ಬಿಜೆಪಿ ಶಾಸಕನ ಫೋನ್ ಕದ್ದಾಲಿಕೆ; ಸಿದ್ದರಾಮಯ್ಯ ಸರಣಿ ಟ್ವೀಟ್
ಬೆಂಗಳೂರು, ಜೂನ್ 17; "ನನ್ನ ಫೋನ್ ಕೂಡ ಕದ್ದಾಲಿಕೆ ಆಗುತ್ತಿದೆ. ನನ್ನ ಫೋನ್ ಅನ್ನು ಮಾನಿಟರ್ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಈ ರೀತಿ ಎಲ್ಲಾ ಆಗುತ್ತಿದೆ" ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನೀಡಿರುವ ಹೇಳಿಕೆ ಇದು.
ಗುರುವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ಬಳಿಕ ಅರವಿಂದ ಬೆಲ್ಲದ್ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರ ಹೇಳಿಕೆ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಆಡಳಿತ ಪಕ್ಷದ ಶಾಸಕರೇ ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಹೇಳಿರುವುದು ಪ್ರತಿಪಕ್ಷಗಳಿಗೆ ಸರ್ಕಾರದ ಮೇಲೆ ಟೀಕೆ ಮಾಡಲು ಅಸ್ತ್ರ ನೀಡಿದಂತೆ ಆಗಿದೆ. ಅರವಿಂದ ಬೆಲ್ಲದ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ.
ಶಾಸಕ ಅರವಿಂದ ಬೆಲ್ಲದ್ ಹೇಳಿಕೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿಲ್ಲ. ಫೋನ್ ಟ್ಯಾಪ್ ಆಗಿರುವ ಕುರಿತು ಈಗಾಗಲೇ ದೂರು ನೀಡಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.
|
ಅರವಿಂದ ಬೆಲ್ಲದ್ಗೆ ಅಭಿನಂದನೆ
'ಪೋನ್ ಕದ್ದಾಲಿಕೆಯನ್ನು ಬಹಿರಂಗಪಡಿಸುವ ಧೈರ್ಯ ತೋರಿದ ಶಾಸಕ ಅರವಿಂದ ಬೆಲ್ಲದ ಅವರನ್ನು ಅಭಿನಂದಿಸುತ್ತೇನೆ. ಇತರ ಭಿನ್ನಮತೀಯ ಶಾಸಕರು ಮತ್ತು ವಿರೋಧಪಕ್ಷದ ನಾಯಕರ ಪೋನ್ಗಳ ಕದ್ದಾಲಿಕೆ ನಡೆದಿರುವ ಸಾಧ್ಯತೆಗಳೂ ಇವೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಶಾಸಕರು ದೇಶದ್ರೋಹಿಯೇ?
'ಪೋನ್ ಕದ್ದಾಲಿಕೆ ನಡೆಸಲು ಶಾಸಕ ಅರವಿಂದ್ ಬೆಲ್ಲದ್ ಅವರೇನು ಕ್ರಿಮಿನಲ್ ವ್ಯಕ್ತಿಯೇ?. ದೇಶದ್ರೋಹಿಯೇ? ಶಾಸಕರ ವಿಶ್ವಾಸ ಕಳೆದುಕೊಂಡಿರುವ ಬಿ. ಎಸ್. ಯಡಿಯೂರಪ್ಪ ಅವರು ಕುರ್ಚಿ ಉಳಿಸಿಕೊಳ್ಳಲು ಇಂತಹ ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
|
ತನಿಖೆಗಾಗಿ ಸಿದ್ದರಾಮಯ್ಯ ಆಗ್ರಹ
'ಪೋನ್ ಕದ್ದಾಲಿಕೆಯ ಆರೋಪದ ಗುರಿ ಮುಖ್ಯಮಂತ್ರಿಗಳೇ ಆಗಿರುವುದರಿಂದ ರಾಜ್ಯಸರ್ಕಾರದ ನಿಯಂತ್ರಣದಲ್ಲಿರುವ ಯಾವ ಸಂಸ್ಥೆಯಿಂದ ತನಿಖೆ ನಡೆಸಿದರೂ ಸತ್ಯ ಸಂಗತಿ ಹೊರಬರಲಾರದು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ತನಿಖೆಯೇ ಸೂಕ್ತ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯುವರಾಜ ಸ್ವಾಮಿ ಬಗ್ಗೆ ತನಿಖೆಯಾಗಲಿ
'ಶಾಸಕ ಅರವಿಂದ್ ಬೆಲ್ಲದ್ ತಮ್ಮ ಆರೋಪದಲ್ಲಿ ಕ್ರಿಮಿನಲ್ ಕೃತ್ಯಗಳ ಆರೋಪ ಹೊತ್ತು ಜೈಲಲ್ಲಿರುವ ಯುವರಾಜ ಸ್ವಾಮಿ ಎಂಬ ವ್ಯಕ್ತಿಯ ಹೆಸರು ಪ್ರಸ್ತಾಪಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಒಡನಾಟದಲ್ಲಿದ್ದ ಈ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖೆಯಾಗಲಿ" ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
|
ಅಧಿಕಾರ ಲಾಲಸೆಯ ಅಸಹ್ಯ ರೂಪ
'ಜನರ ಮತದಿಂದಾಗಲಿ,ಶಾಸಕರ ವಿಶ್ವಾಸದಿಂದಾಗಲಿ ಅಧಿಕಾರ ಗಳಿಸದೆ ಅಕ್ರಮಗಳಿಕೆಯ ಹಣದ ಬಲದಿಂದ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Recommended Video

ಸ್ಪೀಕರ್ ಮಧ್ಯ ಪ್ರವೇಶವಾಗಬೇಕು
ಪೋನ್ ಕದ್ದಾಲಿಕೆಯ ಆರೋಪದಲ್ಲಿ ಮುಖ್ಯಮಂತ್ರಿಗಳೇ
ಆರೋಪಿ ಸ್ಥಾನದಲ್ಲಿರುವುದರಿಂದ, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಕ್ಷಣ ಮಧ್ಯೆ ಪ್ರವೇಶಿಸಿ ಪ್ರಕರಣದ ತನಿಖೆಗೆ ಆದೇಶಿಸುವ ಮೂಲಕ ಸದನದ ಸದಸ್ಯರಿಗೆ ರಕ್ಷಣೆ ನೀಡಲು ಮುಂದಾಗಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.












Click it and Unblock the Notifications