ಸಹಕಾರಿ ಒಕ್ಕೂಟವನ್ನು ಶಿಥಿಲ ಮಾಡಲು ಅಮಿತ್ ಷಾ ಮುಂದಾಗಿದ್ದಾರೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ
ಮಂಗಳೂರು,ಜನವರಿ 2 : ಅವಿವೇಕತನದ ಹೆಜ್ಜೆ ಒಕ್ಕೂಟವನ್ನು ಶಿಥಿಲಗೊಳಿಸಲು ಮಾಡುತ್ತಿದ್ದಾರೆ. ಸಹಕಾರಿ ಒಕ್ಕೂಟವನ್ನು ಶಿಥಿಲ ಮಾಡಲು ಅಮಿತ್ ಷಾ ಮುಂದಾಗಿದ್ದಾರೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ಅಮುಲ್ ಜೊತೆಗೆ ನಂದಿನಿ ವಿಲೀನ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರೀಕರಣದ ಉದಾಹರಣೆ ಸಹಕಾರಿ ಚಳವಳಿ. ಅವರಿಗೆ ಈ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ. ಫೆಡರಲ್ ಸಿಸ್ಟಮ್ ಬಗ್ಗೆ ಗೃಹ ಸಚಿವರಿಗೆ ಅರಿವು ಇಲ್ಲ ಸಂವಿಧಾನದ ಆಶಯಕ್ಕೆ ಮಾರಕ, ದೇಶದ ಸುಸ್ಥಿತಿ ಬಗ್ಗೆ ಚಿಂತನೆ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು ಗಲಭೆಯ ಕೂಪದಲ್ಲಿ ದೇಶವನ್ನು ದಬ್ಬಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ರಾಷ್ಟ್ರದ ಹಿತ, ಅಭಿವೃದ್ಧಿ ಬೇಕಾಗಿಲ್ಲ. ಸಂವಿಧಾನದ ಆಶಯಗಳನ್ನು ಮುರಿಯುವ ವಾದಕ್ಕೆ ಕಾಂಗ್ರೆಸ್ನ್ನು ಎಳೆಯುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕಾಂಗ್ರೆಸ್ ಬಲಿಯಾಗಬಾರದು. ಈ ಮೂಲಕ ರಾಷ್ಟ್ರೀಯ, ಪ್ರಾದೇಶಿಕ, ಅಭಿವೃದ್ಧಿ, ರಾಜಕೀಯ ಸುಸ್ಥಿರ, ಸಾಮಾಜಿಕ ಸುಸ್ಥಿರ, ಆರ್ಥಿಕ ಸುಸ್ಥಿರ ಸಂವಾದದಿಂದ ಕಾಂಗ್ರೆಸ್ ವಿಚಲಿತವಾಗಬಾರದು. ಇದನ್ನು ಕಾಂಗ್ರೆಸ್ ನಾಯಕರು ಕಾಯ್ದುಕೊಂಡು ಬರಬೇಕು ಎಂದರು.
ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸವನ್ನು ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಮತೀಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದನ್ನು ಕಾಂಗ್ರೆಸ್ ನಿಲ್ಲಿಸಿ, ಜನರನ್ನು ತಲುಪುವ ಕಾರ್ಯ ಮಾಡಿದ್ದಲ್ಲಿ ಕಾಂಗ್ರೆಸ್ಗೆ ಜಯ ಲಭಿಸುತ್ತದೆ ಎಂದರು.ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಡೀ ದೇಶದಲ್ಲಿ ಆಗಿರುವ ಅಭಿವೃದ್ಧಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿರುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಕೆಎಂಎಫ್ ಮತ್ತು ಗುಜರಾತ್ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ: ಎಸ್.ಟಿ.ಸೋಮಶೇಖರ್
ಕೆಎಂಎಫ್ ಮತ್ತು ಗುಜರಾತ್ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ. ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ, ಕೆಎಂಎಫ್ ಬಲಿಷ್ಠ ಸಂಸ್ಥೆ. 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ತಿಳಿಸಿದರು.
ಇಲ್ಲಿನ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು; ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದು ಹೇಳಿದರು.
ಹೊಸ ಸಾಫ್ಟ್ವೇರ್ ಅಳವಡಿಸಲು ಶೇ 60ರಷ್ಟು ಹಣವನ್ನು ಕೇಂದ್ರ ಸರಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇóಶನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.
ಈ ಕುರಿತಂತೆ ಸಚಿವಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ ಎಂದು ವಿವರ ನೀಡಿದರು. ಗೆಜ್ಜಲಗೆರೆಯಲ್ಲಿ ಮಾತನಾಡುವಾಗ ಗುಜರಾತ್ನಷ್ಟೇ ಪ್ರಬಲವಾಗಿ ಕೆಎಂಎಫ್ ಬೆಳೆಯುತ್ತಿದೆ; ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. ವಿಲೀನದ ಚರ್ಚೆಯೂ ಆಗಿಲ್ಲ; ಅಂಥ ಮಾತನ್ನೂ ಅವರು ಆಡಿಲ್ಲ ಎಂದು ತಿಳಿಸಿದರು.
2 ದಿನವೂ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂಥ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್- ಜೆಡಿಎಸ್ನವರು ಚುನಾವಣೆ ಹತ್ತಿರ ಬರುವ ಕಾರಣ ಗಿಮಿಕ್ ಮಾಡಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.