Karnataka Election 2023 : ನಾಲ್ವರಲ್ಲಿ ಮತ್ತೊಂದು ಎದ್ದು ನಿಲ್ಲುತ್ತೆ, ಕತ್ನಳ್ಳಿ ಮಠದ ಬಬಲಾದಿ ಸದಾಶಿವ ಮುತ್ಯಾ ಭವಿಷ್ಯ
ವಿಜಯಪುರ ಮಾರ್ಚ್ 27: ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ಪ್ರಬಲ ಪಕ್ಷಗಳು ರಾಜ್ಯದೆಲ್ಲೆಡೆ ಮತಬೇಟೆಯನ್ನು ಪ್ರಾರಂಭಿಸಿವೆ. ಈ ನಡುವೆ ಸ್ವಾಮೀಜಿಗಳು, ಜ್ಯೋತಿಷಿಗಳು ರಾಜ್ಯ ರಾಜಕಾರಣಿಗಳ ಭವಿಷ್ಯ ನುಡಿಯುತ್ತಿದ್ದು ಭಾರೀ ಕುತೂಹಲ ಮೂಡಿಸಿದೆ.
ಸದ್ಯ ವಿಜಯಪುರದ ಕತ್ನಳ್ಳಿ ಮಠದಿಂದ ರಾಜ್ಯ ರಾಜಕಾರಣ ಭವಿಷ್ಯ ಹೊರಬಿದ್ದಿದ್ದು ಚರ್ಚೆಗೆ ಗ್ರಾಸವಾಗಿದೆ. 'ನಾಲ್ಕರಲ್ಲಿ ಮತ್ತೊಂದು ಎದ್ದು ನಿಲುತ್ತೆ, ಯಾವುದನ್ನು ಹಿಡಿದುಕೊಂಡು ಎದ್ದು ನಿಲ್ಲುತ್ತೆ ಅನ್ನೋದನ್ನ ಚಮಕೇರಿಯಲ್ಲಿ ನಡೆಯುವ ಜಾತ್ರೆಯಲ್ಲಿ ಫೈನಲ್ ಆಗಿ ಹೇಳುವೆ' ಎಂದು ಶಿವಯ್ಯ ಮುತ್ಯಾ ರಾಜಕಾರಣದ ಕುತೂಹಲಕಾರಿ ಭವಿಷ್ಯವನ್ನು ನುಡಿದಿದ್ದಾರೆ.
'ಸದ್ದು ಇಲ್ಲದ್ದು, ಸುದ್ದಿಯಲ್ಲಿ ಇದ್ದದ್ದು, ನಿದ್ದೆಯಲ್ಲಿ ಇದ್ದದ್ದು, ಬುದ್ದಿಯಲ್ಲಿ ಇದ್ದದ್ದು' ಎಂದು ಬಬಲಾದಿ ಸದಾಶಿವ ಮುತ್ಯಾ ಎಂದು ರಾಜ್ಯದಲ್ಲಿ ಅಧಿಕಾರಕ್ಕಾಗಿ ಒಗ್ಗಟ್ಟು ಪ್ರದರ್ಶನ ನಡೆಯಲಿದೆ ಎಂದು ಸೂಚ್ಯವಾಗಿ ನುಡಿದಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದೇ ಅತಂತ್ರ ವಿಧಾನಸಭೆ ರಚನೆಯಾಗುವ ಸುಳಿವು ನೀಡಿದ್ದಾರೆ.

ಈ ಬಾರಿ ಶತಾಯಗತಾಯ ಜಯ ಸಾಧಿಸಲು ಪ್ರಬಲ ಪಕ್ಷಗಳು ಪಣ ತೊಟ್ಟಿವೆ. ಮೂರು ಪ್ರಬಲ ಪಕ್ಷಗಳ ಪ್ರಚಾರದ ವೇಳೆ ಸೇರುತ್ತಿರುವ ಜನ ಸಾಗರವೇ ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಈ ಬಾರಿ ಪಕ್ಷಗಳ ನಡುವೆ ಕಠಿಣ ಪೈಪೋಟಿ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಇದರಿಂದಾಗಿ ಶಿವಯ್ಯ ಮುತ್ಯಾ ಭವಿಷ್ಯವೂ ಇದಕ್ಕೆ ಪೂರಕವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಶಿವಯ್ಯ ಮುತ್ಯಾ ರಾಜ್ಯ ರಾಜಕಾರಣ ಭವಿಷ್ಯ
ಪ್ರತಿ ವರ್ಷ ಯುಗಾದಿ ಹಬ್ಬದ ಮೂರನೇ ದಿನ ನಡೆಯುವ ಜಾತ್ರೆ ವಿಜಯಪುರದ ತಾಲೂಕಿನ ಕತ್ನಳ್ಳಿ ಮಠದಲ್ಲಿ ನಡೆಯುತ್ತದೆ. ಈ ವೇಳೆ ಬಬಲಾದಿ ಸದಾಶಿವ ಮುತ್ಯಾ ಹೇಳುವ ಭವಿಷ್ಯ ನಿಖರವಾಗಿರುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಈ ಬಾರಿ ಕತ್ನಳ್ಳಿ ಮಠದಿಂದ ರಾಜ್ಯ ರಾಜಕಾರಣದ ಭವಿಷ್ಯ ಹೊರಬಿದ್ದಿದೆ.
ಕಾಲಜ್ಞಾನ ಕೇಳಲು ವಿಜಯಪುರ ಜಿಲ್ಲೆಯ ಭಕ್ತರು ಮಾತ್ರವಲ್ಲದೇ, ಸುತ್ತಮುತ್ತಲ ಜಿಲ್ಲೆಗಳ ಮತ್ತು ಅನ್ಯ ರಾಜ್ಯಗಳ ಭಕ್ತರೂ ಭಾರೀ ಸಂಖ್ಯೆಯಲ್ಲಿ ಹಾಜರಾಗಿದ್ದರು. ಹಿಂದಿನ ಜಾತ್ರೆಯ ವೇಳೆ ನುಡಿಯಲಾಗಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎನ್ನುವುದು ಭಕ್ತರ ನಂಬಿಕೆ. ಈ ಬಾರಿಯ ಭವಿಷ್ಯ ಕೂಡ ನಿಜವಾಗಲಿದೆ ಎನ್ನಲಾಗುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಇದಕ್ಕೂ ಮುನ್ನ ರಾಜ್ಯ ರಾಜಕಾರಣದ ಭವಿಷ್ಯ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ರಾಜ್ಯ ರಾಜಕಾರಣ ಬಗ್ಗೆ ಒಗಟಿನರೀತಿಯಲ್ಲಿ ಭವಿಷ್ಯ ಶಿವಯ್ಯ ಮುತ್ಯಾ ನುಡಿದಿದ್ದಾರೆ. ರಾಜ್ಯದಲ್ಲಿ ಚುನಾವಣೆ ಬಳಿಕ ರಾಜಕೀಯ ಅತಂತ್ರತೆ ಉಂಟಾಗುವ ಮುನ್ಸೂಚನೆ ನೀಡಿದ್ದಾರೆ ಎಂದು ಶಿವಯ್ಯ ಮುತ್ಯಾ ಅವರು ಹೇಳಿದ್ದಾರೆ.
ಈಗ ರಾಜಕೀಯದಲ್ಲಿ ಗದ್ದಲ ನಡೆಯುತ್ತಿದೆ. ಭಾರತ ವಿಶ್ವದಲ್ಲೇ ನಂಬರ್ ಒನ್ ಆಗಲಿದೆ. ಭಾರತ ವಿಶ್ವಕ್ಕೆ ನಂಬರ್ ಒನ್ ಆಗಲು ಒಂದು ಸೂತ್ರವಿದೆ. ಆ ಸೂತ್ರ ಜಾರಿಗೆ ಬಂದರೆ ವಿಶ್ವವನ್ನೇ ಭಾರತ ಆಳಲಿದೆ ಎಂದು ಶಿವಯ್ಯ ಮುತ್ಯಾ ಮಾರ್ಮಿಕವಾಗಿ ಮುಂದೆ ಜಗತ್ತಿನ ದೊಡ್ಡಣ್ಣ ಆಗಲು ವಿಪುಲ ಅವಕಾಶ ಇರೋದರ ಬಗ್ಗೆ ಹೇಳಿದರು.
ಜೊತೆಗೆ ಭಾರತ ಹೊರ ದೇಶಗಳನ್ನ ಆಳುವ ಸಮಯ ಬರಲಿದೆ. ಮೋಸ ಮಾಡಿ ಆಳುವದಿಲ್ಲ, ಪ್ರೀತಿಯಿಂದ ಭಾರತ ಬೇರೆ ದೇಶಗಳನ್ನ ಆಳಲಿದೆ ಎಂದು ದೇಶದ ಶಕ್ತಿ ಎಲ್ಲ ದೇಶದ ಅರಿವಿಗೆ ಬರಲಿದೆ ಎಂದು ನುಡಿದರು. ಆ ಸೂತ್ರ ಜಾರಿಗೆ ಬಂದ್ರೆ ಭಾರತ ದೇಶದಲ್ಲಿ ಬಡವರು ಯಾರು ಇರೋದಿಲ್ಲ, ಎಲ್ಲರೂ ಶ್ರೀಮಂತರು, ಎಲ್ಲರೂ ಸಮಾನರು ಆಗ್ತಾರೆ. ಸೂತ್ರ ಜಾರಿಗೆ ಬರಲು ವಿಘ್ನಗಳು ಅಡ್ಡ ಬರುತ್ತಿವೆ. ಎಷ್ಟೇ ಅಡೆ ತಡೆಯಾದರು ಆ ಸೂತ್ರ ಜಾರಿಗೆ ಬರಲಿದೆ ಎಂದು ಶಿವಯ್ಯ ಮುತ್ಯಾ ತಮ್ಮ ಭವಿಷ್ಯದಲ್ಲಿ ದೇಶದ ಮುಂದಿನ ಹೆಜ್ಜೆಯ ಸ್ಪಷ್ಟತೆ ನೀಡಿದ್ದು ಇದು ನಿಜವಾಗುತ್ತಾ ಕಾದು ನೋಡಬೇಕಿದೆ.












Click it and Unblock the Notifications