ಸಂಪುಟ, ಖಾತೆ ಹಂಚಿಕೆ ಬಳಿಕ ಯಡಿಯೂರಪ್ಪ ಮುಂದೆ ಮತ್ತೊಂದು ಸವಾಲು
Recommended Video
ಬೆಂಗಳೂರು, ಆಗಸ್ಟ್ 29: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ಪಕ್ಷದಲ್ಲಿ ಎದ್ದಿರುವ ಅಸಮಾಧಾನದಿಂದ ಈಗಾಗಲೇ ಹೈರಾಣಾಗಿರುವ ಯಡಿಯೂರಪ್ಪ ಅವರಿಗೆ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ಈಗ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡುವ ಸವಾಲು ಯಡಿಯೂರಪ್ಪ ಅವರ ಮುಂದಿದ್ದು, ಅದರಿಂದ ಉದ್ಭವವಾಗಬಹುದಾದ ಅಸಮಾಧಾನವನ್ನು ಎದುರಿಸಲು ಯಡಿಯೂರಪ್ಪ ಸಿದ್ಧವಾಗಬೇಕಿದೆ.
ಎಲ್ಲ ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಯಡಿಯೂರಪ್ಪ ನೇಮಿಸಬೇಕಿದೆ. ಸರ್ಕಾರದ ಅನುದಾನದ ಹಂಚಿಕೆ, ಪಕ್ಷ ಸಂಘಟನೆ ಎರಡೂ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ನೇಮಕ ಮಹತ್ವದ್ದಾಗಿದ್ದು, ಜಿಲ್ಲಾ ಉಸ್ತುವಾರಿ ನೇಮಕದ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಹೆಚ್ಚಿಗೆ ಇವೆ.

ಪ್ರಮುಖ ಜಿಲ್ಲೆಗಳಿಗೆ ಬೇಡಿಕೆ ಹೆಚ್ಚಿದೆ
ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳ ಹೊಣೆಗಾರಿಕೆಯನ್ನು ಯಾರಿಗೆ ನೀಡುವುದು ಎಂಬುದು ಯಡಿಯೂರಪ್ಪ ಅವರಿಗೆ ತಲೆನೋವಾಗಿದೆ. ಬೆಂಗಳೂರು ಉಸ್ತುವಾರಿ ಸ್ಥಾನಕ್ಕೆ ಈಗಾಗಲೇ ಪ್ರಮುಖ ಮುಖಂಡರೇ ಬೇಡಿಕೆ ಇಟ್ಟಿದ್ದಾರೆ.

ಹಲವು ಲೆಕ್ಕಾಚಾರಗಳು ಉಸ್ತುವಾರಿ ನೇಮಕದಲ್ಲಿ ಇದೆ
ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೂ ಬೇಡಿಕೆ ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಜಾತಿ ಲೆಕ್ಕಾಚಾರ, ಪ್ರಾದೇಶಿಕತೆ ಲೆಕ್ಕಾಚಾರವೂ ಮಿಳಿತವಾಗಿರುವುದರಿಂದ ಯಡಿಯೂರಪ್ಪ ಅವರಿಗೆ ಇದು ಸವಾಲೆನಿಸಿದೆ.

ಸಂಪುಟ ವಿಸ್ತರ, ಖಾತೆ ಹಂಚಿಕೆಯಿಂದ ಬಿಜೆಪಿಯಲ್ಲಿ ಅಸಮಾಧಾನ
ಈಗಾಗಲೇ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಎದ್ದಿದ್ದು, ಅದರ ಬೇಗುದಿಯೇ ಇನ್ನೂ ಆರಿಲ್ಲ. ಇಂತಹಾ ಸಮಯದಲ್ಲಿ ಜಿಲ್ಲಾ ಉಸ್ತುವಾರಿಗಳ ನೇಮಕ ಇನ್ನಷ್ಟು ಅಸಮಾಧಾನಕ್ಕೆ ಕಾರಣ ಆಗಬಹುದು ಎಂಬ ಆತಂಕ ಇದೆ. ಹಾಗಾಗಿ ಜಿಲ್ಲಾ ಉಸ್ತುವಾರಿಗಳ ನೇಮಕವನ್ನು ತಡ ಮಾಡುವ ಸಾಧ್ಯತೆಯೂ ಇದೆ.

ಅಸಮಾಧಾನದ ಕಿಚ್ಚು ಹೊತ್ತಿಸಿದ್ದ ಉಸ್ತುವಾರಿ ಸಚಿವ ಸ್ಥಾನ
ಮೈತ್ರಿ ಸರ್ಕಾರದ ಅವಧಿಯಲ್ಲಿ ಇದೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದಲೇ ಆರಂಭವಾದ ಅಸಮಾಧಾನದ ಕಿಡಿ ಸರ್ಕಾರವನ್ನು ಉರುಳಿಸುವವರೆಗೂ ಮುಂದುವರೆದಿತ್ತು. ಡಿ.ಕೆ.ಶಿವಕುಮಾರ್ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಿದ್ದನ್ನು ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ವಿರೋಧಿಸಿದ್ದರು. ಇಲ್ಲಿ ಹೊತ್ತಿಕೊಂಡ ಬೆಂಕಿ ಸರ್ಕಾರದ ಅವಸಾನದಲ್ಲಿ ಕೊನೆಯಾಯಿತು.












Click it and Unblock the Notifications