಿದೆ.

ಮತ್ತೆ ಅಸಮಾಧಾನದ ಹೊಗೆ ಶುರು?
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಹಿನ್ನೆಲೆ ಮಾಧ್ಯಮಗಳ ಜೊತೆ ಮಾತನಾಡಿದ ಬೆಲ್ಲದ್, ಬಸನಗೌಡ ಯತ್ನಾಳ ಅವರು ಪಕ್ಷದಿಂದ ದೂರವಾಗಿರುವುದು ನೋವುಂಟು ಮಾಡಿದೆ ಎಂದಿದ್ದಾರೆ. ಅಲ್ಲದೆ ಪಕ್ಷದ ಯಾವುದೇ ಕಾರ್ಯಕರ್ತ ಈ ರೀತಿ ದೂರ ಹೋದಾಗ ನೋವಾಗುತ್ತದೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಬೆನ್ನಿಗೆ ನಿಲ್ಲುವ ಮೂಲಕ, ಬಿ.ವೈ. ವಿಜಯೇಂದ್ರ ವಿರುದ್ಧ ಬೇಸರ ಹೊರಗಡೆ ಹಾಕಿದ್ದಾರಾ? ಎಂಬ ಚರ್ಚೆ ನಡೆಯುತ್ತಿರುವುದು ಮತ್ತೆ ಅಸಮಾಧಾನದ ಹೊಗೆ ಎಬ್ಬಿಸಿದೆ.
ಬಿಜೆಪಿ ಬಂಡಾಯ ಈಗಲಾದರೂ ತಣ್ಣಗಾಗುತ್ತಾ?
ಯತ್ನಾಳ್ ಉಚ್ಛಾಟನೆ ಮೂಲಕ ಹೊಸ ಸಂಚಲನ ಈಗ ಸೃಷ್ಟಿಯಾಗಿದೆ. ಹಾಗೇ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬ ಅದೆಷ್ಟು ಪ್ರಬಲವಾಗಿದೆ? ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಬಿಜೆಪಿ ಹೈಕಮಾಂಡ್ ನಾಯಕರಿಂದ ಕೂಡ ಸ್ಪಷ್ಟ ಸಂದೇಶ ರವಾನೆ ಆಗಿದೆ, ಯಡಿಯೂರಪ್ಪ ಅವರ ಪುತ್ರನಿಗೆ ಪರೋಕ್ಷವಾಗಿ ಮತ್ತೆ ಮಣೆ ಹಾಕಿದ್ದಾರೆ. ಈ ನಡುವೆ ಎಸ್.ಟಿ.ಸೋಮಶೇಖರ್ & ಶಿವರಾಂ ಹೆಬ್ಬಾರ್ಗೆ ಕೂಡ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ನೋಟಿಸ್ ನೀಡಿ, ಈ ಇಬ್ಬರೂ ನಾಯಕರಿಗೂ ಬಿಜೆಪಿ ಹೈಕಮಾಂಡ್ ವಾರ್ನಿಂಗ್ ಕೊಟ್ಟಿದೆ. ಆದರೆ ಇಷ್ಟಕ್ಕೇ ಈಗ ಬಂಡಾಯ ತಣ್ಣಗಾಗುತ್ತಾ? ಎಂಬ ಅನುಮಾನ ಮೂಡಿದೆ.












Click it and Unblock the Notifications