ರೌಡಿಗಳ ಬಿಜೆಪಿ ಸೇರ್ಪಡೆಗೆ ಅಮಿತ್ ಶಾ ನಿರ್ದೇಶನ, ಕೇಸರಿ ಪಕ್ಷಕ್ಕೆ 150 ರೌಡಿಗಳು: ಕಾಂಗ್ರೆಸ್ ಆರೋಪ
ಬೆಂಗಳೂರು, ಡಿಸೆಂಬರ್ 07: ರೌಡಿಗಳ ಬಿಜೆಪಿ ಸೇರ್ಪಡೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ ಎಂದು ಕೆಪಿಸಿಸಿ ಆರೋಪಿಸಿದೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, '2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. ಬೆಂಗಳೂರಿನಲ್ಲಿ 3 ಸಾವಿರ ಇದ್ದ ರೌಡಿಗಳ ಸಂಖ್ಯೆ 6620ಕ್ಕೆ ಏರಿಕೆಯಾಗಿದೆ' ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ: ಸಿದ್ದರಾಮಯ್ಯ
'ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್ಗಳು ಸೇರ್ಪಡೆ ಆಗಿದ್ದು, 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನ ಸೇರಿಸಿಕೊಳ್ಳಲು ಬಿಜೆಪಿಯವರು ಪಟ್ಟಿ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಬಿಜೆಪಿ ಸೇರುವ ರೌಡಿಗಳ ಪಟ್ಟಿ ಇಲ್ಲಿಗೆ ಮುಗಿದಿಲ್ಲ. ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ರೌಡಿಗಳ ಬಿಜೆಪಿ ಸೇರ್ಪಡೆ ಸಂಬಂಧ ಬಿಜೆಪಿ ಸ್ನೇಹಿತರ ಬಳಿ ಚರ್ಚಿಸಿದಾಗ, ನಮಗೆ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಕಡೆಯಿಂದ ನಿರ್ದೇಶನವಿದೆ, ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಗಿದ್ದೇವೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ' ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
'ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ. ಬೆತ್ತನಗೆರೆ ಶಂಕರ ಎಂಬ ರೌಡಿ ಶೀಟರ್ನನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡದ್ದಾರೆ ಮೈಸೂರು ಸಂಸದ ಪ್ರತಾಪ ಸಿಂಹ. ಬಸವರಾಜ ಬೊಮ್ಮಾಯಿ ಅವರೇ, ರೌಡಿ ರಾಜ್ಯ ಕಟ್ಟಲು ಹೊರಟಿದ್ದೀರಾ? ಇದೇನಾ ನಿಮ್ಮ ಸಂಸ್ಕೃತಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.