ಆನೇಕಲ್ ಚುನಾವಣಾ ಕಣದಲ್ಲಿ ಜೆಎನ್ ಯು ಪದವೀಧರ, ಬಿಎಂಎಸ್ ಕಾಲೇಜು ಉಪನ್ಯಾಸಕ
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಲುಮ್ನಿ, ಕಳೆದ 20 ವರ್ಷಗಳಿಂದ ಬಹುಜನ ವಿದ್ಯಾರ್ಥಿ ಹೋರಾಟದಲ್ಲಿ ಸಕ್ರಿಯರಾಗಿರುವ ಡಾ. ಶ್ರೀನಿವಾಸ್ ಗುಂಡಪ್ಪ(38) ಅವರು ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ.
ಬೆಂಗಳೂರಿನ ಆನೇಕಲ್ (ಎಸ್ ಟಿ) ಮೀಸಲು ಕ್ಷೇತ್ರದಿಂದ 15ನೇ ವಿಧಾನಸಭೆಗೆ ಪ್ರವೇಶ ಬಯಸಿ ಕಣದಲ್ಲಿದ್ದಾರೆ. ಮಾನವ ಹಕ್ಕುಗಳು ವಿಷಯ ಕುರಿತಂತೆ ದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದದಿಂದ ಡಾಕ್ಟರೇಟ್ ಹಾಗೂ ಪೊಲಿಟಿಕಲ್ ಸೈನ್ಸ್ ನಲ್ಲಿ ಮಾಸ್ಟರ್ ಪದವಿ ಪಡೆದುಕೊಂಡಿದ್ದಾರೆ.

ಇದಲ್ಲದೆ, ಚೀನಾ ಮತ್ತು ಭಾರತದಲ್ಲಿನ ಮಾನವ ಹಕ್ಕುಗಳ ತುಲನೆ ಅಧ್ಯಯನ ಮಾಡಿ ಯುರೋಪಿಯನ್ ಸ್ಟಡೀಸ್ ಸೆಂಟರ್ ನಿಂದ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕ, ಬಿಎಸ್ಪಿ ಅಭ್ಯರ್ಥಿ
ಮಾಸ್ಟರ್ ಪಡೆದ ಬಳಿಕ ಎಂಎಸ್ ರಾಮಯ್ಯ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಸದ್ಯ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾರೆ.
ಬಿಎಸ್ ಪಿಯ ಮುಖ್ಯಸ್ಥೆ ಮಾಯಾವತಿ ಅವರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣಾ ಚಟುವಟಿಕೆ ನೋಡಿಕೊಳ್ಳಲು ನಿಯುಕ್ತರಾಗಿದ್ದ ಶ್ರೀನಿವಾಸ್ ಅವರಿಗೆ ಕೊನೆ ಕ್ಷಣದವರೆಗೂ ತಾನು ಕೂಡ ಸ್ಪರ್ಧಿಯಾಗಿ ಕಣಕ್ಕಿಳಿಯಬೇಕಾಗಬಹುದು ಎಂಬ ನಿರೀಕ್ಷೆ ಕೂಡಾ ಇರಲಿಲ್ಲ.
ಬಿಎಸ್ ಪಿ-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ವೈ ಕೃಷ್ಣಮೂರ್ತಿ ಪರ ಪ್ರಚಾರ ನಡೆಸುತ್ತಿದ್ದರು. ಈಗ ಚುನಾವಣಾ ಕಣದಲ್ಲಿ ಸ್ಪರ್ಧಿಯಾಗಿದ್ದಾರೆ. ಆನೇಕಲ್ ನಲ್ಲಿ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ, ಬಿಜೆಪಿಯ ಅಭ್ಯರ್ಥಿ, ಮಾಜಿ ಶಾಸಕ ಎ ನಾರಾಯಣ ಸ್ವಾಮಿ ವಿರುದ್ಧ ಸೆಣೆಸುತ್ತಿದ್ದಾರೆ. ಬೂತ್ ಮಟ್ಟದಿಂದ ಕಾರ್ಯಕರ್ತರ ಜತೆ ಬೆರೆತು, ಸಂಘಟನೆ ಮಾಡುತ್ತಿದ್ದಾರೆ. ಬಯಸದೇ ಬಂದ ಭಾಗ್ಯದಿಂದ ಕಣಕ್ಕಿಳಿದಿದ್ದು, ಬದಲಾವಣೆ ತರುವ ಸಂಕಲ್ಪ ಹೊಂದಿದ್ದಾರೆ.












Click it and Unblock the Notifications