ಬಳ್ಳಾರಿ ರಾಜಕೀಯ : ಹಲವು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಅಂತಿಮ?
ಬಳ್ಳಾರಿ, ಜನವರಿ 11 : ಅಸಮಾಧಾನಗಳ ನಡುವೆಯೇ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆದಿದೆ. ಹೊಸಪೇಟೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಿಂದ ಶಾಸಕ ಆನಂದ್ ಸಿಂಗ್ ದೂರ ಉಳಿದಿದ್ದರು. ಆ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಪರಿವರ್ತನಾ ಯಾತ್ರೆಯ ಉಸ್ತುವಾರಿಯನ್ನು ಸಂಸದ ಶ್ರೀರಾಮುಲು ಹೊತ್ತುಕೊಂಡಿದ್ದರು. ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಕನಿಷ್ಠ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಪಣ ತೊಟ್ಟಿದ್ದಾರೆ.
ಬಿಜೆಪಿ ತೊರೆಯಲಿದ್ದಾರೆ ಆನಂದ್ ಸಿಂಗ್?
ಸಂಡೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ ಹೆಚ್ಚಿದ್ದು, ರಾಜ ಮನೆತನದ ಮಾಜಿ ಸಚಿವ ಎಂ.ವೈ.ಘೋರ್ಪಡೆ ಪುತ್ರ ಕಾರ್ತಿಕ್ ಘೋರ್ಪಡೆ ಬಿಜೆಪಿ ಸೇರಲಿದ್ದಾರೆ. ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿಯೇ ಅವರು ಪಕ್ಷ ಸೇರಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದು ರದ್ದಾಯಿತು.
ಬಿ.ನಾಗೇಂದ್ರ ಕಾಂಗ್ರೆಸ್ಗೆ, ಶ್ರೀರಾಮುಲು ಹೇಳಿದ್ದೇನು?
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಜಾಮೀನಿನ ಮೇಲೆ ಹೊರ ಬಂದಿರುವುದು ಜಿಲ್ಲೆಯ ರಾಜಕಾರಣದ ಬಗ್ಗೆ ಕುತೂಹಲ ಉಂಟು ಮಾಡಿದೆ. ಅವರು ಪಕ್ಷದಲ್ಲಿ ಸಕ್ರಿಯವಾಗಿಲ್ಲ. ಆದರೆ, ಚುನಾವಣೆ ವೇಳೆಗೆ ಅವರು ಸಕ್ರಿಯರಾಗಲಿದ್ದಾರೆಯೇ ಕಾದು ನೋಡಬೇಕು.
ಬಳ್ಳಾರಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ನಡೆದ ಬಳಿಕ ಕೆಲವು ಅಭ್ಯರ್ಥಿಗಳಂತು ಅಂತಿಮವಾಗಿದ್ದಾರೆ. ಆದರೆ, ಆನಂದ ಸಿಂಗ್ ಪಕ್ಷದಲ್ಲಿರುತ್ತಾರೆಯೇ?, ಇಲ್ಲವೇ? ಎಂಬುದರ ಮೇಲೆ ಹೊಸಪೇಟೆ ಕ್ಷೇತ್ರದ ರಾಜಕೀಯ ನಿರ್ಧಾರವಾಗಲಿದೆ.
ಸೋಮಶೇಖರ ರೆಡ್ಡಿ ಅಭ್ಯರ್ಥಿ
ಬಳ್ಳಾರಿ ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಸದ್ಯ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ. ಅನಿಲ್ ಲಾಡ್ ಕಳೆದ ಚುನಾವಣೆಯಲ್ಲಿ 52,098 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಸುರೇಶ್ ಬಾಬು
2018ರ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಸುರೇಶ್ ಬಾಬು ಅವರಿಗೆ ಟಿಕೆಟ್ ಖಚಿತವಾಗಿದೆ. ಕ್ಷೇತ್ರದ ಹಾಲಿ ಶಾಸಕರು ಅವರೇ. ಕಳೆದ ಚುನಾವಣೆಯಲ್ಲಿ 70,858 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ.
ಬಿಎಸ್ವೈ ಅಭ್ಯರ್ಥಿ ಘೋಷಿಸಿದ್ದಾರೆ
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ನಡೆದಾಗಲೇ ಯಡಿಯೂರಪ್ಪ ಕೆ.ನೇಮಿರಾಜ ನಾಯ್ಕ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು 51,847 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ನ ಭೀಮಾ ನಾಯಕ್.
ಸೋಮಲಿಂಗಪ್ಪ
ಸಿರಗುಪ್ಪ ಕ್ಷೇತ್ರಕ್ಕೆ ಎಂ.ಎಸ್.ಸೋಮಲಿಂಗಪ್ಪ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ಅವರು 43,676 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕ್ಷೇತ್ರದ ಶಾಸಕರು ಕಾಂಗ್ರೆಸ್ನ ಬಿ.ಎಂ.ನಾಗರಾಜ್.
ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರ
2013ರ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಜಯಗಳಿಸಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಎನ್.ವೈ.ಗೋಪಾಲಕೃಷ್ಣ ಜಯಗಳಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಶ್ರೀರಾಮುಲು ಅವರಿಗೆ ಹೊಣೆ
ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ಸಂಸದ ಶ್ರೀರಾಮುಲು ಅವರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರವನ್ನು ಅವರೇ ರೂಪಿಸಲಿದ್ದಾರೆ.
ಆನಂದ್ ಸಿಂಗ್ ಚಿತ್ತ ಎತ್ತ?
ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ಪರಿವರ್ತನಾ ಯಾತ್ರೆಗೆ ಗೈರಾಗಿದ್ದರು. ಪಕ್ಷದ ಜಿಲ್ಲಾ ಘಟಕದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.