ಜೆಪಿ ನಗರ ಕಾರ್ಪೊರೇಟರ್ ಮನೆಯಲ್ಲಿ ಹುಚ್ಚನ ಸಾಹಸ
ನಿನ್ನೆ ರಾತ್ರಿ 2 ಗಂಟೆಯಲ್ಲಿ ಸದರಿ ವ್ಯಕ್ತಿ ಜೆಪಿ ನಗರದ 18ನೇ ಕ್ರಾಸ್ ನಲ್ಲಿರುವ ಕಾರ್ಪೊರೇಟರ್ ಮನೆಯ ನಾಲ್ಕನೆಯ ಮಹಡಿಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಕಂಡ ಸ್ಥಳೀಯರು ಆ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ, ಭಯಭೀತಗೊಂಡಿದ್ದರು.
ಆದರೆ ಆತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದ. ಇದರಿಂದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿ, ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳುವಂತೆ ಕಾರ್ಪೊರೇಟರ್ ಸೋಮಶೇಖರ್ ಅವರು ಕೋರಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆ ವ್ಯಕ್ತಿಯನ್ನು ಕೆಳಗಿಳಿಯುವಂತೆ ಸೂಚಿಸಿದರು. ಆದರೆ ಅವನು ಅದ್ಯಾವುದಕ್ಕೂ ಜಗ್ಗದೆ ತನ್ನ ಬಳಿಯಿದ್ದ ಚಾಕುವಿನಿಂದ ಪ್ರಾಣಾಪಾಯ ತಂದುಕೊಳ್ಳುವ ಭೀತಿ ಹುಟ್ಟುಹಾಕಿದ.
ಪೊಲೀಸರು ಅವನನ್ನು ಕಾಪಾಡಲು ಹರಸಾಹಸಪಟ್ಟರು. ಮನೆಯ ರಸ್ತೆ ಬದಿ ದೊಡ್ಡ ಬಲೆ ಬೀಸಿ ಅವನಿಗಾಗಿ ಕಾದುಕುಳಿತರು. ಈ ಮಧ್ಯೆ, ಒಬ್ಬರು ಮನೆಯ ಮಹಡಿಯೇರಿ ಅವನನ್ನು ಹಿಡಿಯಲು ಯತ್ನಿಸಿದರು.
ಆ ವೇಳೆ ಗಾಬರಿಗೊಂಡ ಆತ ಸೀದಾ ಕೆಳಗೆ ಹಾರಿದ್ದಾನೆ. ಆದರೆ ಕೆಳಗೆ ಬೃಹತ್ ನೆಟ್ ಇದ್ದುದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ. ತಕ್ಷಣವೇ ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಮೊದಲು ಸ್ಥಳೀಯ ಚಿರಾಗ್ ಆಸ್ಪತ್ರೆಗೆ ಆ ನಂತರ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊಡಗು ವಿರಾಜಪೇಟೆಯಲ್ಲಿ ಹುಲಿಗೆ ಮತ್ತೊಬ್ಬ ಬಲಿ : ರಾಜ್ಯದಲ್ಲಿ ಅರಣ್ಯ ಭಾಗಗಳಲ್ಲಿ ಹುಲಿಗಳ ಕಾಟ ಹೆಚ್ಚಾಗುತ್ತಿದೆ. ಯುವ ಅರಣ್ಯ ವೀಕ್ಷಕನೊಬ್ಬನನ್ನು ಶುಕ್ರವಾರ ಸಂಜೆ ಹುಲಿ ತಿಂದು ತೇಗಿದೆ. ಸುರೇಶ್ (27) ಮೃತ ಯುವಕ. ಮೂಲತಃ ಕೊಡಗಹು ಜಿಲ್ಲೆ ತಿತಿಮತಿಯವನಾದ ಸುರೇಶ್, ಒಂದೂವರೆ ವರ್ಷದ ಹಿಂದೆ ಅರಣ್ಯ ಇಲಾಖೆಗೆ ಸೇರಿದ್ದ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಬಿಎಂಸಿ ಕ್ಯಾಂಪ್ ನಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ನಿನ್ನೆ ತಡ ಸಂಜೆ ಬಹಿರ್ದೆಸೆಗೆಂದು ಅರಣ್ಯ ಭಾಗದತ್ತ ತೆರಳಿದಾಗ ಹುಲಿ ಆತನ ಮೇಲೆ ದಾಳಿ ಮಾಡಿದೆ. ಹುಲಿಯು ಆತನ ಕೈ ಕಾಲು ತಿಂದು ಹಾಕಿದೆ. ಇದರಿಂದ ಸುರೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.