ಸಿದ್ದು ಬೀಫ್ ಬಿರಿಯಾನಿ: ಬಿಜೆಪಿ, ಕಾಂಗ್ರೆಸ್ ಮತ್ತೊಂದು ಟ್ವಿಟ್ಟರ್ ವಾರ್
Recommended Video

ಯೋಗಿ ರೆಸಿಪಿ ಹೆಸರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಮೊದಲ ಸುತ್ತಿನ ಟ್ವಿಟ್ಟರ್ ವಾರ್, ಒಬ್ಬರು ಕಲ್ಲು ಎಸೆದರೆ, ಇನ್ನೊಬ್ಬರು ಇಟ್ಟಿಗೆ ಎಸೆದರು ಎನ್ನುವಂತಿತ್ತು. ಈಗ ಇನ್ನೊಂದು ಸುತ್ತಿನ ಟ್ವಿಟ್ಟರ್ ಯುದ್ದ ಆರಂಭವಾಗಿದ್ದು, ಒಬ್ಬರು ರೆಡ್ಡಿ,ಯೆಡ್ಡಿ, ಚಡ್ಡಿಯನ್ನು ಎಳೆದು ತಂದರೆ, ಇನ್ನೊಬ್ಬರು ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ರಮ್ಯಾ ಅವರನ್ನು ಎಳೆದು ತಂದಿದ್ದಾರೆ.
ಇಬ್ಬರೂ ದಾಖಲೆ ಸಮೇತ ಸಚಿತ್ರವಾಗಿ ವಿಡಿಯೋ ಬಿಡುಗಡೆ ಮಾಡಿದ್ದು, ಎಂದಿನಂತೆ ಒಬ್ಬರು ಇನ್ನೊಬ್ಬರ ಸರಕಾರದ ಅವಧಿಯಲ್ಲಿನ ಘಟನೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಟ್ವೀಟಿಗೆ ' ಕರ್ನಾಟಕಕ್ಕೆ ಬಿಎಸ್ವೈ ಕೊಡುಗೆಗಳು' ಎಂದು ಹೆಸರಿಟ್ಟಿದ್ದಾರೆ. ಯಡಿಯೂರಪ್ಪನವರ ಅವಧಿಯಲ್ಲಿನ ಹಗರಣಗಳನ್ನು ಪಟ್ಟಿಮಾಡಿ ಕಾಂಗ್ರೆಸ್ ಬುಧವಾರ (ಜ 17) ಟ್ವೀಟ್ ಮಾಡಿದೆ.
ಇದಕ್ಕೆ ತಿರುಗೇಟು ನೀಡಲು ಬಿಜೆಪಿ ಗುರುವಾರ ರಾತ್ರಿ ವಿಡಿಯೋ ಸಮೇತ ಟ್ವೀಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ರಮ್ಯಾ, ದಿನೇಶ್ ಗುಂಡೂರಾವ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿತ್ರವನ್ನು ಹಾಕಿದೆ. ಅದಕ್ಕೆ, ಬಿಜೆಪಿ 'ಗುಂಡೂರಾವ್ ಮಿಲ್ಟ್ರಿ ಹೋಟೆಲ್ ನಲ್ಲಿ ಸಿದ್ದು ಬೀಫ್ ಬಿರಿಯಾನಿ' ಎಂದು ಹೆಸರಿಟ್ಟಿದೆ.
@INCShivamogga ಅಕೌಂಟಿನಿಂದ ಮಾಡಿರುವ ಟ್ವೀಟ್ ನಲ್ಲಿ, ಯಡಿಯೂರಪ್ಪನವರ ಅವಧಿಯಲ್ಲಿ ರೈತರ ಮೇಲಿನ ಗೋಲಿಬಾರ್, ಜನಾರ್ಧನ ರೆಡ್ಡಿಯ ಗಣಿಹಗರಣ ಮುಂತಾದ ವಿಚಾರಗಳನ್ನಿಟ್ಟುಕೊಂಡು ಶಿವಮೊಗ್ಗ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ. ಇದನ್ನು ಕರ್ನಾಟಕ ಕಾಂಗ್ರೆಸ್ ರಿಟ್ವೀಟ್ ಮಾಡಿದೆ.
ಇದಕ್ಕೆ ವಿರುದ್ದವಾಗಿ 'ಸಿದ್ದು ಬಿರಿಯಾನಿ' ಎಂದು ಹೆಡ್ಡಿಂಗ್ ಕೊಟ್ಟು, 'ಗುಂಡೂರಾವ್ ಮಿಲ್ಟ್ರಿ ಹೋಟೆಲ್ ನಲ್ಲಿ ಸಿದ್ದು ಬೀಫ್ ಬಿರಿಯಾನಿ' ಎನ್ನುವ ಮತ್ತೊಂದು ಸಬ್ ಟೈಟಲ್ ಕೊಟ್ಟು ಕರ್ನಾಟಕ ಬಿಜೆಪಿ ಘಟಕ ಗುರುವಾರ ರಾತ್ರಿ ಟ್ವೀಟ್ ಮಾಡಿದೆ. ಬಿಜೆಪಿ, ಕಾಂಗ್ರೆಸ್ಸಿನ ಟ್ವೀಟ್ ಹೈಲೆಟ್ಸ್, ಮುಂದೆ ಓದಿ..

ಕರ್ನಾಟಕಕ್ಕೆ ಯಡಿಯೂರಪ್ಪನವರ ಕೊಡುಗೆಗಳು
'ಕರ್ನಾಟಕಕ್ಕೆ ಯಡಿಯೂರಪ್ಪನವರ ಕೊಡುಗೆಗಳು' ಎಂದು ಟೈಟಲ್ ನೀಡಿ, ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್, ರೆಡ್ಡಿ,ಯಡ್ಡಿ, ಚಡ್ಡಿಗಳ ಮೈನಿಂಗ್ ಹಗರಣಗಳು, ಡಿನೋಟಿಫಿಕೇಶನ್ ಹಗರಣಗಳು ಮುಂತಾದ ವಿಚಾರಗಳನ್ನಿಟ್ಟುಕೊಂಡು ಸಚಿತ್ರವಾಗಿ ಶಿವಮೊಗ್ಗ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಖಾಕಿಪಡೆ ದರ್ಪ ತೋರಿದೆ ಎಂದು ಬಿಂಬಿಸುವ ಚಿತ್ರ
ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಸರಕಾರ ಎಂದು ಮೃತಪಟ್ಟ ರೈತನ ಫೋಟೋ ಹಾಕಿ, ಖಾಕಿಪಡೆ ದರ್ಪ ತೋರಿದೆ ಎಂದು ಬಿಂಬಿಸುವ ಚಿತ್ರವನ್ನು ಲಗತ್ತಿಸಿ, ಇಂತಹ ಸರಕಾರ ಬೇಕೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುಷ್ಮಾ ಸ್ವರಾಜ್, ರೆಡ್ಡಿ, ಶ್ರೀರಾಮುಲು ಆಶೀರ್ವದಿಸುತ್ತಿರುವ ಚಿತ್ರ
ಯಡ್ಡಿ, ರೆಡ್ಡಿ, ಚಡ್ಡಿಗಳ ಮೈನಿಂಗ್ ಹಗರಣಗಳು, ಡಿನೋಟಿಫಿಕೇಶನ್ ಹಗರಣಗಳ ವಿಚಾರವನ್ನು ಪ್ರಸ್ತಾವಿಸಿ, ಅದರಲ್ಲಿ ಸುಷ್ಮಾ ಸ್ವರಾಜ್, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಆಶೀರ್ವದಿಸುತ್ತಿರುವ ಚಿತ್ರವನ್ನು ಹಾಕಿ, ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿಯ ಕಾಲೆಳೆದಿದೆ.

ಯಡಿಯೂರಪ್ಪ ಜೈಲಿನಲ್ಲಿ ಕೂತಿರುವ ಭಂಗಿಯ ಚಿತ್ರ
ಭ್ರಷ್ಟಾಚಾರದ ಅಡಿ ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ, "ಇಂತಹ ನಾಯಕ ಕರ್ನಾಟಕಕ್ಕೆ ಬೇಕೆ" ಎಂದು ಪ್ರಶ್ನಿಸಿ, ಯಡಿಯೂರಪ್ಪ ಜೈಲಿನಲ್ಲಿ ಕೂತಿರುವ ಭಂಗಿಯ ಚಿತ್ರವನ್ನು ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಿದ್ದು ಬೀಫ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು
ಇದಕ್ಕೆ ಉತ್ತರವಾಗಿ ಬಿಜೆಪಿ, ಗುಂಡುರಾವ್ ಮಿಲ್ಟ್ರಿ ಹೋಟೆಲಿಗೆ ಸ್ವಾಗತ, ಸಿದ್ದು ಬೀಫ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಎಂದು ಹಿನ್ನಲೆ ವಿವರಣೆ ನೀಡುವ ವಿಡಿಯೋ ಹಾಕಿ, ಅದರಲ್ಲಿ ಅನ್ನಭಾಗ್ಯದಿಂದ ಕದ್ದ ಒಂದು ಕೆಜಿ ಅಕ್ಕಿ, ಅಕ್ರಮ ಕಸಾಯಿಖಾನೆಯಿಂದ ತಂದ ಒಂದು ಕೆಜಿ ದನದ ಮಾಂಸ.. (ಮುಂದೆ ಓದಿ)

ಐಟಿ ದಾಳಿ ನಡೆದಾಗ ಡಿಕೆಶಿ ಸುರಿಸಿದ ಎರಡು ಚಮಚ ಕಣ್ಣೀರು
ಸ್ಟೀಲ್ ಬ್ರಿಡ್ಜ್ ಗೆ ಕಡಿದ ಮರದ ತುಂಡು, ಸರಕಾರ ಹರಿಸಿದ ಹಿಂದೂಗಳ ರಕ್ತ ಒಂದು ಲೀಟರ್, ಕಾವೇರಿ ಮತ್ತು ಮಹಾದಾಯಿ ನದಿನ ನಾಲ್ಕು ಲೀಟರ್ ನೀರು, ಸಂತೋಷ್ ಅಕ್ರಮ ಗಣಿಗಾರಿಕೆಯಿಂದ ತೆಗೆದ ಅದಿರಿನ ಕಡಾಯಿ, ಕೊಲ್ಲೂರು ದೇವಾಲಯದಿಂದ ದೋಚಿದ ಒಂದು ಕೆಜಿ ತುಪ್ಪ, ಐಟಿ ದಾಳಿ ನಡೆದಾಗ ಡಿಕೆಶಿ ಸುರಿಸಿದ ಎರಡು ಚಮಚ ಕಣ್ಣೀರು ಎಂದು ಬಿಜೆಪಿ, ಕಾಂಗ್ರೆಸ್ ಕಾಲೆಳೆದಿದೆ.











Click it and Unblock the Notifications