ಕುಮಾರಸ್ವಾಮಿ ಸರ್ಕಾರ ಬೀಳಿಸಿ: ರಾಜ್ಯ ಬಿಜೆಪಿಗೆ ಅಮಿತ್ ಶಾ ಖಡಕ್ ಸೂಚನೆ?
Recommended Video
"ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ, ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಕೆಲವು ಮೂಲಗಳಿಂದ ಲಭ್ಯವಾಗಿದೆ.
ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಬೇಕು ಎಂಬುದು ರಾಜ್ಯ ನಾಯಕರು ಮತ್ತು ರಾಷ್ಟ್ರದ ನಾಯಕರ ಗುರಿಯೂ ಹೌದು.
ಕರ್ನಾಟಕ ಬಜೆಟ್ ಅಧಿವೇಶನ LIVE: ನಿಲ್ಲದ ಗಲಾಟೆ, ಕಲಾಪ ನಾಳೆಗೆ ಮುಂದೂಡಿ
ಅದಕ್ಕೆ ಪೂರಕವೆಂಬಂತೆ ರಾಜ್ಯದ ರಾಜಕೀಯದಲ್ಲಿ ಹಲವು ಘಟನೆಗಳು ಘಟಿಸುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಸಾಮರಸ್ಯವಿಲ್ಲ ಎಂಬ ಮಾತಿಗೆ ಪುಷ್ಟಿ ಸಿಗುತ್ತಿವೆ. ಅದನ್ನೇ ಇಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಬುಧವಾರದಿಂದ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲೂ ಬಿಜೆಪಿ ಎಲ್ಲವೂ ತನ್ನ ಯೋಜನೆಯಂತೆಯೇ ನಡೆಯುವಂತೆ ನೋಡಿಕೊಳ್ಳುತ್ತಿದೆ.
ಸೂಚನೆ ನೀಡಿದ ಅಮಿತ್ ಶಾ
ಕಳೆದ ಮೇ ತಿಂಗಳಿನಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಆ ಸಂದರ್ಭದಲ್ಲಿ ಸರ್ಕಾರ ರಚನೆಗೆ ಯಾವೆಲ್ಲ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಕಾರವೆತ್ತಿರಲಿಲ್ಲ. ಆಗ ಸರ್ಕಾರ ರಚನೆ ಅಸಾಧ್ಯ ಎಂಬುದನ್ನು ಬಲ್ಲವರಂತಿದ್ದ ಶಾ, ಮೌನವಾಗಿಯೇ ಉಳಿದರು. ಸರ್ಕಾರ ರಚಿಸಲು ರಾಜ್ಯ ಬಿಜೆಪಿ ನಾಯಕರು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅಮಿತ್ ಶಾ ಅವರೇ ಖುದ್ದು, ಸರ್ಕಾರ ಬೀಳಿಸುವುದಕ್ಕೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಅಚ್ಚರಿ ಮೂಡಿಸಿದೆ.
ಬಜೆಟ್ ಅಧಿವೇಶನ ಅರ್ಥಹೀನ, ಸರ್ಕಾರಕ್ಕೆ ಸಂಖ್ಯಾಬಲವಿಲ್ಲ : ಶ್ರೀರಾಮುಲು
ಸೂಚನೆ ಏನು?
ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿ, ಕಾಂಗ್ರೆಸ್ ನ ಅತೃಪ್ತ ಶಾಸಕರೊಂದಿಗೆ ವಿಶ್ವಾಸ ಸಂಪಾದಿಸಿ, ಅವರು ರಾಜೀನಾಮೆ ನೀಡುವಂತೆ ಮಾಡಿ ಎಂದು ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈಗ ಸೂಚನೆ ನೀಡುತ್ತಿರುವುದಕ್ಕೆ ಕಾರಣ?
ಕಳೆದ ಮೇ ತಿಂಗಳಿನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಹೊತ್ತಿನಲ್ಲಿ ಮೌನವಾಗಿದ್ದ ಶಾ, ಈಗ ಹೊಸ ಯೋಜನೆ ಹಾಕಿಕೊಂಡಿರುವುದಕ್ಕೆ ಕಾರಣವಿದೆ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಸರ್ಕಾರ ರಚಿಸುವುದೇ ದೊಡ್ಡ ಗುರಿಯಾಗಿತ್ತು, ಮಂತ್ರಿಸ್ಥಾನ ಸಿಕ್ಕಬಹುದು ಎಂಬ ಕನಸಿತ್ತು. ಆದರೆ ಇದೀಗ ಹಲವರಿಗೆ ಭ್ರಮನಿರಸನವಾಗಿದೆ. ಅತೃಪ್ತರು ಬಂಡಾಯ ಎದ್ದಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಎದುರಾಳಿಯನ್ನು ಮಣಿಸಲು ಇದೇ ಸೂಕ್ತ ಸಮಯ ಎಂದು ಶಾ ಭಾವಿಸಿದಂತಿದೆ.
ಅಧಿವೇಶನಕ್ಕೆ ಕಾಂಗ್ರೆಸ್ ನ ಹಲವು ಶಾಸಕರು ಗೈರು
ಬುಧವಾರದಿಂದ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನ ಎಂಟಕ್ಕೂ ಹೆಚ್ಚು ಶಾಸಕರು ಗೈರಾಗಿದ್ದು, ಜೆಡಿಎಸ್ ನ ಓರ್ವ ಶಾಸಕರು ಗೈರಾಗಿದ್ದಾರೆ. ಕಾಂಗ್ರೆಸ್ ನ ನಾಲ್ಕಕ್ಕೂ ಹೆಚ್ಚು ಶಾಸಕರು ಮುಂಬೈಯಲ್ಲಿ ಹೊಟೇಲ್ ನಲ್ಲಿ ತಂಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದೆ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿರುವ ಬಿಜೆಪಿ, ಬಜೆಟ್ ಮಂಡನೆಗೂ ಅವಕಾಶ ನೀಡದಿದ್ದರೆ ಅಚ್ಚರಿಯಿಲ್ಲ.