Lok Sabha Elections 2024: ಬಳ್ಳಾರಿ ಲೋಕಸಭೆ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ; ಶ್ರೀರಾಮುಲು ಸ್ಪರ್ಧೆ?
ಬಳ್ಳಾರಿ, ಜನವರಿ 04: ಒಂದು ಕಾಲದಲ್ಲಿ ಬಳ್ಳಾರಿಯಂದ್ರೇ, ಕಾಂಗ್ರೆಸ್, ಕಾಂಗ್ರೆಸ್ ಅಂದ್ರೇ ಬಳ್ಳಾರಿ ಅನ್ನೋ ಪ್ರತೀತಿ ಇತ್ತು. 2004ರ ಬಳಿಕ ನಿಧಾನನವಾಗಿ ಬಿಜೆಪಿ ಲೋಕಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ಗೆ ನೆಲೆ ಇಲ್ಲದಂತೆ ಮಾಡಿತ್ತು. ಸದ್ಯ ಹಾಲಿ ಬಿಜೆಪಿ ಸಂಸದರಿರುವ ಬಳ್ಳಾರಿ ಕ್ಷೇತ್ರವನ್ನ ಪಡೆಯುವುದು ಕಾಂಗ್ರೆಸ್ ಪ್ರತಿಷ್ಠೆಯ ಕಣವಾಗಿದ್ರೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ.
ಹೌದು, ಬಳ್ಳಾರಿ ಲೋಕಸಭೆಯಲ್ಲಿ ಹಾಲಿ ಬಿಜೆಪಿಯ ವೈ. ದೇವೇಂದ್ರಪ್ಪ ಸಂಸದರಾಗಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲು ಸೂಕ್ತ ಹುರಿಯಾಳುಗಳ ಹುಡುಕಾಟದಲ್ಲಿ ತೊಡಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಲು ಬಿಜೆಪಿಯಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಮತ್ತೆ ಬಿಜೆಪಿ ವಶ ಪಡಿಸಿಕೊಳ್ಳಲು ತಯಾರಿ ನಡೆಸಿದೆ. ಹಾಲಿ ಸಂಸದರಾಗಿರುವ ವೈ ದೇವೇಂದ್ರಪ್ಪ ಬದಲಿಗೆ ಈ ಬಾರೀ ಮಾಜಿ ಸಚಿವ ಹಾಗೂ ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಬಿ ಶ್ರೀರಾಮುಲು ಅವರನ್ನ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ನಡೆಸಿದೆ ಎಂದು ತಿಳಿದು ಬಂದಿದೆ.

ಇತ್ತ 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಸಚಿವ ಶ್ರೀರಾಮುಲು ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಇತ್ತ ಕಾಂಗ್ರೆಸ್ ನಿಂದ ಈ ಹಿಂದೆ ಉಪಚುನಾವಣೆಯಲ್ಲಿ ಬಳ್ಳಾರಿಯಿಂದ ಗೆದ್ದಿದ್ದ ವಿಎಸ್ ಉಗ್ರಪ್ಪ ಅವರು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿರುವ ಶ್ರೀರಾಮುಲು ಅವರನ್ನ ಚುನಾವಣಾ ಕಣಕ್ಕಿಳಿಸಿದರೇ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ.
ಇನ್ನೂ ಬಳ್ಳಾರಿ ಲೋಕಸಭೆ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ತಲಾ ನಾಲ್ಕು ಕ್ಷೇತ್ರಗಳಿವೆ. ಬಳ್ಳಾರಿಯ ನಾಲ್ಕೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿದ್ದಾರೆ. ವಿಜಯನಗರದ ನಾಲ್ಕು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಈ ಬಾರೀ ವೈ. ದೇವೇಂದ್ರಪ್ಪ ಅವರ ಬದಲಿಗೆ ಶ್ರೀರಾಮುಲು ಸ್ಪರ್ಧೆ ಮಾಡಿದರೇ ಗೆಲ್ಲುವು ಸುಲಭವಾಗಲಿದೆ ಎನ್ನುವ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದೆ.

ಒಟ್ನಾಲಿ, 1999 ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ ಬಳಿಕ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗುತ್ತಿದೆ. ಆದರೆ ಈ ಬಾರಿಯ ಬಳ್ಳಾರಿ ಲೋಕಸಭೆ ಕ್ಷೇತ್ರ ಆಡಳಿತರೂಢ ಕಾಂಗ್ರೆಸ್ ಗೆ ಪ್ರತಿಷ್ಠೆಯಾದ್ರೇ, ಬಿಜೆಪಿಗೆ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅಸ್ಥಿತ್ವದ ಪ್ರಶ್ನೆಯಾಗಲಿದೆ.. ಹೀಗಾಗಿ 2024 ರ ಬಳ್ಳಾರಿ ಲೋಕಸಭೆ ಚುನಾವಣೆ ಹೈವೋಲ್ಟೆಜ್ ಕಣವಾಗಲಿದೆ.












Click it and Unblock the Notifications