ಬೆಂಗಳೂರಿನಲ್ಲಿ ಮೀಸಲಾತಿಗಾಗಿ ಮಠಾಧೀಶರ ಸಭೆಯ ಮಾಸ್ಟರ್ ಮೈಂಡ್ ವಿಜಯೇಂದ್ರ?
ಬೆಂಗಳೂರು, ಫೆ. 13: ಒಬಿಸಿ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯತ ಮಠಾಧೀಶರ ಸಮಾವೇಶದ ಮಾಸ್ಟರ್ ಮೈಂಡ್ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಎಂಬ ಸ್ಪೋಟಕ ಮಾಹಿತಿ ಇದೀಗ ಹೊರಬಿದ್ದಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ 2 ಎ ಮೀಸಲಾತಿಗಾಗಿ ಪಂಚಮಸಾಲಿ ಮಠಾಧೀಶರು ಆರಂಭಿಸಿರುವ ಪಾದಯಾತ್ರೆಗೆ ತಿರುಗೇಟು ಕೊಡಲು ನೂರಾರು ಸಂಖ್ಯೆಯಲ್ಲಿ ಮಠಾಧೀಶರನ್ನು ಸಮಾವೇಶಗೊಳಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಸಿಎಂ ಯಡಿಯೂರಪ್ಪರಿಗೆ ಕೊಡುತ್ತಿರುವ ಹಿಂಸೆ ನೋಡಿದ್ರೆ ಅಯ್ಯೋ ಎನಿಸುತ್ತದೆ!
ಕೂಡಲಸಂಗಮದಿಂದ ಆರಂಭವಾಗಿರುವ ಪಂಚಮಸಾಲಿ ಲಿಂಗಾಯತ ಸಮುದಾಯದ ಪಾದಯಾತ್ರೆ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ತುಮಕೂರು ತಲುಪಿರುವ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರೆದಿದೆ. ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಮಠಾಧೀಶರ ಸಮಾವೇಶ ನಡೆಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಅದಕ್ಕೆ ಕಾರಣವೂ ಇದೆ. ಮಠಾಧೀಶರ ಸಭೆಯಲ್ಲಿ ಭಾಗಿಯಾಗಿದ್ದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಅವರು ಬಿ.ವೈ. ವಿಜಯೇಂದ್ರ ಅವರ ಅತ್ಯಾಪ್ತರು ಎಂಬುದು ಇದಕ್ಕೆ ಕಾರಣವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಇತರೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಮೀಸಲಾತಿ ಹೋರಾಟದ ಕುರಿತು ಯಡಿಯೂರಪ್ಪ ಅವರ ಮೇಲಿನ ಒತ್ತಡ ಕಡಿಮೆ ಮಾಡುವುದು. ಹಾಗೂ ನಾಯಕತ್ವ ಬದಲಾವಣೆ ಕುರಿತು ಕೇಂದ್ರ ಸರ್ಕಾರ ಯಾವುದೇ ಚಿಂತನೆ ಮಾಡದಂತೆ ಒತ್ತಡ ಹಾಕುವುದು ಕೂಡ ಬೆಂಗಳೂರು ಮಠಾಧೀಶರ ಸಮಾವೇಶದ ಮೂಲಕ ರವಾನಿಸಲಾಗಿದೆ ಎನ್ನಲಾಗಿದೆ.