ಮಹದಾಯಿಗಾಗಿ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?
ಬೆಂಗಳೂರು, ಜುಲೈ 29: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ಖಂಡಿಸಿ ಸಾವಿರಾರು ಸಂಘಟನೆಗಳು ಶನಿವಾರ (ಜುಲೈ 30)ದಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಬಂದ್ ದಿನ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಹಾಲು, ಔಷಧ, ಆಂಬ್ಯುಲೆನ್ಸ್, ಆಸ್ಪತ್ರೆ ಸೇವೆಗಳು ಎಂದಿನಂತೆ ಇರಲಿವೆ.
ಈ ಬಂದ್ ಗೆ ಕನ್ನಡ ಚಿತ್ರೋದ್ಯಮ, ರೈತ ಸಂಘಟನೆಗಳು, ಆಟೋ ಚಾಲಕರು, ಹೋಟೆಲ್ ಮಾಲೀಕರ ಸಂಘ, ಟ್ರಕ್, ಲಾರಿ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಸೇರಿದಂತೆ 1250ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತವಾಗಿವೆ.
ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳ ಸಂಚಾರ ಕೂಡಾ ವಿರಳವಾಗಲಿದ್ದು, ಬಂದ್ ಪರಿಸ್ಥಿತಿ ನೋಡಿಕೊಂಡು ಬಸ್ ಗಳು ರಸ್ತೆಗಳಿಯಲಿವೆ. ಬಂದ್ ಕುರಿತಂತೆ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜು ಅವರು ಮಾತನಾಡಿ, ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ಬಂದ್ ನಡೆಯಲಿದೆ. ಅಖಿಲ ಕರ್ನಾಟಕ ಬಂದ್ ಯಶಸ್ವಿಯಾಗಲಿದೆ ಎಂದಿದ್ದಾರೆ. [ಪೂರ್ಣ ವಿವರ ಇಲ್ಲಿ ಓದಿ]
ಬೆಂಗಳೂರಿನಲ್ಲಿ ಪ್ರತಿಭಟನೆ: ವಿವಿಧ ಸಂಘಟನೆಗಳು ಶನಿವಾರ ಬೆಳಗ್ಗೆ 10ಗಂಟೆಗೆ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ) ನಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.
ಶಾಲಾ ಕಾಲೇಜಿಗೆ ರಜೆ?: ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಿಕ್ಕಂತೆ ಯಾವೆಲ್ಲ ಸೇವೆಗಳು ಲಭ್ಯವಿರುತ್ತದೆ. ಬೆಂಬಲ ನೀಡಿರುವ ಪ್ರಮುಖ ಸಂಘಟನೆಗಳ ವಿವರ ಮುಂದೆ ಓದಿ...

ಬಂದ್ ಗೆ ಬಂಬಲ ನೀಡಿದ ಸಂಘಟನೆಗಳು
ವಿವಿಧ ಕನ್ನಡಪರ ಸಂಘಟನೆಗಳು, ಫಿಲ್ಮಂ ಚೇಂಬರ್, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮಹಿಳಾ ಸಂಘಟನೆಗಳು, ಆಟೋ ಚಾಲಕರು, ಕ್ಯಾಬ್ ಚಾಲಕರ ಸಂಘ, ಆಟೋ ಚಾಲಕರು, ಹೋಟೆಲ್, ಲಾರಿ ಸಂಘಟನೆಗಳು ಸೇರಿದಂತೆ 1,250 ಸಂಘಟನೆಗಳು ಬೆಂಬಲ ನೀಡಿವೆ.

ಬಂದ್ ಗೆ ಬೃಹತ್ ಬೆಂಬಲ ಸಿಕ್ಕಿದೆ
ಸ್ಯಾಂಡಲ್ವುಡ್ ಕಲಾವಿದರು, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ಸೇನೆ, ಕನ್ನಡ ಪರ ಹೋರಾಟಗಾರರ ಸಂಘ, ರೈತ ಸಂಘಟನೆಗಳು, ವಕೀಲರ ಸಂಘ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸರ್ಕಾರಿ ನೌಕರರ ಸಂಘ, ಉತ್ತರ ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗೂಡ್ಸ್ ಟ್ರಕ್ ಓನರ್ಸ್ ಅಸೋಸಿಯೇಶನ್, ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಬಿಸಿಯೂಟ ನೌಕರರು, ಏರ್ ಪೋರ್ಟ್ ಟ್ಯಾಕ್ಸಿ ಮುಂತಾದ ಸಂಗಟನೆಗಳು

ಶಾಲಾ-ಕಾಲೇಜುಗಳಿಗೆ ರಜೆ ಬಗ್ಗೆ
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದು, ಶಾಲಾ ಮುಖ್ಯೋಪಾಧ್ಯಯರ ಮೂಲಕ ಪೋಷಕರಿಗೆ ಮಾಹಿತಿ ನೀಡಲಿದ್ದಾರೆ. ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಇನ್ನೂ ಶಾಲೆ ಕಾಲೇಜಿಗೆ ರಜೆ ಘೋಷಿಸಿಲ್ಲ.

ಆಟೋರಿಕ್ಷಾ ಹಾಗೂ ಖಾಸಗಿ ಬಸ್ ಇರಲ್ಲ
ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬಂದ್ಗೆ ಬೆಂಬಲ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆಗೆ ಬೆಂಬಲಿತ ಆಟೋರಿಕ್ಷಾ ಮಾಲೀಕರ ಸಂಘಗಳು ಬಂದ್ ಬೆಂಬಲ ನೀಡಿರುವುದರಿಂದ ಕರವೇ ಆಟೋ ಚಾಲಕರ ಸಂಘವೂ ಸಂಚಾರ ಸ್ಥಗಿತಗೊಳಿಸಲಿದೆ. ಆದ್ದರಿಂದ, ಆಟೋಗಳು ರಸ್ತೆಗೆ ಇಳಿಯುವುದು ಅನುಮಾನ. ಇನ್ನು ಖಾಸಗಿ ಬಸ್ ಮಾಲೀಕರು ಕೂಡಾ ಬಂದ್ ಗೆ ಕೈಜೋಡಿಸಿದ್ದಾರೆ.

ಈಶಾನ್ಯ ಭಾಗದಲ್ಲಿ ಸರ್ಕಾರಿ ಬಸ್ ಇರಲ್ಲ
ಎಐಟಿಯುಸಿ ಕಾರ್ಯದರ್ಶಿ ನಾಗರಾಜ್ ಹೇಳುವ ಪ್ರಕಾರ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಬಸ್ ಸೇವೆ ಶನಿವಾರ ಸ್ಥಗಿತಗೊಳ್ಳಲಿದೆ. ಆದರೆ, ಈ ಬಗ್ಗೆ ಸಾರಿಗೆ ಸಂಸ್ಥೆಗಳು ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಬೆಂಗಳೂರು ಸೇರಿದಂತೆ ನಗರ ಸಾರಿಗೆ ಹೊಂದಿರುವ ಪಟ್ಟಣಗಳಲ್ಲಿ ಕೆಲ ಹೊತ್ತು ಬಸ್ ಸೇವೆ ಲಭ್ಯ. ಪರಿಸ್ಥಿತಿ ನೋಡಿಕೊಂಡು ರಸ್ತೆಗೆ ಬಸ್ ಬರಲಿವೆ. ವೊಲ್ವೋ ಬಸ್ ಗೆ ಕಾಯಬೇಡಿ.

ಹೋಟೆಲ್ ಬಂದ್
ಕರ್ನಾಟಕ ಬಂದ್ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವಂತೆ ಕನ್ನಡ ಒಕ್ಕೂಟ ಮನವಿ ಮಾಡಿದೆ. ಹೋಟೆಲ್ ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿದೆ. ಆದ್ದರಿಂದ, ಹೋಟೆಲ್ಗಳು ಬಾಗಿಲು ತೆರೆಯುವುದು ಅನುಮಾನ. ಸಣ್ಣ ಪುಟ್ಟ ರಸ್ತೆ ಬದಿ ಹೊಟೆಲ್ ಗಳು ತೆಗೆದಿದ್ದರೆ ನಿಮ್ಮ ಲಕ್, ಆಸ್ಪತ್ರೆಗಳಲ್ಲಿನ ಕ್ಯಾಂಟೀನ್ ನಲ್ಲಿ ಊಟ ಲಭ್ಯ

ಏರ್ ಪೋರ್ಟ್ ಟ್ಯಾಕ್ಸಿ ಬಂದ್
ಏರ್ ಪೋರ್ಟ್ ಟ್ಯಾಕ್ಸಿ, ಲಾರೀ ಮಾಲೀಕರು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ. ಆದ್ದರಿಂದ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಬ್ಯಾಂಕ್, ಅಂಚೆ ಕಚೇರಿ ಇರಲ್ಲ
ಅಂಚೆ ಕಚೇರಿಗಳು ಎಂದಿನಂತೆ ಬಾಗಿಲು ತೆರೆದಿರುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಬ್ಯಾಂಕ್ಗಳಲ್ಲಿ ತಿಂಗಳ 2 ಮತ್ತು 4 ನೇ ಶನಿವಾರವನ್ನು ಸಂಪೂರ್ಣ ರಜಾ ದಿನವನ್ನಾಗಿ ಘೋಷಿಸಲು ಒಪ್ಪಿಗೆ ನೀಡಿದೆ. ಆದ್ದರಿಂದ ಬ್ಯಾಂಕ್ ತೆರೆಯುವುದಿಲ್ಲ.

ಏನಿರುತ್ತೆ? ಕ್ವಿಕ್ ಲುಕ್
ಆಂಬ್ಯುಲೆನ್ಸ್, ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಎಟಿಎಂ ಸೇರಿದಂತೆ ಅಗತ್ಯ ವಸ್ತುಗಳ ಸೇವೆಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹಾಲಿನ ವಾಹನ, ತರಕಾರಿ ಮಾರುಕಟ್ಟೆ, ಹಾಪ್ ಕಾಮ್ಸ್ ಕೆಲ ಕಾಲ ಓಪನ್ ಇರುತ್ತೆ

ಏನಿರಲ್ಲ?
ಸಿನಿಮಾ ಥೇಯೇಟರ್, ಮಾಲ್, ಎಪಿಎಂಸಿ ಯಾರ್ಡ್, ಬಾರ್ & ರೆಸ್ಟೋರೆಂಟ್, ಹೋಟೆಲ್, ಎಲೆಕ್ಟ್ರಾನಿಕ್ಸ್ ಅಂಗಡಿ, ಬೀದಿ ವ್ಯಾಪಾರಿಗಳು, ವ್ಯಾಪಾರಿ ಮಳಿಗೆಗಳು ಇರುವುದಿಲ್ಲ. ಪೆಟ್ರೋಲ್ ಬಂಕ್ ಕೂಡಾ ಹಲವೆಡೆ ಬಂದ್ ಆಗಿರುವ ಸಾಧ್ಯತೆ












Click it and Unblock the Notifications