ಸ್ಪೀಕರ್ ಆಗಿ ಬೋಪಯ್ಯ: ಖಚಿತ ಗೆಲುವಿನ ಭರವಸೆಯಲ್ಲಿ ಬಿಜೆಪಿ?
ಮತಎಣಿಕೆಗಿಂತಲೂ ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ನಾಳೆ (ಮೇ 19) ನಡೆಯಲಿರುವ ವಿಶ್ವಾಸ ಮತಯಾಚನೆಗೂ ಮುನ್ನ, ಸ್ಪೀಕರ್ ಆಗಿ ಕೆ ಜೆ ಬೋಪಯ್ಯ ಅವರನ್ನು ರಾಜ್ಯಪಾಲರು ನೇಮಿಸಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮೊದಲೇ ಸಂಖ್ಯಾಬಲದಲ್ಲಿ ಹಿಂದೆ ಇರುವ ಬಿಜೆಪಿ ಮತ್ತೊಂದು ಸ್ಥಾನವನ್ನು ವೋಟಿಂಗ್ ಪ್ರಕ್ರಿಯೆಯಲ್ಲಿ ಕಳೆದುಕೊಳ್ಲಲು ಸಿದ್ದವಿದೆಯೇ ಎನ್ನುವ ಪ್ರಶ್ನೆ ಜೆಡಿಎಸ್ ಮತ್ತು ಕಾಂಗ್ರೆಸ್ ವಲಯದಲ್ಲಿ ಈಗ ಕಾಡಲಾರಂಭಿಸಿದೆ. ಬಿಜೆಪಿ ತನ್ನ 104ಶಾಸಕರಲ್ಲಿ ಯಾರನ್ನೂ ಸ್ಪೀಕರ್ ಹುದ್ದೆಗೆ ಸೂಚಿಸದೇ ಇದ್ದರೂ ನಡೆಯುತ್ತಿತ್ತು.
ಕಾನೂನಿನ ಪ್ರಕಾರ ಆರ್ ವಿ ದೇಶಪಾಂಡೆಯವರನ್ನು ರಾಜ್ಯಪಾಲರು ಆಯ್ಕೆ ಮಾಡಬಹುದಾಗಿದ್ದರೂ, ಮಾಜಿ ಸ್ಪೀಕರ್ ಆಗಿರುವ ಬೋಪಯ್ಯ ಅವರನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವ ಪಕ್ಷದ ನಡೆಯ ಹಿಂದೆ, ಬಿಜೆಪಿ ಗೆಲುವಿನ ಖಚಿತ ಗೆಲುವಿನ ಭರವಸೆಯಲ್ಲಿ ಇದೆಯಾ ಎನ್ನುವ ಕುತೂಹಲ ಮನೆಮಾಡಿದೆ.
ನಾಳೆ ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯಲ್ಲಿ ತಮ್ಮವರೇ ಸ್ಪೀಕರ್ ಸ್ಥಾನದಲ್ಲಿದ್ದರೆ ಉತ್ತಮ ಎನ್ನುವ ಲೆಕ್ಕಾಚಾರ ಒಂದೆಡೆಯಾದರೆ, ಬಿಜೆಪಿ ಈಗಾಗಲೇ 120 ಶಾಸಕರ ಬಲವನ್ನು ಸಂಪಾದಿಸಿಯಾಗಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.
ಒಂದೊಂದು ಮತವೂ ನಿರ್ಣಾಯಕವಾಗಿರುವ ಈ ಹೊತ್ತಿನಲ್ಲಿ ಸಮಬಲವಾದರೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ಹೊಂದಿರುವ ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ತಮ್ಮದೇ ಪಕ್ಷದ ಶಾಸಕರೊಬ್ಬರನ್ನು ಆಯ್ಕೆಮಾಡಿರುವ ಹಿಂದೆ, ಬಿಜೆಪಿಯ ರಾಜಕೀಯ ಲೆಕ್ಕಾಚಾರ ಏನಿರಬಹುದು ಎನ್ನುವುದು ನಿಗೂಢವಾಗಿದೆ. ಮುಂದೆ ಓದಿ..

ಬೋಪಯ್ಯ ಅವರು ಹಿರಿಯ ಶಾಸಕರಲ್ಲ. ಮೂರು ಬಾರಿ ಶಾಸಕರಾಗಿದ್ದಾರಷ್ಟೇ
ಸ್ಪೀಕರ್ ಆಯ್ಕೆ ಸಂಬಂಧ ಕಾಂಗ್ರೆಸ್ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್ ಮೆಟ್ಟಲೇರಲಿದೆ. ಬೋಪಯ್ಯ ಅವರು ಹಿರಿಯ ಶಾಸಕರಲ್ಲ. ಮೂರು ಬಾರಿ ಶಾಸಕರಾಗಿದ್ದಾರಷ್ಟೇ. ಶನಿವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಎಂಟು ಸ್ಥಾನದ ಕೊರತೆಯಲ್ಲಿರುವ ಬಿಜೆಪಿ
ಬಹುಮತ ಸಾಬೀತು ಪಡಿಸಲು ಇನ್ನೂ ಎಂಟು ಸ್ಥಾನದ ಕೊರತೆಯಲ್ಲಿರುವ ಬಿಜೆಪಿ, ಇಂತಹ ಸಮಯದಲ್ಲಿ ಬೋಪಯ್ಯ ಅವರನ್ನು ನೇಮಿಸಿದ್ದರಿಂದ ಪ್ರಾಕ್ಟಿಕಲ್ ಆಗಿ ಮತ್ತೊಂದು ಸ್ಥಾನವನ್ನು ಕಮ್ಮಿಮಾಡಿಕೊಂಡಂತೆ. ಆದರೆ, ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚನ್ನು ಪಡೆದುಕೊಂಡಾಗಿದೆ, ಒಂದು ಸ್ಥಾನ ಹೋದರೆ ಹೋಗಲಿ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದೆಯೇ ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ.

120ಕ್ಕೂ ಹೆಚ್ಚು ಶಾಸಕರು ನಮ್ಮನ್ನು ಬೆಂಬಲಕ್ಕೆ ಇದ್ದಾರೆ
ಇದಕ್ಕೆಲ್ಲಾ ಇಂಬು ಕೊಡುವಂತೆ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಈಶ್ವರಪ್ಪ ಮುಂತಾದ ಬಿಜೆಪಿಯ ಹಿರಿಯ ಮುಖಂಡರು ಗೆದ್ದೇ ಗೆಲ್ಲುತ್ತೇವೆ. 120ಕ್ಕೂ ಹೆಚ್ಚು ಶಾಸಕರು ನಮ್ಮನ್ನು ಬೆಂಬಲಕ್ಕೆ ಇದ್ದಾರೆಂದು ಅತಿಯಾದ ವಿಶ್ವಾಸದಿಂದ ಹೇಳುತ್ತಿರುವುದನ್ನು ನೋಡಿದರೆ, ಬಿಜೆಪಿ ಈಗಾಗಲೇ ಸಂಖ್ಯಾಬಲಕ್ಕೆ ಏನು ಬೇಕೋ, ಅದಕ್ಕೆ ವ್ಯವಸ್ಥೆ ಮಾಡಿಕೊಂಡಾಗಿದೆಯೇ ಎಂದು ಅನುಮಾನಿಸುವಂತಾಗಿದೆ.

ಸೋಮವಾರದ ವರೆಗೆ ಬಹುಮತ ಸಾಬೀತು ಪಡಿಸಲು ಸಮಯಾವಕಾಶ
ಇನ್ನೊಂದೆಡೆ, ಶುಕ್ರವಾರ (ಮೇ 18) ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ನಾಳೆಯ ಬದಲು ಸೋಮವಾರದ ವರೆಗೆ ಬಹುಮತ ಸಾಬೀತು ಪಡಿಸಲು ಸಮಯಾವಕಾಶ ನೀಡಬೇಕು ಎಂದು ಬಿಜೆಪಿ ಪರ ವಕೀಲ ರೋಹ್ಟಗಿ ಮನವಿ ಸಲ್ಲಿಸಿದ್ದನ್ನು ನೋಡಿದರೆ, ಬಿಜೆಪಿ ಗೊಂದಲದಲ್ಲಿದೆಯೋ ಅಥವಾ ಗೊಂದಲಕ್ಕೀಡು ಮಾಡುತ್ತಿದೆಯೋ ಎನ್ನುವ ಅನುಮಾನ ಕಾಡದೇ ಇರದು.

ಕಾಂಗ್ರೆಸ್ಸಿನ ಲಿಂಗಾಯತ ಸಮುದಾಯದ ಶಾಸಕರನ್ನು ಬಿಜೆಪಿ ನೆಚ್ಚಿಕೊಂಡಿದೆಯೇ?
ಬಿಜೆಪಿ ನಾಳಿನ ವಿಶ್ವಾಸಮತ ಗೆಲ್ಲಬೇಕಾದರೆ ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರನ್ನೇ ನಂಬಿರುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ, ಕೆಲವೊಂದು ಮಾಹಿತಿಗಳ ಪ್ರಕಾರ ಕಾಂಗ್ರೆಸ್ಸಿನ ಲಿಂಗಾಯತ ಸಮುದಾಯದ ಶಾಸಕರನ್ನು ಬಿಜೆಪಿ ನೆಚ್ಚಿಕೊಂಡಿದೆಯೇ? ಅವರು ಬಿಜೆಪಿ ಪರ ನಿಲ್ಲಲಿದ್ದಾರಾ ಅಥವಾ ಕಾಂಗ್ರೆಸ್ಸಿಗೆ ತಮ್ಮ ನಿಷ್ಠೆ ಮುಂದುವರಿಸಲಿದ್ದಾರಾ ಎನ್ನುವುದನ್ನು ತಿಳಿದುಕೊಳ್ಳಲು ಶನಿವಾರ ಸಾಯಂಕಾಲದ ವರೆಗೆ ಕಾದರೆ ಸಾಕು...












Click it and Unblock the Notifications