ಮಾಗಡಿ ರಂಗನಾಥಸ್ವಾಮಿ ಮುಂದೆ ಅರ್ಚಕರ ಕಿತ್ತಾಟ!
ರಾಮನಗರ, ನ. 16 : ಪಶ್ಚಿಮ ವೆಂಕಟಾಚಲಪತಿ ಎಂದು ಪ್ರಸಿದ್ಧ ಪಡೆದಿರುವ, ತಿರುಪತಿಗೆ ಹೋಗಲಾರದವರು ಇಲ್ಲಿ ಬಂದು ಶ್ರೀ ರಂಗನ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹೊಂದಿರುವ ಜಿಲ್ಲೆಯ ಮಾಗಡಿ ತಾಲೂಕಿನ ಮಾಂಡವ್ಯ ಕುಟಿ ತಿರುಮಲ ಶ್ರೀರಂಗನಾಥಸ್ವಾಮಿ ದೇವಾಲಯದ ಅರ್ಚಕರು ಬಡಿದಾಡಿಕೊಂಡು ಸುದ್ದಿಯಲ್ಲಿದ್ದಾರೆ.
ತಿರುಮಲ ಶ್ರೀರಂಗನಾಥಸ್ವಾಮಿ ದೇವಾಲಯ ರಾಮನಗರ ಜಿಲ್ಲೆಯ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ ಸರ್ಕಾರದಿಂದ ನೇಮಕವಾದ ಕೃಷ್ಣ ಅಯ್ಯಂಗಾರ್ ಮತ್ತು ವೆಂಕಟೇಶ್ ಅಯ್ಯಂಗಾರ್ ಎಂಬ ಇಬ್ಬರು ಅರ್ಚಕರಿದ್ದಾರೆ. ಉಳಿದಂತೆ ವಂಶಪಾರಂಪರ್ಯದ ಆಧಾರದ ಮೇಲೆ ಮುಖ್ಯ ದೇವಾಲಯದ ಅಕ್ಕ-ಪಕ್ಕದ ಗುಡಿಗಳಲ್ಲಿ ಕೆಲವು ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ.
ಗರ್ಭಗುಡಿಯಲ್ಲಿ ಪೂಜೆ ಮಾಡುವ ಅರ್ಚರಕರ ಮಂಗಳಾರತಿ ತಟ್ಟೆಗೆ ಅಧಿಕ ದಕ್ಷಿಣೆ ಬೀಳುತ್ತದೆ. ಆದ್ದರಿಂದ ಇಲ್ಲಿ ಗರ್ಭಗುಡಿಯ ಪೂಜೆಯನ್ನು ಯಾವ ಅರ್ಚಕರೂ ಮತ್ತೊಬ್ಬರಿಗೆ ಬಿಟ್ಟು ಕೊಡುವುದಿಲ್ಲ. ಕೃಷ್ಣ ಅಯ್ಯಂಗಾರ್ ಕಳೆದ ಎರಡು ವರ್ಷಗಳಿಂದಲೂ ಮೂಲ ದೇವಾಲಯದ ಪೂಜೆ ಸಲ್ಲಿಸುತ್ತಿದ್ದಾರೆ. ವಂಶಪಾರಂಪರ್ಯದ ಆಧಾರದ ಮೇಲೆ ಗೋವಿಂದರಾಜನ್ ಎಂಬುವವರು ಇಲ್ಲಿ ಪೂಜೆ ಮಾಡುತ್ತಾರೆ. ಕೃಷ್ಣ ಅಯ್ಯಂಗಾರ್ ಸಹೋದರರಾದ ಕೀರ್ತಿ ಮತ್ತು ಶ್ರೀನಿವಾಸ್ ರಂಗನ್ ಅವರು ಪೂಜೆಗೆ ಸಹಾಯ ಮಾಡುತ್ತಾರೆ.
ವಂಶಪಾರಂಪರ್ಯದ ಆಧಾರದ ಮೇಲೆ ನೇಮಕಗೊಂಡಿರುವ ವೆಂಕಟೇಶ್ ಅಯ್ಯಂಗಾರ್ ಅವರ ಸಂಬಂಧಿ ಸತೀಶ್ 11 ಆಳ್ವಾರ್ ಪ್ರತಿಮೆಗಳನ್ನು ಶ್ರೀಶೈಲಂನಲ್ಲಿ ಸುಮಾರು 8 ಲಕ್ಷ ರೂ.ಗಳಲ್ಲಿ ಮಾಡಿಸಿ, ಶುಕ್ರವಾರ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲು ತಂದಿದ್ದರು. ಈ ಸಮಯದಲ್ಲಿ ಅರ್ಚಕರ ನಡುವೆ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬೈಯ್ದಾಟ, ಹೊಡೆದಾಟ ನಡೆಯಿತು. ಕೊನೆಗೂ ಪ್ರತಿಷ್ಠಾಪನೆ ಮುಗಿದು, ಕಾಣಿಕೆ ಹಣದ ವಿವಾದ ಹುಟ್ಟಿಕೊಂಡಿತು. ವಿವಾದ ತಹಶೀಲ್ದಾರ್ ಕಚೇರಿವರೆಗೂ ತಲುಪಿ ದೊಡ್ಡ ಸುದ್ದಿಯಾಯಿತು. (ಚಿತ್ರಗಳಲ್ಲಿ ದೇವಾಲಯದ ಜಟಾಪಟಿ)
ವಿವಾದದ ಆರಂಭ
ವೆಂಕಟೇಶ್ ಅಯ್ಯಂಗಾರ್ ಸಂಬಂಧಿಯಾದ ಸತೀಶ್ ದೇವಾಲಯದ ಅಭಿವೃದ್ಧಿಗಾಗಿ ಶ್ರೀರಂಗ ಟ್ರಸ್ಟ್ ರಚಿಸಿಕೊಂಡಿದ್ದಾರೆ. ದೇವಾಲಯಕ್ಕೆ ವಜ್ರದ ಕಿರೀಟ, ಉತ್ಸವ ಮೂರ್ತಿಗೆ 60 ಲಕ್ಷದ ಚಿನ್ನದ ಕಿರೀಟ ಸಮರ್ಪಿಸಿದ್ದಾರೆ. ಶುಕ್ರವಾರ ಇವರು 6 ಲಕ್ಷ ವೆಚ್ಚದಲ್ಲಿ ಮಾಡಿಸಿಕೊಂಡು ಬಂದ ಆಳ್ವಾಸ್ ಪ್ರತಿಮೆ ಪ್ರತಿಷ್ಠಾಪನೆ ಮಾಡುವಾಗ ಅರ್ಚಕರ ನಡುವೆ ಜಟಾಪಟಿ ನಡೆದಿದೆ. ಪ್ರತಿಮೆಗಳಿಗೆ ಮೂಲ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಬೇಕಾಗಿತ್ತು. ಆದರೆ, ಮೂಲ ದೇವಾಲಯದ ಅರ್ಚಕರಾದ ಕೃಷ್ಣ ಅಯ್ಯಂಗಾರ್ ಪೂಜೆಗೆ ಅವಕಾಶ ನೀಡದೆ ಗರ್ಭಗುಡಿಗೆ ಬಾಗಿಲು ಹಾಕಿಕೊಂಡು ಹೋಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಪೂಜೆ ನಡೆಯಿತು
ದೇವಾಲಯಕ್ಕೆ ಸಾಕಷ್ಟು ದಾನ ಮಾಡಿರುವ ಸತೀಶ್ ಅವರು ಗುರುವಾರ ರಾತ್ರಿಯಿಂದಲೇ ಮೂಲ ದೇವರ ಗುಡಿಯ ಬಾಗಿಲಿಗೇ ಪೂಜೆ ಮಾಡಿ ಆಳ್ವಾರ್ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆಳ್ವಾರ್ ಪ್ರತಿಮೆ ಪ್ರತಿಷ್ಠಾಪನೆ ನಡೆಯಬೇಕಾಗಿತ್ತು. ಈ ಸಂದರ್ಭದಲ್ಲಿ ದೇವದ ಉತ್ಸವ ಮೂರ್ತಿಯನ್ನು ಫೂಜೆ ನಡೆಯುತ್ತಿದ್ದ ಸ್ಥಳಕ್ಕೆ ತರದ ಕೃಷ್ಣ ಅಯ್ಯಂಗಾರ್, ನೀವು ನಿಮ್ಮಿಷ್ಟದಂತೆ ಕಾರ್ಯಕ್ರಮ ನಡೆಸತ್ತೀರಿ ನಮ್ಮ ಗಮನಕ್ಕೆ ತರೆದೇ ಕಾರ್ಯಕ್ರಮ ಮಾಡುತ್ತೀರಿ ಎಂದು ಹೇಳಿದ್ದಾರೆ, ಇದು ಅರ್ಚಕರ ನಡುವಿನ ಜಟಾಪಟಿಗೆ ವೇದಿಕೆ ಒದಗಿಸಿತು.
ಕೃಷ್ಣ ಅಯ್ಯಂಗಾರ್ ವಿರುದ್ಧ ತಿರುಗಿ ಬಿದ್ದರು
ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಸತೀಶ್ ಅವರೊಂದಿಗೆ ಸಹಕರಿಸದೇ ಉದ್ಧಟತನ ತೋರಿದ ಕೃಷ್ಣ ಅಯ್ಯಂಗಾರ್ ವಿರುದ್ಧ ಭಕ್ತರು ಮತ್ತು ಅರ್ಚಕರು ತಿರುಗಿ ಬಿದ್ದರು. ಕೃಷ್ಣ ಅಯ್ಯಂಗಾರ್ ತಂದೆ ಗೋವಿಂದ ರಂಜನ್, ಸಹೋದರ ಶ್ರೀನಿವಾಸ್ ರಂಗನ್, ಸತೀಶ್ ಸಂಬಂಧಿ ಅರ್ಚಕರಾದ ವೆಂಕಟೇಶ್ ಅಯ್ಯಂಗಾರ್ ಅವರ ಸಹೋದರರಾದ ಶ್ರೀರಂಗ, ರಂಗಣ್ಣ ಮುಂತಾದವರ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಜಟಾಪಟಿ ನಡೆಯಿತು.
ಕಣ್ಣೀರು ಹಾಕಿದ ಸತೀಶ್
ನೂರಾರು ಭಕ್ತಾದಿಗಳ ಮುಂದೆಯೇ ದೇವರ ಪೂಜೆಯನ್ನು ನಿಲ್ಲಿಸಿ ಅರ್ಚಕರು ಬೈಯ್ದಾಟ ಮಾಡುವುದನ್ನು ನೋಡಿದ ಸತೀಶ್ ಕಣ್ಣೀರು ಹಾಕುತ್ತಾ ಸ್ಥಳದಿಂದ ಹೊರ ನಡೆದರು. ಆದರೆ, ಗ್ರಾಮಸ್ಥರು ಅವರನ್ನು ಸಮಾಧಾನ ಪಡಿಸಿ, ಆಳ್ವಾರ್ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ನಡೆಯುವಂತೆ ನೋಡಿಕೊಂಡರು.
ತಹಶೀಲ್ದಾರ್ ಆಗಮನ
ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಿವಕುಮಾರ್ ಮತ್ತು ಉಪ ತಹಶೀಲ್ದಾರ್ ಗುರುಲಿಂಗಯ್ಯ ಭಕ್ತರಿಂದ ಘಟನೆಯ ವಿವರ ಪಡೆದರು. ಮೂಲ ದೇವಾಲಯದ ಅರ್ಚಕರಾದ ಕೃಷ್ಣ ಅಯ್ಯಂಗಾರ್ ಅಭಿಷೇಕ ಉತ್ಸವಗಳಿಗೆ ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚು ವಸೂಲಿ ಮಾಡುವುದು, ಅವರ ಸರ್ವಾಧಿಕಾರಿ ಧೋರಣೆ ಮುಂತಾದವುಗಳ ಬಗ್ಗೆ ಭಕ್ತರು ತಹಶೀಲ್ದಾರ್ ಅವರಿಗೆ ದೂರು ಕೊಟ್ಟರು.
ತಹಶೀಲ್ದಾರ್ ತಾಕೀತು
ಅರ್ಚಕರ ಜಟಾಪಟಿ ಮತ್ತು ಹಣ ವಸೂಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಹಶೀಲ್ದಾರ್ ದೇವಾಲಯದಲ್ಲಿ ಯಾವುದೇ ಉತ್ಸವ ನಡೆದರೆ ಪಾರುಪತ್ತೆಗಾರರಿಂದ ರಶೀದಿ ಪಡೆದು ಪೂಜೆ ನಡೆಸಬೇಕು ಎಂದು ಅರ್ಚಕರಿಗೆ ತಾಕೀತು ಮಾಡಿದ್ದಾರೆ.
ಧರ್ಮದರ್ಶಿ ಸಮಿತಿ ಹೆಸರಿಗೆ ಮಾತ್ರ
ದೇವಾಲಯದ ಸನ್ನಿಧಾನದಲ್ಲಿ ಖಾಸಗಿ ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯ ವರೆಗೂ ಧರ್ಮದರ್ಶಿ ಸಮಿತಿಗೆ ಸರಿಯಾದ ವ್ಯಕ್ತಿಗಳನ್ನು ನೇಮಿಸಿಲ್ಲ. ಹಿಂದೆ ಮಾಜಿ ಸಚಿವ ಜೆಡಿಎಸ್ ನಾಯಕ ಎಚ್.ಎಂ.ರೇವಣ್ಣ ಬೆಂಗಲಿಗರು ಧರ್ಮದರ್ಶಿ ಸಮಿತಿಯಲ್ಲಿದ್ದರು, ಸದ್ಯ ಶಾಸಕ ಬಾಲಕೃಷ್ಣ ಅವರ ಬೆಂಬಲಿಗರು ಸಮಿತಿಯಲ್ಲಿದ್ದಾರೆ ಇವರು ಹೆಸರಿಗೆ ಮಾತ್ರ ದೇವಾಲಯದ ಧರ್ಮದರ್ಶಿ ಪಟ್ಟಿಯಲ್ಲಿದ್ದಾರೆ.