5 ಸಾವಿರ ಪಡೆಯಲು ಆಟೋ, ಟ್ಯಾಕ್ಸಿ ಚಾಲಕರು ಅರ್ಜಿ ಹಾಕುವುದು ಹೇಗೆ?
ಬೆಂಗಳೂರು, ಮೇ 12 : ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಆಟೋ, ಟ್ಯಾಕ್ಸಿ ಚಾಲಕರಿಗೆ ನೆರವವಾಗಲು ಕರ್ನಾಟಕ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಪರಿಹಾರವನ್ನು ಪಡೆಯಲು ಹಲವು ಮಾರ್ಗಸೂಚಿಗಳಿವೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಸೇವಾ ಸಿಂಧು ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್ ವಿವರವನ್ನು ದಾಖಲಿಸಬೇಕು.
ಸರ್ಕಾರ ನೀಡುವ 5000 ರೂ.ಗಳು ಆಧಾರ್ ಕಾರ್ಡ್ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹೋಗಲಿದೆ. ಆಟೋ/ಟ್ಯಾಕ್ಸಿ ಚಾಲಕರು ಅರ್ಜಿಗಳನ್ನು ಸಲ್ಲಿಸುವ ಮೊದಲು ಇವುಗಳನ್ನು ಸರಿಯಾಗಿ ಓದಿಕೊಳ್ಳಬೇಕು.
ಕೊರೊನಾ ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಟ್ಯಾಕ್ಸಿ ಮತ್ತು ಆಟೋಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಚಾಲಕರಿಗೆ ಆದ ನಷ್ಟವನ್ನು ಗಮನಿಸಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. www.sevasindhu.karnataka.gov.in ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ನೀಡಿಲ್ಲ.

ಅರ್ಹತೆಗಳೇನು?
ಅರ್ಜಿಯನ್ನು ಸಲ್ಲಿಸುವ ಚಾಲಕರು ಅನುಜ್ಞಾ ಪತ್ರ (ಡಿಎಲ್), ಬ್ಯಾಡ್ಜ್ ಹೊಂದಿರಬೇಕು. 1/3/2020ರಂದು ಚಾಲ್ತಿಯಲ್ಲಿರುವ ಡಿಎಲ್, ಆಧಾರ್ ವಿವರಗಳನ್ನು ವೆಬ್ಸೈಟ್ನಲ್ಲಿ ನಮೂದಿಸಬೇಕು.

ಬ್ಯಾಂಕ್ ಖಾತೆ ವಿವರಗಳು
ಚಾಲಕರು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆ ವಿವರ, ಐಎಫ್ಎಸ್ಸಿ ಕೋಡ್, ಎಂಐಸಿಆರ್ ಕೋಡ್ಗಳನ್ನು ನಮೂದಿಸಬೇಕು. ವಾಹನದ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಬೇಕು.

ಯಾರು ಪರಿಹಾರ ಪಡೆಯಬಹುದು?
ಆಟೋ/ಟ್ಯಾಕ್ಸಿ ಚಾಲಕರು ಹಾಗೂ ಸ್ವಂತ ವಾಹನ ಚಲಾಯಿಸುವ ಮ್ಯಾಕ್ಸಿಕ್ಯಾಬ್ ಚಾಲಕರುಗಳು ಮಾತ್ರ ಈ ಯೋಜನೆಯಡಿ ಪರಿಹಾರವನ್ನು ಪಡೆಯಬಹುದು.
ದೈನಂದಿನ ಉದ್ಯೋಗ ನಡೆಸಲಾಗದೇ/ ಆದಾಯ ಗಳಿಸಲಾಗದೇ ಇರುವ ಕುರಿತು ಸ್ವಯಂ ಘೋಷಣಾ ಪತ್ರವನ್ನು ನಮೂದಿಸಬೇಕು.












Click it and Unblock the Notifications