ಅಯ್ಯಪ್ಪ ಸ್ವಾಮಿ ಭಕ್ತರ 'ಭವನಂ ಸನ್ನಿಧಾನಂ' ಅಭಿಯಾನ
ಬೆಂಗಳೂರು, ಜನವರಿ 9: ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಪ್ರತಿ ವರ್ಷ ತೆರಳಿ ತಮ್ಮ ಭಕ್ತಿ ಪ್ರದರ್ಶಿಸುತ್ತಿದ್ದ ರಾಜ್ಯದ ಲಕ್ಷಾಂತರ ಭಕ್ತರು ಈ ಬಾರಿ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಲು ಸಾಧ್ಯವಾಗದೆ ನಿರಾಶೆಗೊಂಡಿದ್ದಾರೆ. ವೆಬ್ ಪೋರ್ಟಲ್ನಲ್ಲಿ ಮುಂಚೆಯೇ ಟಿಕೆಟ್ ಕಾಯ್ದಿರಿಸಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ತೆಗೆದುಕೊಂಡ ಹೋದ ಬಳಿಕವಷ್ಟೇ ಶಬರಿಮಲೆಗೆ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ ಯಾತ್ರೆಯ ಹಿಂದಿನ ಉದ್ದೇಶ, ಭಕ್ತಿಯ ಪರಾಕಾಷ್ಠೆಯ ಪ್ರದರ್ಶನಗಳಿಗೆ ಅವಕಾಶವಿಲ್ಲ. ಅನೇಕರು ಮಾಲೆ ಧರಿಸಿದ್ದರೂ ಕಠಿಣ ನಿಯಮಗಳ ಕಾರಣ ಶಬರಿಮಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಒಮ್ಮೆ ವ್ರತ ಕೈಗೊಂಡ ಬಳಿಕ ಅದನ್ನು ತಪ್ಪಿಸಬಾರದು ಎಂಬ ಕಠಿಣ ನಿಯಮವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಅನುಸರಿಸುತ್ತಾರೆ. ಈ ಬಾರಿ ಶಬರಿಮಲೆ ಸನ್ನಿಧಿಗೆ ತೆರಳಲು ಸಾಧ್ಯವಾಗದ ಕಾರಣ ಕರಾವಳಿ ಭಾಗದ ಭಕ್ತರು ಅದಕ್ಕೆ ಪರ್ಯಾಯ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಉಡುಪಿಯಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತರು ಭವನಂ ಸನ್ನಿಧಾನಂ ಅಭಿಯಾನ ನಡೆಸುತ್ತಿದ್ದಾರೆ.
ಪ್ರತಿ ವರ್ಷ ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಶಿಬಿರಗಳನ್ನು ಮಾಡಿ ನಂತರ ಒಟ್ಟಾಗಿ ಯಾತ್ರೆಗೆ ತೆರಳುತ್ತಿದ್ದರು. ಈ ಬಾರಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಕ್ತರು ಅಯ್ಯಪ್ಪ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆಯ ಚಟುವಟಿಕೆ ಆಯೋಜಿಸಿದ್ದಾರೆ. ಅಯ್ಯಪ್ಪನ ಸನ್ನಿಧಿಯಲ್ಲಿ ನಡೆಯುವಂತೆ ಜಿಲ್ಲೆಗಳಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಲ್ಲಿಯೇ ಮಕರ ಸಂಕ್ರಾಂತಿ ದಿನ ತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ರಾಜ್ಯದಲ್ಲಿಯೇ ಇರುವ ವಿವಿಧ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಲ್ಲಿ ಮಾಲೆ ಧರಿಸಿ ಇರುಮುಡಿ ಕೊಡಲು ಮತ್ತು ಮನೆಯನ್ನೇ ಸನ್ನಿಧಾನವನ್ನಾಗಿಸಲು ಮುಂದಾಗಿದ್ದಾರೆ. ಜ. 12 ರಿಂದ 14ರವರೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.
ಕೇರಳ ಸರ್ಕಾರವು ಭಕ್ತರ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಕೇರಳಕ್ಕೆ ತೆರಳಿದ ಬಳಿಕ ಕೋವಿಡ್ ಪರೀಕ್ಷೆ ನಡೆಸುವುದು, ಅದಕ್ಕಾಗಿ ಮತ್ತೆ ಹಣ ತೆರುವುದು ಕಷ್ಟಕರ. ಇದರಿಂದ ಸ್ವಾಮಿ ಪೂಜೆಯ ವ್ರತಗಳನ್ನು ಸರಿಯಾಗಿ ಪಾಲಿಸಲು ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಭವನಂ ಸನ್ನಿಧಾನಂ ಅಭಿಯಾನ ನಡೆಯುತ್ತಿದೆ. ಮನೆಯಲ್ಲಿಯೇ ಉಳಿದುಕೊಂಡು ಭಕ್ತರು ಕುಟುಂಬ ಸಮೇತ ಅಯ್ಯಪ್ಪನ ಆರಾಧನೆ ಮಾಡುತ್ತಿದ್ದಾರೆ.












Click it and Unblock the Notifications