ರೈತರ ಪ್ರತಿಭಟನೆ: ಸಿದ್ದರಾಮಯ್ಯಗೆ ತೀವ್ರ ಮುಜುಗರ ತಂದೊಡ್ಡಿದ ಅವರು ಬರೆದಿದ್ದ 7ವರ್ಷದ ಹಿಂದಿನ 'ಆ ಪತ್ರ'
ಬೆಂಗಳೂರು, ಡಿ 9: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಅನ್ನದಾತರ ಹೋರಾಟಕ್ಕೆ ವ್ಯಾಪಲ ಬೆಂಬಲ ವ್ಯಕ್ತವಾಗುತ್ತಿದೆ.
ಇನ್ನು, ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲೂ ರೈತರ ಹೋರಾಟದ್ದೇ ಸದ್ದು. ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ರೈತ ಪರ ಮತ್ತು ಕನ್ನಡ ಪರ ಸಂಘಟನೆಗಳು ಬಾರುಕೋಲು ಚಳುವಳಿಯನ್ನು ನಡೆಸುತ್ತಿವೆ.
ಇವೆಲ್ಲದರ ನಡುವೆ, ಪ್ರತಿಭಟನಾ ನಿರತ ರೈತ ಮುಖಂಡರನ್ನು ಸಭೆಗೆ ಬರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ (ಡಿ 9) ಆಹ್ವಾನಿಸಿದ್ದಾರೆ. ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ಅವಶ್ಯಕತೆ ಇದ್ದಲ್ಲಿ ತಿದ್ದುಪಡಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ನೂತನ ಕೃಷಿ ಕಾಯ್ದೆ, ಬೆಂಬಲ ಬೆಲೆ, ಎಪಿಎಂಸಿ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದರು. ಆ ವೇಳೆ, ತಾವು ಹಿಂದೆ ಬರೆದಿದ್ದ ಪತ್ರವೊಂದು ಬಹಿರಂಗಗೊಂಡಾಗ ತೀವ್ರ ಮುಜುಗರಕ್ಕೀಡಾದ ಘಟನೆ ಅಸೆಂಬ್ಲಿಯಲ್ಲಿ ನಡೆದಿದೆ.

ನಿಲುವಳಿ ಸೂಚನೆಯಡಿ ಮಾತನಾಡುತ್ತಿದ್ದ ಸಿದ್ದರಾಮಯ್ಯ
ನಿಲುವಳಿ ಸೂಚನೆಯಡಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕೇಂದ್ರ ಸರಕಾರ ನಿಗದಿ ಪಡಿಸಿರುವ ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸುದೀರ್ಘ ಭಾಷಣ ಮಾಡುತ್ತಿದ್ದರು. ಕೇಂದ್ರ ಸರಕಾರದ ವಿರುದ್ದ ಟೀಕಾಪ್ರಹಾರ ನಡೆಸುತ್ತಿದ್ದಾಗ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
"ನಿಮ್ಮ ಸುದೀರ್ಘ ರಾಜಕೀಯ ಅನುಭವದ ಪ್ರಕಾರ, ಎಪಿಎಂಸಿ ವ್ಯವಸ್ಥೆ ದೇಶದಲ್ಲಿ ಇರಬೇಕೋ, ಬೇಡವೋ"ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ, ಎಪಿಎಂಸಿ ಪದ್ದತಿ ಇರಬೇಕು ಎಂದರು. ಅದಕ್ಕೆ ಮಾಧುಸ್ವಾಮಿ, "ಹಾಗಿದ್ದರೆ, ನೀವು ಹಿಂದೆ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ಬರೆದಿದ್ದ ಪತ್ರದ ಬಗ್ಗೆ ಏನಂತೀರಿ"ಎಂದು ಮರು ಪ್ರಶ್ನಿಸಿ ಪತ್ರವನ್ನು ಓದಲಾರಂಭಿಸಿದರು.

ರೈತರು ಶ್ರಮಪಟ್ಟು ದುಡಿದ ಬೆಳೆಗೆ ಉತ್ತಮ ಬೆಲೆ ಸಿಗಬೇಕು
"ನೀವು ಡಿಸೆಂಬರ್ 30, 2013ರಲ್ಲಿ ಸಹಕಾರ ಇಲಾಖೆಗೆ ಪತ್ರವೊಂದನ್ನು ಬರೆದಿದ್ದೀರಿ. ಅದರಲ್ಲಿ ನೀವು, ರೈತರು ಶ್ರಮಪಟ್ಟು ದುಡಿದ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಇದರ ಜೊತೆಗೆ, ಗ್ರಾಹಕರಿಗೂ ಬೆಲೆಯ ಬಿಸಿ ತಟ್ಟಬಾರದು. ರೈತರು ತಮ್ಮ ಬೆಳೆಯನ್ನು ಮಾರಲು ಮುಕ್ತ ಅವಕಾಶವನ್ನು ನೀಡಬೇಕು. ಅತಿ ಬೇಗನೇ ಕೆಡಬಲ್ಲ ಉತ್ಪನ್ನಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ತೆಗೆದು ಹಾಕಬೇಕು ಎಂದು ನೀವು ಪತ್ರ ಬರೆದಿದ್ದೀರಿ" ಎಂದು ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
Recommended Video

ತೀವ್ರ ಮುಜುಗರಕ್ಕೀಡಾದ ಸಿದ್ದರಾಮಯ್ಯ
ಇದರಿಂದ ತೀವ್ರ ಮುಜುಗರಕ್ಕೀಡಾದ ಸಿದ್ದರಾಮಯ್ಯ, "ಅತಿ ಬೇಗನೇ ಕೆಡಬಲ್ಲ ಉತ್ಪನ್ನಗಳಿಗೆ ಮಾತ್ರ ನಾನು ಹೇಳಿದ್ದು"ಎನ್ನುವ ಸಮಜಾಯಿಶಿಯನ್ನು ನೀಡಿದರು. "ನಿಮಗೂ ಎಪಿಎಂಸಿ ಮೇಲೆ ವಿಶ್ವಾಸವಿಲ್ಲ. ನಾವು ಅದನ್ನು ಜಾರಿಗೆ ತರಲು ಹೊರಟರೆ ವಿರೋಧ ಮಾಡುತ್ತೀರಿ. ನಿಮ್ಮ ಮತ್ತು ಕಾಂಗ್ರೆಸ್ಸಿನ ಉದ್ದೇಶವಾದರೂ ಏನು. ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದೀರಾ"ಎಂದು ಮಾಧುಸ್ವಾಮಿ ಪ್ರಶ್ನಿಸಿದರು.












Click it and Unblock the Notifications