ಯತ್ನಾಳ್ ವಿಚಾರದಲ್ಲಿ ಮುಂದೇನಾಗುತ್ತೋ ಗೊತ್ತಿಲ್ಲ, ಬಿಎಸ್ವೈ ಮಾತಿನ ಅರ್ಥವೇನು?
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದ್ಯ ಒಂದು ರೀತಿ ಬಂಡಾಯವೆದ್ದಿದ್ದು, ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಸೇರಿದಂತೆ ಹಲವರಿಗೆ ದೊಡ್ಡ ತಲೆನೋವಾಗಿದ್ದಾರೆ. ಇನ್ನು ಯತ್ನಾಳ್ ಅವರು ವಕ್ಫ್ ವಿಚಾರದಲ್ಲಿ ಪ್ರತ್ಯೇಕ ಹೋರಾಟ ಶುರು ಮಾಡಿರುವುದು ಕೂಡ ನಾಯಕರ ಭಿನ್ನಮತಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ.
ಯತ್ನಾಳ್ ಅವರ ನಡೆ ಹೈಕಮಾಂಡ್ ಗಮನಕ್ಕೂ ಬಂದಿದೆ. ಮುಂದೆ ಏನು ಮಾಡುತ್ತಾರೋ ನೋಡೋಣ ಎಂದು ಯಡಿಯೂರಪ್ಪ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ನಡೆಸುತ್ತಿರುವ ಹೋರಾಟ ಕೂಡಲೇ ನಿಲ್ಲಿಸಿ, ನಮ್ಮೊಂದಿಗೆ ಕೈಜೋಡಿಸಿ ಎಂದು ವಿಜಯೇಂದ್ರ ವಿನಂತಿ ಮಾಡಿಕೊಂಡರೂ ಪ್ರತ್ಯೇಕ ಹೋರಾಟ ಮಾಡುತ್ತಿರುವುದು ಅವರಿಗೆ ಶೋಭೆ ತರೋದಿಲ್ಲ ಎಂದು ಹೇಳಿದ್ದಾರೆ.

ನಾಯಕರು ಈಗಲಾದರೂ ಎಚ್ಚರ ವಹಿಸಿ, ಅವರೆಲ್ಲರೂ ಸೇರಿ ಪಕ್ಷವನ್ನು ಬಲಪಡಿಸಲು ಸಹಕಾರ ಕೊಡಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ. ನಾವು ಯತ್ನಾಳ್ ಅವರಿಗೆ ಮನವಿ ಮಾಡುತ್ತೇವೆ. ಆದರೆ ಉಳಿದದ್ದು ಅವರಿಗೆ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು ಎಂದೂ ಯಡಿಯೂರಪ್ಪ ಹೇಳಿದ್ದಾರೆ.
ವಕ್ಫ್ ವಿರುದ್ಧ ಸಮರ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೀದರ್ನಿಂದ ಚಾಮರಾಜನಗರದವರೆಗೆ ಒಂದು ತಿಂಗಳ ಕಾಲ ಜನಜಾಗೃತಿ ಅಭಿಯಾನ ಆರಂಭಿಸಿದ್ದು, ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕರೆ ನೀಡಿದ್ದಾರೆ.

ಈಗಾಗಲೇ ಅವರು ಹೋರಾಟ ಶುರು ಮಾಡಿದ್ದು, ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಇಂದು ವಕ್ಪ್ ವಿರುದ್ಧ ಜನಾಂದೊಲನ ಹೊರಾಟ ನಿಮಿತ್ತವಾಗಿ ಶ್ರೀ ಮಹಾಂತೇಶ್ವರ ಮಠದಲ್ಲಿ ದರ್ಶನಾಶೀರ್ವಾದ ಪಡೆದುಕೊಂಡರು. ಇದೇ ವೇಳೆ ಸುಮಾರು 600 ವರ್ಷಗಳ ಹಳೆಯದಾದ ಮಹಾಂತೇಶ್ವರ ಮಠ ವಕ್ಫ್ ಆಗಿರುವ ಬಗ್ಗೆ ನಮ್ಮ ತಂಡದ ಮುಂದೆ ಭಕ್ತರು ಅಳಲು ತೋಡಿಕೊಂಡರು. ಯಾವುದೇ ಕಾರಣಕ್ಕೂ ನಮ್ಮ ಮಠವನ್ನು ವಕ್ಫ್ ವಶಕ್ಕೆ ಆಗಲು ಬಿಡುವುದಿಲ್ಲ, ತಮ್ಮೊಂದಿಗೆ ಸದಾ ಇರುವುದಾಗಿ ಯತ್ನಾಳ್ ಭರವಸೆ ನೀಡಿದರು.
ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ ಅವರು, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ , ಶಾಸಕರಾದ ರಾಜ್ ಕುಮಾರ್ ಪಾಟೀಲ್, ಬಿ.ಪಿ.ಹರೀಶ, ಮುಖಂಡ ಎನ್.ಆರ್.ಸಂತೋಷ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಯತ್ನಾಳ್ ವಕ್ಫ್ ವಿರೋಧಿ ಕಹಳೆ ಮೊಳಗಿಸಿದ್ದಾರೆ.
ನಿನ್ನೆ ಬೀದರ್ ಜಿಲ್ಲೆಯ ಧರ್ಮಾಪುರ ಗ್ರಾಮಕ್ಕೆ ವಕ್ಫ್ ವಿರುದ್ಧ ಜನಾಂದೋಲನಾ ಹೋರಾಟ ತಂಡದೊಂದಿಗೆ ಭೇಟಿ ನೀಡಿದ ಯತ್ನಾಳ್, ವಕ್ಫ್ ಬಾಧಿತ ಮನೆಗಳ ವೀಕ್ಷಿಸಿ, ರೈತರು, ಮಹಿಳೆಯರು ಸಲ್ಲಿಸಿದ ಮನವಿಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದ 150ಕ್ಕೂ ಹೆಚ್ಚು ಮನೆಗಳು, 26 ಎಕರೆ ಜಮೀನು ಹಾಗೂ 3 ದೇವಸ್ಥಾನಗಳು ವಕ್ಫ್ ಆಸ್ತಿ ಆಗಿರುವುದಾಗಿ ಅಲ್ಲಿನವರು ಮಾಹಿತಿ ನೀಡಿದರು. ವಕ್ಫ್ ಕಾಯ್ದೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಮಾರಕವಾದ ಕಾಯ್ದೆಯನ್ನು ತೆಗೆದು ಹಾಕುವಂತೆ ಯತ್ನಾಳ್ ಆಗ್ರಹಿಸಿದರು.












Click it and Unblock the Notifications