ನಿರ್ಮಲಾನಂದ ಶ್ರೀಗಳನ್ನು ಭೇಟಿಯಾದ ಅಮಿತ್ ಶಾ
ಬೆಂಗಳೂರು, ಆಗಸ್ಟ್ 13: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದ ಯಶಸ್ವೀ ಕಾರ್ಯಕ್ರಮಗಳ ನಂತರ ಇಂದು ಹಲವು ಕಾರ್ಯಕ್ರಮಗಳಲ್ಲಿ ಶಾ ಭಾಗಿಯಾಗಿದ್ದಾರೆ.
ಇದೀಗ ಅಮಿತ್ ಶಾ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದಾರೆ. ಮಠದ ಪ್ರವೇಶ ದ್ವಾರದಲ್ಲಿ ಅಮಿತ್ ಶಾರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಸಾಂಸ್ಕೃತಿಕ ನೃತ್ಯಗಳ ಮೂಲಕ ಶಾರನ್ನು ಮಠಕ್ಕೆ ಸ್ವಾಗತಿಸಲಾಯಿತು. ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಕೆಎಸ್ ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಅಶ್ವಥ್ಥ್ ನಾರಾಯಣ್ ರಾಷ್ಟ್ರಾಧ್ಯಕ್ಷರಿಗೆ ಸಾಥ್ ನೀಡಿದರು.

ಕಾಲ ಭೈರವೇಶ್ವರ ದರ್ಶನ ಪಡೆದ ಅಮಿತ್ ಶಾ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೀಗ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಶಾ ಚರ್ಚೆ ನಡೆಸಿದರು.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
ನಂತರ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 'ಆತ್ಮ ಚರಿತ್ರೆ ಪುಸ್ತಕ '(THE STORY OF A GURU) ಬಿಡುಗಡೆ ಮಾಡಿದರು. ಅಮಿತ್ ಶಾರಿಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಇದೇ ವೇಳೆ ಸನ್ಮಾನವನ್ನೂ ಮಾಡಿದರು.

ಇದಕ್ಕೂ ಮೊದಲು ಮಠಕ್ಕೆ ಆಗಮಿಸುವ ದಾರಿಯಲ್ಲಿ ಅಮಿತ್ ಶಾಗೆ ಕುಣಿಗಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಭಾರೀ ಸ್ವಾಗತ ಕೋರಿದರು.
ಇದಕ್ಕೂ ಮೊದಲು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜಕಿಯ ವ್ಯವಹಾರ ಸಮಿತಿಯ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಈ ಸಂದರ್ಭ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಕೆ.ಎಸ್ ಈಶ್ವರಪ್ಪಗೆ ಶಾ ತರಾಟೆ ತೆಗೆದುಕೊಂಡರು ಎಂದು ವರದಿಯಾಗಿದೆ. ಸಭೆಯಲ್ಲಿ ರಾಜಕೀಯ ವ್ಯವಹಾರ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಇನ್ನು ಸಂಜೆ ಪಕ್ಷದ ವಿವಿಧ ಯೋಜನೆಗಳು ಮತ್ತು ವಿಭಾಗಗಳ ಸಂಚಾಲಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ನಂತರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ, ಶ್ರೀ ಶ್ರೀ ರವಿಶಂಕರ್ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಇನ್ನು ಮೂರನೇ ದಿನ ಅಂದರೆ ಸೋಮವಾರದ ಅಮಿತ್ ಶಾ ಪ್ರವಾಸದ ವೇಳಾಪಟ್ಟಿ ಹೀಗಿದೆ,
- ವಿಸ್ತಾರಕರನ್ನುದ್ದೇಶಿಸಿ ಭಾಷಣ
- ಕಳೆದ ಬಾರಿ ಸೋತ ಲೋಕಸಭಾ ಕ್ಷೇತ್ರಗಳ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂವಾದಕ್ಕಾಗಿ ಸಮಯ ಮೀಸಲು
- ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ತಂಡಗಳ ಜತೆ ಸಂವಾದ
- ಇತ್ತೀಚೆಗೆ ಪಕ್ಷ ಸೇರಿದ ಮುಖಂಡರ ಜತೆ ಸಂವಾದ
- ಎಸ್.ಸಿ ಮತ್ತು ಎಸ್.ಟಿ ಸಮುದಾಯದ ನಾಯಕರ ಜತೆ ಪ್ರತ್ಯೇಕ ಸಂವಾದ
- ಒಬಿಸಿ ನಾಯಕರ ಜತೆ ಪ್ರತ್ಯೇಕ ಸಂವಾದ












Click it and Unblock the Notifications