ಸದನದಲ್ಲಿ ಸುದ್ದಿ ಮಾಡಿದ ಪ್ರಭು ಚೌವಾಣ್ ಯಾರು?
ಬೆಂಗಳೂರು, ಡಿ. 11 : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡ ಔರಾದ್ ಶಾಸಕ ಪ್ರಭು ಚೌವಾಣ್ ವಿವಾದಕ್ಕೆ ಕಾರಣರಾಗಿದ್ದಾರೆ. ಚೌವಾಣ್ ಯಾರು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವಾಣ್ ಎರಡನೇ ಬಾರಿ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಗೋಪಿನಾಥ್ ಮುಂಡೆ ಅವರ ಕಟ್ಟಾ ಬೆಂಬಲಿಗರಾದ ಚೌವಾಣ್ ಅವರಿಗೆ 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತ್ತು. ಎರಡು ಬಾರಿ ಔರಾದ್ ಕ್ಷೇತ್ರದಿಂದ ಚೌವಾಣ್ ಆರಿಸಿ ಬಂದಿದ್ದಾರೆ.[ಚೌವಾಣ್ ಸದನಲ್ಲಿ ಮಾಡಿದ್ದೇನು?]

ಬುಧವಾರದ ಕಲಾಪದಲ್ಲಿ ಬೆಳಗ್ಗೆ ತಮ್ಮ ಕ್ಷೇತ್ರದಲ್ಲಿ ಪಡಿತರ ಕಾರ್ಡ್ಗಳ ವಿತರಣೆಯಲ್ಲಿ ಗೊಂದಲವಿರುವ ಬಗ್ಗೆ ಮಾತನಾಡಿ ಸದನದ ಗಮನ ಸೆಳೆದಿದ್ದ ಚೌವಾಣ್, ಸಂಜೆಯ ಹೊತ್ತಿಗೆ ನಡೆದ ಘಟನೆಯಿಂದ ತೀವ್ರ ಇರಸುಮುರಸಿಗೆ ಒಳಗಾದರು. [ಸದನದಲ್ಲಿ ಶಾಸಕರ ಆಟ-ನೋಟ : ಯಾರು ಏನು ಹೇಳಿದರು?]
ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಚೆನ್ನಾಗಿ ಮಾತನಾಡ ಬಲ್ಲ ಪ್ರಭು ಚೌವಾಣ್ ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲ. ಸದನದಲ್ಲಿ ಬುಧವಾರ ವಿಷಯ ಮಂಡಿಸಲು ಕಾಗದದಲ್ಲಿ ಬರೆದುಕೊಂಡು ಬಂದಿದ್ದರು. ಪ್ರಭು ಚೌವಾಣ್ ಸಂಕ್ಷಿಪ್ತ ಪರಿಚಯ ಇಲ್ಲಿದೆ.

* ಚೌವಾಣ್ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ನಿವಾಸಿ
* ಸಿಳವಣಿ ಆಶ್ರಮ ಶಾಲೆಯಲ್ಲಿ ಎಸ್ಎಸ್ಎಲ್ಸಿವರೆಗೆ ಮರಾಠಿ ಭಾಷೆಯಲ್ಲಿ ಅಧ್ಯಯನ ಮಾಡಿದ್ದಾರೆ
* ಎಸ್ಎಸ್ಎಲ್ಸಿ ಬಳಿಕ ಮುಂಬೈಗೆ ಥಾಣೆಗೆ ತೆರಳಿದರು
* ಥಾಣೆಯಲ್ಲಿ ಕಬ್ಬಿಣದ ವ್ಯಾಪಾರ ಆರಂಭಿಸಿದರು [ಚಾವಾಣ್ ಫೇಸ್ಬುಕ್ ಪುಟ]
* ಮುಂಬೈನಲ್ಲಿ ಬಿಜೆಪಿ ಮುಖಂಡ ದಿ.ಗೋಪಿನಾಥ್ ಮುಂಡೆ ಅವರ ಪರಿಚಯ
* ಮುಂದೆ ಗೋಪಿನಾಥ್ ಮುಂಡೆ ಅವರ ನಿಷ್ಠಾವಂತ ಬೆಂಬಲಿಗರಾದರು
* 2008ರಲ್ಲಿ ಔರಾದ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿತ್ತು, ಗೆಲುವು ಸಾಧಿಸಿದರು
* 2013ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ
* ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುವ ಚೌವಾಣ್ಗೆ ಕನ್ನಡ ಬರುವುದಿಲ್ಲ

ಚೌವಾಣ್ ವಿವಾದ : ಕರ್ನಾಟಕದಲ್ಲಿ ಪಿಸ್ತೂಲ್ ಬಳಕೆಗೆ ಅನುಮತಿ ಪಡೆದಿದ್ದ ಪ್ರಭು ಚೌವಾಣ್ 4 ವರ್ಷದ ಹಿಂದೆ ಹೈದರಾಬಾದ್ನಲ್ಲಿ ವಿಮಾನ ನಿಲ್ದಾಣದಲ್ಲಿ ಅದೇ ಪಿಸ್ತೂಲ್ ತೆಗೆದುಕೊಂಡು ಹೋಗಿದ್ದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಪಿಸ್ತೂಲ್ ಬಳಕೆಯ ಪರವಾನಿಗೆ ಅವಧಿಯೂ ಮುಗಿದಿತ್ತು. ಕೊನೆಗೆ ದಂಡ ಕಟ್ಟಿ ಚೌವಾಣ್ ಬಿಡುಗಡೆಗೊಂಡಿದ್ದರು.












Click it and Unblock the Notifications