ಜೆಡಿಎಸ್ ಬಗ್ಗೆ ಮೃದುವಾಗಿರಲು ಬಿಜೆಪಿಗೆ ಅಮಿತ್ ಶಾ ಸೂಚನೆ, ಏನಿದರ ಮರ್ಮ?
ಬೆಂಗಳೂರು, ಆಗಸ್ಟ್ 28: ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯ ಬಿಜೆಪಿಗೆ ರವಾನಿಸಿರುವ ಸಂದೇಶ ಕುತೂಹಲ ಮೂಡಿಸಿದೆ.
ಅಧಿಕಾರರೂಡ ಜೆಡಿಎಸ್ ಪಕ್ಷದ ಬಗ್ಗೆ ಮೃದುವಾಗಿರಿ ಎಂದು ಅಮಿತ್ ಶಾ ರಾಜ್ಯ ಬಿಜೆಪಿಗೆ ಸೂಚಿಸಿದ್ದಾರಂತೆ. ಇದಕ್ಕೆ ಪುಷ್ಟಿ ನೀಡುತ್ತಿರುವುದು ರಾಜ್ಯಕ್ಕೆ ಆಗಮಿಸಿದ್ದ ವೆಂಕಯ್ಯ ನಾಯ್ಡು ಅವರು ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ.
ಅಮಿತ್ ಶಾ ಅವರ ಈ ಸೂಚನೆ ಹಿಂದೆ ಬಿಜೆಪಿ-ಜೆಡಿಎಸ್ ಸಖ್ಯದ ಉದ್ದೇಶ ಇರಬಹುದೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಬಿಜೆಪಿಯ ಕೆಲವು ನಾಯಕರು ಆಡಿರುವ ಮಾತುಗಳೂ ಸಹ ಇದಕ್ಕೆ ಪುಷ್ಠಿ ನೀಡುತ್ತಿವೆ.

ಕಾಂಗ್ರೆಸ್ ವಿರೋಧಿ ಅಲೆ ಸೃಷ್ಠಿಸಲು ತಂತ್ರ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ, 2014 ರ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್ ವಿರೋಧಿ ಅಲೆಯನ್ನು ಸೃಷ್ಠಿಸುವ ಉಮೇದಿನಿಂದಾಗಿ ಅಮಿತ್ ಶಾ ಅವರು ಹೀಗೊಂದು ಸೂಚನೆ ನೀಡಿರಲಿಕ್ಕೂ ಸಾಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಏಕೈಕ ಎದುರಾಳಿ ಕಾಂಗ್ರೆಸ್ ಆಗಿರುವ ಕಾರಣ ಅವರ ಮೇಲೆಯೇ ಗುರಿ ಇರಲೆಂಬ ಉದ್ದೇಶವೂ ಸೂಚನೆಯ ಹಿಂದೆ ಇದ್ದಿರಬಹುದು.

ಜೆಡಿಎಸ್-ಕಾಂಗ್ರೆಸ್ ನಡುವೆ ಅಂತರ ಹೆಚ್ಚಿಸುವ ತಂತ್ರ
ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯದ ಮೈತ್ರಿಯನ್ನು ಒಡೆಯಲು ಈ ನೀತಿಯನ್ನು ಬಳಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಅನ್ನು ಟೀಕಿಸಿ ಜೆಡಿಎಸ್ ಪರ ಮೃದುವಾಗಿದ್ದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಅಂತರ ಹೆಚ್ಚಿಸಬಹುದೆಂಬ ಉದ್ದೇಶವೂ ಅಮಿತ್ ಶಾ ಸೂಚನೆಯ ಹಿಂದೆ ಇರಬಹುದಾಗಿದೆ.

ಕಾಂಗ್ರೆಸ್ ಅನ್ನು ವಿಲನ್ ಮಾಡುವ ತಂತ್ರ
ಕಾಂಗ್ರೆಸ್ ಅನ್ನು ಜನರ ಕಣ್ಣಲ್ಲಿ 'ವಿಲನ್' ಆಗಿಸುವ ಉದ್ದೇಶ ಅಮಿತ್ ಶಾ ಅವರ ಸೂಚನೆ ಹಿಂದೆ ಇದೆ ಎನ್ನಲಾಗಿದೆ. ಚಾಲಕನ ಸೀಟಿನಲ್ಲಿ ಜೆಡಿಎಸ್ ಅನ್ನು ಕೂರಿಸಿರುವ ಕಾಂಗ್ರೆಸ್. ಆಗುವ ಎಲ್ಲಾ 'ಅಪಘಾತ'ಕ್ಕೂ ಜೆಡಿಎಸ್ ಕಾರಣ ಎಂದು ಸುಲಭವಾಗಿ ಹೇಳಬಹುದು ಆಗ ಜನರ ಕೆಂಗಣ್ಣಿನಿಂದ ಕಾಂಗ್ರೆಸ್ ತಪ್ಪಿಸಿಕೊಳ್ಳುತ್ತದೆ. ಹಾಗಾಗದೇ ಕಾಂಗ್ರೆಸ್ ಜನರ ಕಣ್ಣಲ್ಲಿ ವಿರೋಧಿಯಾಗಿಯೇ ಇರಲಿ ಎಂಬ ಉದ್ದೇಶದಿಂದ ಅಮಿತ್ ಶಾ ಈ ಸೂಚನೆ ನೀಡಿರಲೂ ಬಹುದು.

ಲೋಕಸಭೆ ಚುನಾವಣೆ ನಂತರ ಅಮಿತ್ ಶಾ ಅಖಾಡಕ್ಕೆ
ಗಾಳಿ ಸುದ್ದಿಗಳ ಪ್ರಕಾರ ಲೋಕಸಭೆ ಚುನಾವಣೆ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿಯಲು ಅಮಿತ್ ಶಾ ಅಖಾಡಕ್ಕೆ ಇಳಿಯುತ್ತಾರೆ ಆಗ ಬಿಜೆಪಿಗೆ ಜೆಡಿಎಸ್ನ ಬೆಂಬಲ ಬೇಕಾಗುತ್ತದೆ ಹಾಗಾಗಿ ಜೆಡಿಎಸ್ ಪರ ಮೃದುವಾಗಿರಿ ಎಂಬುದು ಅಮಿತ್ ಶಾ ಸೂಚನೆ ನೀಡಿರುವ ಸಾಧ್ಯತೆ ದಟ್ಟವಾಗಿದೆ.

ಲೋಕಸಭೆಯಲ್ಲಿ ಜಡಿಎಸ್ ಪ್ರಭಾವಿ ಅಲ್ಲ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಂತಹಾ ಪ್ರಭಾವಿ ಅಲ್ಲ ಹಾಗಾಗಿ ಅನವಶ್ಯಕವಾಗಿ ಜೆಡಿಎಸ್ ಅನ್ನು ಗುರಿ ಮಾಡಿಕೊಳ್ಳುವುದರಿಂದ ಬಿಜೆಪಿಗೆ ಲಾಭವಾಗದು ಹಾಗಾಗಿ ಚುನಾವಣಾ ವೈರಿ ಕಾಂಗ್ರೆಸ್ ಅನ್ನು ಗುರಿ ಮಾಡಿಕೊಳ್ಳುವುದೇ ಸರಿಯಾದ ತಂತ್ರ ಎಂದು ಅಮಿತ್ ಶಾ ಅವರಿಗೆ ಅನಿಸಿದ್ದಿರಬಹುದು.

ಮೇಲಿನ ಎಲ್ಲ ಕಾರಣಗಳೂ ತರ್ಕಬದ್ಧವಾದುವೆ
ಮೇಲಿನ ಎಲ್ಲ ಕಾರಣಗಳೂ ತರ್ತಬದ್ಧವಾದುವೇ ಆಗಿವೆ. ಜೆಡಿಎಸ್ ಅನ್ನು ಟೀಕಿಸುವುದಕ್ಕಿಂತಲೂ ಕಾಂಗ್ರೆಸ್ ಅನ್ನೇ ತಮ್ಮ ಪ್ರಥಮ ವೈರಿಯನ್ನಾಗಿಸಿಕೊಂಡರೆ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲಾಭವಾಗಲಿದೆ ಅಲ್ಲದೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೂ ಸಹ ಇದು ಅನುಕೂಲಕರವಾಗಲಿದೆ.

ಕಾಂಗ್ರೆಸ್ ವಿರುದ್ಧ ಆರ್ಭಟಿಸಲಿದ್ದಾರೆ ಬಿಜೆಪಿ ನಾಯಕರು
ಯಡಿಯೂರಪ್ಪ ಅವರು ತಮ್ಮ ಹೇಳಿಕೆಗಳಲ್ಲಿ, ಭಾಷಣಗಳಲ್ಲಿ ದೇವೇಗೌಡರ ಕುಟುಂಬವನ್ನೇ ಗುರಿ ಮಾಡಿಕೊಂಡು ಟೀಕೆ ಮಾಡುತ್ತಿದ್ದರು. ಆದರೆ ಅಮಿತ್ ಶಾ ಸೂಚನೆ ಮೇರೆಗೆ ಲೋಕಸಭೆ ಚುನಾವಣೆಗೆ ಅವರು ಕಾಂಗ್ರೆಸ್ ಅನ್ನು ಗುರಿ ಮಾಡಿಕೊಂಡು ಟೀಕೆ ಮಾಡು ಸಾಧ್ಯತೆ ಹೆಚ್ಚು.












Click it and Unblock the Notifications