ಬಳ್ಳಾರಿಗೆ ಹೋಗಲು ಅವಕಾಶ ಕೇಳಿದ್ದ ರೆಡ್ಡಿ ಅರ್ಜಿ ವಾಪಸ್
ಬೆಂಗಳೂರು, ನವೆಂಬರ್ 27 : ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಸಿಬಿಐ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡಬಾರದು ಎಂದು ಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿತ್ತು.
ಶುಕ್ರವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಅರ್ಜಿಯನ್ನು ವಾಪಸ್ ಪಡೆಯುತ್ತಿರುವುದಾಗಿ ರೆಡ್ಡಿ ಪರವಕೀಲರು ಕೋರ್ಟ್ಗೆ ತಿಳಿಸಿದರು. [ಬಳ್ಳಾರಿಗೆ ತೆರಳಲು ಅನುಮತಿ ಕೋರಿದ ರೆಡ್ಡಿ]

ಬಳ್ಳಾರಿಗೆ ಭೇಟಿ ನೀಡಲು ಅನುಮತಿ ಕೊಡುವ ಅರ್ಜಿಯ ವಿಚಾರಣೆಗೆ ಇದು ಸೂಕ್ತಕಾಲವಲ್ಲ. ಈಗ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ನಂತರ ರೆಡ್ಡಿ ಪರ ವಕೀಲರು ತಾವು ಸಲ್ಲಿಕೆ ಮಾಡಿರುವ ಅರ್ಜಿಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದರು. [ಜನಾರ್ದನ ರೆಡ್ಡಿಗೆ ನವೆಂಬರ್ 30ರ ತನಕ ಬಿಡುಗಡೆ ಇಲ್ಲ]
ರೆಡ್ಡಿ ಜೈಲಿನಲ್ಲಿ : ಜನಾರ್ದನ ರೆಡ್ಡಿ ಅವರನ್ನು ಕರ್ನಾಟಕ ಲೋಕಾಯುಕ್ತದ ಎಸ್ಐಟಿ ಬಂಧಿಸಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಮುಗಿದಿದ್ದು, ನವೆಂಬರ್ 30ರಂದು ತೀರ್ಪು ಹೊರಬೀಳಲಿದೆ. ಆದ್ದರಿಂದ, ರೆಡ್ಡಿ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿರುವ ಸಾಧ್ಯತೆ ಇದೆ. [ಡಿ.3ರ ತನಕ ಗಾಲಿ ಜನಾರ್ದನ ರೆಡ್ಡಿಗೆ ಜೈಲು]
ಷರತ್ತು ವಿಧಿಸಲಾಗಿತ್ತು : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರು, ಸುಮಾರು ಮೂರುವರೆ ವರ್ಷಗಳ ನಂತರ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. 2015ರ ಜನವರಿ 20ರಂದು ಸುಪ್ರೀಂಕೋರ್ಟ್ ಓಬಳಾಪುರಂ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಜಾಮೀನು ನೀಡುವಾಗ ಬಳ್ಳಾರಿ, ಆಂಧ್ರ ಪ್ರದೇಶದ ಕಡಪಾ ಮತ್ತು ಅನಂತಪುರಕ್ಕೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು.
ಇದರಿಂದಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡ ರೆಡ್ಡಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications