Chaitra Kundapura: ಲೋಕಸಭೆ ಅಭ್ಯರ್ಥಿ ನಾನೇ ಅಂತಾ ಹೇಳಿದ್ದ ಚೈತ್ರಾ ಕುಂದಾಪುರ?
ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಆರೋಪದ ಕುರಿತು ಇದೀಗ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವ ಕುರಿತಾಗಿ ಸುಳ್ಳು ಆಶ್ವಾಸನೆ ನೀಡಿ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ವಿರುದ್ಧ ಇದೆ. ಈಗ ಚೈತ್ರಾ ಕುಂದಾಪುರ ವಿಚಾರಣೆ ನಡೆಯುತ್ತಿದ್ದು, ಮತ್ತೊಂದು ಸ್ಫೋಟಕ ವಿಚಾರ ಸದ್ದು ಮಾಡುತ್ತಿದೆ.
ಕೇಂದ್ರದ ಬಿಜೆಪಿ ನಾಯಕರು ಚೈತ್ರಾ ಕುಂದಾಪುರ ಬಗ್ಗೆ ನೀಡಿದ್ದ ಹೇಳಿಕೆಗಳೇ ದಾಳವಾಗಿ ಬಳಕೆ ಆಯ್ತಾ? ಎಂಬ ಅನುಮಾನ ಶುರುವಾಗಿದೆ. ಏಕೆಂದರೆ ಮುಂದಿನ ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಅಂತಾ ಚೈತ್ರಾ, ಹೇಳಿಕೊಂಡು ತಿರುಗಾಡಿದ್ದರು ಎಂಬ ಬಗ್ಗೆ ಆರೋಪ ಕೇಳಿಬಂದಿದೆ. ಪ್ರಭಾವಿಗಳನ್ನ ವಂಚನೆ ಜಾಲಕ್ಕೆ ಬೀಳಿಸಲು ಇಂತಹ ಕೃತ್ಯ ನಡೆದ ಗಂಭೀರ ಆರೋಪ ಇದಾಗಿದೆ. ಹಾಗಾದರೆ ಈಗ ಬಯಲಾಗಿರುವ ಸ್ಫೋಟಕ ಮಾಹಿತಿ ಏನು? ಮುಂದೆ ಓದಿ.

ಬಿಲ್ಡಪ್.. ದೋಖಾ.. ಒಂದಾ ಎರಡಾ!
ತನಗೆ ಕೇಂದ್ರ ಪ್ರಭಾವಿ ಸಚಿವರ ಪರಿಚಯ ಇದ್ದು ಶೋಭಾ ಕರಂದ್ಲಾಜೆ ಅವರಿಗೂ ಮುಂದಿನ ಚುನಾವಣೆಗೆ ಟಿಕೆಟ್ ಇಲ್ಲ. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಚೈತ್ರಾ ಕುಂದಾಪುರ ಹೇಳಿಕೊಂಡು ಓಡಾಡಿರುವ ಆರೋಪ ಕೇಳಿಬಂದಿದೆ. ಇನ್ನು ಗೋವಿಂದ ಪೂಜಾರಿಗೂ ಹೀಗೆ ನಂಬಿಸಿದ್ದರಂತೆ ಚೈತ್ರಾ & ಸಹಚರರು. ಜೊತೆಯಲ್ಲಿ ಬಿಲ್ಡಪ್ ಹೆಚ್ಚಿಸಿಕೊಳ್ಳಲು ತಮ್ಮೊಂದಿಗೆ ಯುವಕರನ್ನ ಬಾಡಿಗಾರ್ಡ್ಸ್ ರೀತಿ ಇಟ್ಟುಕೊಂಡಿದ್ರು ಎಂಬ ಆರೋಪ ಸಂಚಲನ ಸೃಷ್ಟಿಸಿದೆ. ತನಗೆ ಲೋಕಸಭೆಯ ಟಿಕೆಟ್ ಸಿಗುತ್ತದೆ ಎಂದು ಹಲವರಿಗೆ ಹೇಳಿದ್ದರಂತೆ ಆರೋಪಿ ಚೈತ್ರಾ, ಈ ಮಾತು ನಂಬಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಹಣ ನೀಡಿದ್ದರು ಎನ್ನಲಾಗಿದೆ.
ಹಾಗೇ ತಾನು ಹಿಂದುತ್ವದ ಫೈರ್ ಬ್ರ್ಯಾಂಡ್ ಎಂಬಂತೆ ಚೈತ್ರಾ ಬಿಂಬಿಸಿದ್ದರೂ, ಕರಾವಳಿ ಭಾಗದಲ್ಲಿ ನೆಲೆ ಸಿಗದ ಕಾರಣ ಉತ್ತರ ಕರ್ನಾಟಕ ಭಾಗದ ಕಡೆ ಗಮನವನ್ನು ಹರಿಸಿದ್ದಳಂತೆ ಆರೋಪಿ. ಇದೇ ಕಾರಣಕ್ಕೆ ಉತ್ತರ ಕರ್ನಾಟಕದ ಹಲವೆಡೆ ಭಾರಿ ಬೇಡಿಕೆಯ ಭಾಷಣಗಾರ್ತಿ ಆಗಿದ್ದರು. ಆ ಭಾಗದ ಜನರಿಂದ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ರು ಈ ಪ್ರಕರಣದ ಆರೋಪಿ. ಇನ್ನು ಹಲವು ಹಿಂದೂ ಪರ & ಬಿಜೆಪಿ ಪರ ಸಭೆಗಳಲ್ಲಿ ಭರ್ಜರಿ ಪ್ರಚಾರ ಕೂಡ ನಡೆದಿತ್ತು.
ಅಂತರ ಕಾಯ್ದುಕೊಂಡಿದ್ದ ಬಿಜೆಪಿ?
ಇನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೈತ್ರಾಗೆ ಜನರನ್ನು ತಮ್ಮ ಭಾಷದ ಮೂಲಕ ಸೆಳೆಯುವ ಶಕ್ತಿ ಇರಲಿಲ್ಲ ಎಂಬ ಮಾತು ಇದೆ. ಹೀಗಾಗಿ ಇವರಿಂದ ಬಿಜೆಪಿ ನಾಯಕರು & ಪರಿವಾರದ ಸಂಘಟನೆಗಳು ಅಂತರ ಕಾಯ್ದುಕೊಂಡಿದ್ದರಂತೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2021 ರ ಅಕ್ಟೋಬರ್ 5 ರಂದು ಸುರತ್ಕಲ್ನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಚೈತ್ರಾ, ಕೋಮು ಪ್ರಚೋದನೆ ಹಾಗೂ ಕೋಟಿ ಚೆನ್ನಯ್ಯರಿಗೆ ಅವಮಾನ ಮಾಡಿದ ಆರೋಪ ಕೂಡ ಕೇಳಿ ಬಂದಿತ್ತು. ಈ ಎಲ್ಲಾ ಘಟನೆಗಳು ಪರಿಣಾಮ ಬೀರಿದ್ದವು ಎನ್ನಲಾಗಿತ್ತು.

ಹಾಗೇ ಈ ಕೇಸ್ ಸಂಬಂಧ ಚೈತ್ರಾ ಕುಂದಾಪುರ ವಿರುದ್ಧವೇ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಜರಂಗದಳ ವತಿಯಿಂದ ನಡೆದಿದ್ದ ಹಿಂದೂ ಜನಜಾಗೃತಿ ಸಭೆ ನಂತರ ಚೈತ್ರಾ ಕುಂದಾಪುರ ಅವರು ಕರಾವಳಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಇಷ್ಟೆಲ್ಲಾ ಘಟನೆ ಬಳಿಕ ಭಾಷಣದ ಅಬ್ಬರ ಉತ್ತರ ಕರ್ನಾಟಕದ ಭಾಗದಲ್ಲಿ ಜೋರಾಗಿತ್ತು.
ಒಟ್ನಲ್ಲಿ ಕೇಸ್ನ ಬೆದಕಿದಷ್ಟು ಆಳಕ್ಕೆ ಹೋಗುತ್ತಿದೆ. ಹೀಗಾಗಿಯೇ ಕೇಸ್ ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕು. ಮತ್ತೊಂದು ಕಡೆ ರಾಜ್ಯ ಸರ್ಕಾರ & ರಾಜ್ಯ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಆರೋಪಿಗಳ ವಿಚಾರಣೆ ಕೂಡ ವೇಗವಾಗಿ ಸಾಗಿದೆ. ಪ್ರಕರಣದಲ್ಲಿ ಮುಂದೆ ಯಾವೆಲ್ಲಾ ರೀತಿ ತಿರುವು ಸಿಗಬಹುದು ಎಂಬುದಕ್ಕೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.












Click it and Unblock the Notifications