ಖಾತೆ ಹಂಚಿಕೆ ಕಗ್ಗಂಟು; ದೆಹಲಿಗೆ ಹೊರಟ ಯಡಿಯೂರಪ್ಪ
Recommended Video
ಬೆಂಗಳೂರು, ಆಗಸ್ಟ್ 22 : "ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಯಡಿಯೂರಪ್ಪ "ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ನಾಳೆ ವಾಪಾಸಾಗುತ್ತೇನೆ" ಎಂದರು.
"ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರು ಈಗಾಗಲೇ ಪ್ರವಾಸ ಮಾಡುತ್ತಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಜನರಿಗೆ ಸರ್ಕಾರ ಎಲ್ಲ ನೆರವು ನೀಡುತ್ತಿದೆ. ಕೇಂದ್ರ ಸರ್ಕಾರ ಕೂಡಾ ಶೀಘ್ರದಲ್ಲೇ ರಾಜ್ಯದ ನೆರವಿಗೆ ಧಾವಿಸಲಿದೆ" ಎಂದು ತಿಳಿಸಿದರು.

"ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಸತಿ ರಹಿತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲಾಗುತ್ತದೆ" ಎಂದು ಭರವಸೆ ನೀಡಿದರು.
ಯಡಿಯೂರಪ್ಪ ಸಂಪುಟಕ್ಕೆ ಮಂಗಳವಾರ 17 ಸಚಿವರು ಸೇರ್ಪಡೆಗೊಂಡಿದ್ದಾರೆ. ಆದರೆ, ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ.
ಸಂಪುಟ ಸೇರಿರುವವರಿಗೆ ಖಾತೆ ಹಂಚಿಕೆ ಮಾಡುವ ಜೊತೆಗೆ ಅನರ್ಹ ಶಾಸಕರಿಗಾಗಿ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಬೇಕಾದ ಸವಾಲು ಯಡಿಯೂರಪ್ಪ ಮುಂದಿದೆ.
ಸಂಪುಟ ಸೇರುವ ಶಾಸಕರ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹೈಕಮಾಂಡ್ ಖಾತೆಗಳ ಹಂಚಿಕೆಯನ್ನೂ ಎಚ್ಚರಿಕೆಯಿಂದ ಮಾಡುವ ನಿರೀಕ್ಷೆ ಇದೆ.












Click it and Unblock the Notifications