ಮಾತಿಗೆ ತಪ್ಪದ ಕುಮಾರಸ್ವಾಮಿ: ನಾಗಮಂಗಲದ ಯುವತಿಗೆ ಉದ್ಯೋಗ ಭಾಗ್ಯ
ಬೆಂಗಳೂರು, ಜ 27: ಈ ಹಿಂದೆಯೂ ಹಲವು ಬಾರಿ ಸಹಾಯಹಸ್ತ ಚಾಚಿಕೊಂಡು ತಮ್ಮ ಬಳಿ ಬರುವವರಿಗೆ ಆರ್ಥಿಕ, ಶೈಕ್ಷಣಿಕ ಸಹಾಯ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಹಿಳೆಯೊಬ್ಬರಿಗೆ ಎರಡು ದಿನದ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ನಾಗಮಂಗಲ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾಗ, ಮಹಿಳೆಯೊಬ್ಬರು ತಮ್ಮ ಅಸಹಾಯಕತೆಯನ್ನು ಕುಮಾರಸ್ವಾಮಿ ಬಳಿ ತೋಡಿಕೊಂಡಿದ್ದರು. ಆಕೆಯ ಮಗಳನ್ನು ಬೆಂಗಳೂರಿನ ನಿವಾಸಕ್ಕೆ ಕಳುಹಿಸಿಕೊಡಿ, ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನು ನೀಡಿದ್ದರು.
ಅದರಂತೇ, ಮಹಿಳೆಯ ಮಗಳು ಕುಮಾರಸ್ವಾಮಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ದೂರವಾಣಿಯಲ್ಲಿ ಖಾಸಗಿ ಕಂಪೆನಿಯ ವ್ಯಕ್ತಿಯೊಬ್ಬರ ಜೊತೆಗೆ ಮಾತನಾಡಿದ ಕುಮಾರಸ್ವಾಮಿ, ಈ ಹುಡುಗಿ ಬಿಕಾಂ ಓದಿದ್ದಾಳೆ, ಕಂಪ್ಯೂಟರ್ ಅನುಭವ ಕೂಡಾ ಇದೆ. ಇವತ್ತೇ ಕಳುಹಿಸಿಕೊಡುತ್ತೇನೆ, ಉದ್ಯೋಗ ಕೊಡಿ ಎಂದು ಮನವಿ ಮಾಡಿದ್ದಾರೆ.

15-20 ಸಾವಿರ ರೂಪಾಯಿ ಸಂಬಳ ಕೊಡುತ್ತಾರೆ, ಇವತ್ತೇ ಅಲ್ಲಿಗೆ ಹೋಗಿ, ಕೆಲಸಕ್ಕೆ ಸೇರಿಕೊಮ್ಮ ಎಂದು ಯುವತಿಗೆ ಕುಮಾರಸ್ವಾಮಿ ಸೂಚಿಸಿದ್ದಾರೆ. ಕಳೆದ ಜನವರಿ 24ರಂದು ನಾಗಮಂಗಲದ ಕಲ್ಲುದೇವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಕುಮಾರಸ್ವಾಮಿ ಅವರ ಕಾರನ್ನು ರಸ್ತೆಯಲ್ಲಿ ಕೈ ತೋರಿಸಿ ನಿಲ್ಲಿಸಿದ್ದರು.
ಆ ಮಹಿಳೆ, ಪತಿ ಸತ್ತುಹೋಗಿದ್ದಾರೆ. 3 ಹೆಣ್ಣುಮಕ್ಕಳು. ಒಬ್ಬಳಿಗೆ ಮದುವೆಯಾಗಿದೆ. ಮತ್ತಿಬ್ಬರ ಮದುವೆ ಮಾಡಬೇಕು ಎಂದು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದರು. ಇಬ್ಬರು ಮಕ್ಕಳು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಹೋಗಿದ್ದಾರೆ. ನಾನು ಈಗ ಒಬ್ಬಂಟಿ. ಇಳಿವಯಸ್ಸಿನಲ್ಲೂ ದುಡಿದು ಬದುಕುತ್ತಿದ್ದೇನೆ. ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸಿ ಎಂದು ಆ ಮಹಿಳೆಯ ಎಚ್ಡಿಕೆ ಮುಂದೆ ಕಣ್ಣೀರು ಹಾಕಿದ್ದರು.
ಬೆಂಗಳೂರಿನ ಜೆಪಿ ನಗರದ ನನ್ನ ನಿವಾಸಕ್ಕೆ ನಿಮ್ಮ ಮಗಳನ್ನು ಕಳುಹಿಸಿ. ಅವಳಿಗೆ ಖಾಸಗಿ ಸಂಸ್ಥೆಯಲ್ಲಿ ಒಂದು ಒಳ್ಳೆಯ ಉದ್ಯೋಗ ಕೊಡಿಸುತ್ತೇನೆ ಎಂದು ಆ ಮಹಿಳೆಗೆ ಕುಮಾರಸ್ವಾಮಿ ಸಾಂತ್ವನ ಹೇಳಿದ್ದರು.












Click it and Unblock the Notifications