ಬಹಮನಿ ಉತ್ಸವ ವಿವಾದ : ಮೌನ ಮುರಿದ ಸಿದ್ದರಾಮಯ್ಯ!
ಬೆಂಗಳೂರು, ಫೆಬ್ರವರಿ 14 : 'ಬಹಮನಿ ಉತ್ಸವವನ್ನು ಆಚರಣೆ ಮಾಡುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಸರ್ಕಾರದಿಂದ ಬಹಮನಿ ಉತ್ಸವ ಆಚರಣೆ ಮಾಡುತ್ತಿಲ್ಲ. ಸರ್ಕಾರದ ಮುಂದೆ ಇಂತಹ ಪ್ರಸ್ತಾಪವಿಲ್ಲ' ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, 'ಈ ಬಗ್ಗೆ ಅವರನ್ನೇ ಕೇಳಿ. ನನಗೆ ಏನೂ ತಿಳಿದಿಲ್ಲ' ಎಂದರು.
ಸಚಿವರು ಏನು ಹೇಳಿದ್ದರು? : 'ಬಹಮನಿ ಸುಲ್ತಾನರ ಆಳ್ವಿಕೆ, ಗತಕಾಲದ ವೈಭವ ಬಿಂಬಿಸುವ ಬಹಮನಿ ಉತ್ಸವವನ್ನು ಕಲಬುರಗಿ ನಗರದಲ್ಲಿ ಮಾರ್ಚ್ 6ರಂದು ನಡೆಸಲಾಗುತ್ತದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದರು.
ಆದರೆ, ವಿವಿಧ ಸಂಘಟನೆಗಳು ಮತ್ತು ಕೆಲವು ಬಿಜೆಪಿ ನಾಯಕರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ವಿರೋಧಿಯಾದ ಬಹನಿ ಸುಲ್ತಾನರ ಜಯಂತಿಯನ್ನು ಆಚರಣೆ ಮಾಡಬಾರದು ಎಂದು ಒತ್ತಾಯಿಸಿದ್ದರು.
ಸಚಿವರ ಸ್ಪಷ್ಟನೆ : ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ರಾಷ್ಟ್ರ ಕೂಟರ ಉತ್ಸವ ಮಳಖೇಡದಲ್ಲಿ 2 ದಿನ ನಡೆಯಲಿದೆ. ಅದರಂತೆ, ಕಲಬುರಗಿಯಲ್ಲಿ 1 ದಿನ ಬಹುಮನಿ ಉತ್ಸವ ಮಾಡಲಾಗುವುದು. ಉತ್ಸವದ ಬಗ್ಗೆ ಈಗಾಗಲೇ ಕನ್ನಡಪರ ಸಂಘಟನೆಗಳ ಜೊತೆ ಚರ್ಚಿಸಲಾಗಿದೆ' ಎಂದರು.












Click it and Unblock the Notifications