ತೇಜಸ್ವಿ- ಸೂಲಿಬೆಲೆ ಹತ್ಯೆ ಸಂಚು ಆರೋಪ: ಆರೋಪಿಗಳ ಸ್ವ ಇಚ್ಚಾ ಹೇಳಿಕೆಯಲ್ಲೇನಿದೆ?
ಬೆಂಗಳೂರು, ಜ. 20: ರಾಷ್ಟ್ರಾದ್ಯಂತ ಸದ್ದು ಮಾಡಿದ ಸಂಸದ ತೇಜಸ್ವಿ ಸೂರ್ಯ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾಖಲೆಗಳು ಬೇರೆಯದ್ದೇ ಆಯಾಮವನ್ನು ಕಟ್ಟಿಕೊಡುತ್ತಿವೆ.
ಸಿಎಎ ಪರವಾಗಿ ಡಿ. 22ರಂದು ಬೆಂಗಳೂರಿನ ಟೌನ್ಹಾಲ್ ಮುಂಭಾಗ ನಡೆದ ಪ್ರತಿಭಟನೆಯ ಕೊನೆಯಲ್ಲಿ ವರುಣ್ ಎಂಬ ಆರ್ಎಸ್ಎಸ್ ಕಾರ್ಯಕರ್ತನೊಬ್ಬನ ಮೇಲೆ ಹತ್ಯೆ ಯತ್ನವೊಂದು ಕುಂಬಾರಗುಂಡಿಯ ರೆಡ್ಡಿ ಬುಲ್ಡಿಂಡ್ ಮುಂಭಾಗ ನಡೆದಿತ್ತು. ಈ ಪ್ರಕರಣವನ್ನು 'ಗಂಭೀರ ಮತ್ತು ಸೂಕ್ಷ್ಮ' ಎಂದು ಮನಗೊಂಡ ಬೆಂಗಳೂರು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿಕೊಂಡಿದ್ದರು. ಅಂತಿಮವಾಗಿ ಎಸ್ಡಿಪಿಐ ಪಕ್ಷಕ್ಕೆ ಸೇರಿದ್ದವರು ಎನ್ನಲಾದ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

'ಒನ್ ಇಂಡಿಯಾ ಕನ್ನಡ'ಕ್ಕೆ ಸಿಕ್ಕ ದಾಖಲೆಗಳಿಂದ...
'ಒನ್ ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿರುವ ಈ ಪ್ರಕರಣದ ದಾಖಲೆಗಳ ಪೈಕಿ ಪೊಲೀಸರ ಮುಂದೆ ನೀಡಿರುವ ಸ್ವ ಇಚ್ಚಾ ಹೇಳಿಕೆ ಒಟ್ಟಾರೆ ಸಂಚು ಆರೋಪದ ಹಲವು ಮಜಲುಗಳನ್ನು ತೆರೆದಿಡುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರಕರಣದಲ್ಲಿ ಮೊದಲು ಬಂಧಿತನಾಗಿರುವ ಆರೋಪಿ ಸಾದಿಕ್ ಉಲ್ ಅಮೀನ್ ಅಲಿಯಾಸ್ ಸೌಂಡ್ ಸಾದಿಕ್ ನೀಡುರುವ ಸ್ವ ಇಚ್ಚಾ ಹೇಳಿಕೆ ಕುತೂಹಲಕಾರಿಯಾಗಿದೆ.
ಕಳೆದ 7-8 ವರ್ಷಗಳಿಂದ ಎಸ್ಡಿಪಿಐ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಪೊಲೀಸರಿಗೆ ತಿಳಿಸಿರುವ ಸಾದಿಕ್, ಪಕ್ಷದ ಕಾರ್ಯಕ್ರಮಗಳಿಗೆ ಮೈಕ್ ಸೆಟ್ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಚುನಾವಣೆಗಳ ಸಮಯದಲ್ಲಿ ಎಸ್ಡಿಪಿಐ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೆ ಎಂಬುದನ್ನು ಹೇಳಿಕೊಂಡಿದ್ದಾನೆ. ಸಿಎಎ ಕಾನೂನು ಜಾರಿ ನಂತರ ನಡೆದ ಘಟನಾವಳಿಕೆಗಳನ್ನು ವಿವರಿಸಿದ್ದಾನೆ.

ಆರೋಪಿಯಲ್ಲಿ ಮೂಡಿದ ಸೇಡು
ಸಿಎಎ ಜಾರಿ ನಂತರ ದೇಶಾದ್ಯಂತ ಪ್ರತಿಭಟನೆಗಳು ಆರಂಭಗೊಂಡವು. ಈ ಸಮಯದಲ್ಲಿ "ಕಾಯ್ದೆ ಮುಸ್ಲಿಂ ಜನಾಂಗದ ವಿರುದ್ಧವಾಗಿ" ಎಂಬ ಪ್ರಚಾರವನ್ನು ಸಾದಿಕ್ ಕೂಡ ಗಮನಿಸಿದ್ದಾನೆ. ಇದರ ವಿರುದ್ಧ ತೀವ್ರತರವಾದ ಪ್ರತಿಭಟನೆ ನಡೆಸಬೇಕು ಎಂಬುದನ್ನು ಪಕ್ಷದ ಕಚೇರಿಯಲ್ಲಿ ತೀರ್ಮಾನಿಸಲಾಯಿತು ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
ಇದರ ಮುಂದುವರಿದ ಭಾಗವಾಗಿ ಡಿ. 22ರಂದು ಟೌನ್ಹಾಲ್ ಮುಂಭಾಗ ನಡೆದ ಸಿಎಎ ಪರವಾದ ಪ್ರತಿಭಟನೆ ಈತನಲ್ಲಿ ಅಸಮಾಧಾನ ಮೂಡಿಸಿದೆ. ಈ ಸಮಯದಲ್ಲಿ ನಡೆದ ಪಕ್ಷದ ಸಭೆ (ತಂಜೇಮ್)ಯಲ್ಲಿ "ಮುಸ್ಲಿಂ ಧರ್ಮ ವಿರೋಧಿಸುವವರು ಧರ್ಮ ವಿರೋಧಿಗಳು ಎಂದು ಘೋಷಿಸಲಾಯಿತು," ಎಂದು ಸಾದಿಕ್ ಸ್ವ ಇಚ್ಚಾ ಹೇಳಿಕೆ ತಿಳಿಸುತ್ತದೆ. ಇದಕ್ಕಾಗಿ "ಕಾಯ್ದೆ ಪರವಾಗಿರುವವರನ್ನು ಶಿಕ್ಷಿಸಲು ಮುಂದಾದೆವು,'' ಎಂದು ಈತ ಕಸ್ಟಡಿಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ನಮೋದಿಸುತ್ತಾರೆ.

ಸಂಚು ನಡೆದಿದ್ದು ಹೇಗೆ?
"ಕಾಯ್ದೆ ಪರವಾಗಿ ಟೌನ್ಹಾಲ್ ಮುಂಭಾಗ ಸೇರುವ 'ಯಾವುದಾದರು ಒಬ್ಬ' ಆರ್ಎಸ್ಎಸ್/ ಬಿಜೆಪಿ ಮುಖಂಡರನ್ನು ಕೊಲೆ ಮಾಡಿದರೆ ಮುಸ್ಲಿಂ ಧರ್ಮಕ್ಕೆ ಒಳಿತಾಗುತ್ತದೆ ಎಂಬ ಕಾರಣಕ್ಕೆ ಸಂಘಟನೆಯ ಹುಡುಗರು ತಂಡವೊಂದನ್ನು ಕಟ್ಟಿಕೊಳ್ಳುತ್ತಾರೆ. ಈ ಸಮಯದಲ್ಲಿ ಸಂಘಟನೆಯ ಮುಖಂಡರೊಬ್ಬರಿಂದ ಸಂದೇಶ ಬಂತು" ಎಂದು ಸಾದಿಕ್ ಸ್ವ ಇಚ್ಚಾ ಹೇಳಿಕೆಯಲ್ಲಿ ಆರೋಪಿಸಲಾಗಿದೆ.
'ಡಿ. 22ರಂದು ಬೆಳಗ್ಗೆ ಮುನಿರೆಡ್ಡಿ ಪಾಳ್ಯದ ಜಾಮಿಯಾ ಮಸೀದಿ ಬಳಿಯಿಂದ ಆರೋಪಿಗಳು ಟೌನ್ಹಾಲ್ ಮುಂಭಾಗಕ್ಕೆ ಬರುತ್ತಾರೆ. ಅಲ್ಲಿ ಇತರೆ ಆರೋಪಿಗಳು ಮೊದಲ ಭಾರಿಗೆ ಭೇಟಿಯಾಗಿ ಹತ್ಯೆ ಕುರಿತು ಚರ್ಚೆ ನಡೆಸುತ್ತಾರೆ. ಆ ಸಮಯದಲ್ಲಿ ಬೈಕ್ಗಳ ನಂಬರ್ ಪ್ಲೇಟ್ಗಳಿಗೆ ಕೆಸರು (ಮಣ್ಣು ಮತ್ತು ನೀರಿನ ಮಿಶ್ರಣ) ಬಳಿಯಲಾಗುತ್ತದೆ. ಮುಖದ ಚಹರೆ ಮುಚ್ಚಿಡುವ ಸಲುವಾಗಿ ಹೆಲ್ಮೆಟ್ ಧರಿಸುತ್ತಾರೆ. ಅಲ್ಲಿಂದ ಧರ್ಮರಾಯನ ದೇವಸ್ಥಾನದ ರಸ್ತೆಗೆ ಹೋಗಿ ಮತ್ತೆ ಪೂರ್ಣಿಮಾ ಥಿಯೇಟರ್ ರಸ್ತೆ ಮೂಲಕ ಟೌನ್ ಹಾಲ್ ಬಳಿ ಬರುತ್ತಾರೆ.' ಇದು ಸಾದಿಕ್ ಸ್ವ ಇಚ್ಚಾ ಹೇಳಿಕೆಯಲ್ಲಿ ಸಿಗುವ ಆರೋಪಿತ ಹತ್ಯೆ ಸಂಚಿನ ವಿವರಗಳು.

ವರುಣ್ ಟಾರ್ಗೆಟ್ ಆಗಿದ್ದೇಗೆ?
ಪೊಲೀಸರು ಸಲ್ಲಿಸಿರುವ ದಾಖಲೆಗಳ ಪ್ರಕಾರ, ಆರೋಪಿಗಳ ಕಣ್ಣಿಗೆ ವರುಣ್ ಬೀಳುವ ಹೊತ್ತಿಗೆ ಆತ ಆರ್ಎಸ್ಎಸ್ನ ಸಿಎಎ ಪರ ಸಮಾವೇಶದಲ್ಲಿ ಕೇಸರಿ ಕುರ್ತಾ ಧರಿಸಿ ಆತ ನೀರು ಹಂಚುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ವರುಣ್ ಬೌನ್ಸ್ ಬೈಕ್ ತೆಗೆದುಕೊಂಡು ಮನೆಯ ಕಡೆ ಹೊರಟ. ಇದನ್ನು ಪನ್ಫರ್ಮ್ ಮಾಡಿಕೊಂಡ ಆರೋಪಿಗಳು ಆತನ್ನು ಫಾಲೋ ಮಾಡುತ್ತಾರೆ.
"ಇದಾಗಿ 3-4 ನಿಮಿಷಗಳ ನಂತರ ನಾವು ಅದೇ ರಸ್ತೆಯಲ್ಲಿ ಹೋಗಿದ್ದು ಕೇಸರಿ ಕುರ್ತಾ ಧರಿಸಿದ್ದ ವ್ಯಕ್ತಿ ಮಾರಣಾಂತಿಕ ಗಾಯಗಳಾಗಿ ರಸ್ತೆದ ಮಡುವಿನಲ್ಲಿ ಬಿದ್ದಿದ್ದದನ್ನು ನೋಡಿಕೊಂಡು ವಾಪಾಸ್ ಬಂದೆವು,'' ಎಂದು ಆರೋಪಿಗಳಾದ ಸಾದಿಕ್ ಹಾಗೂ ಸಯ್ಯದ್ ಅಕ್ಬರ್ ಸ್ವ ಇಚ್ಚಾ ಹೇಳಿಕೆಗಳು ತಿಳಿಸುತ್ತವೆ.
ಇದು ಪೊಲೀಸರ ಸಮ್ಮುಖದಲ್ಲಿ ಆರೋಪಿಗಳ ನೀಡುರುವ ಹೇಳಿಕೆಗಳಾಗಿರುವುದರಿಂದ ನ್ಯಾಯಾಲಯ ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಲಿದೆ. ಇದರ ಆಚೆಗೆ, ಪೊಲೀಸರು ಸಲ್ಲಿಸಿರುವ ಈ ಹೇಳಿಕೆಗಳನ್ನಷ್ಟೆ ಇಟ್ಟುಕೊಂಡು ನೋಡಿದರೂ, ಎಲ್ಲಿಯೂ ನಿರ್ದಿಷ್ಟವಾಗಿ ಇಂತಹ ಮುಖಂಡರನ್ನೇ ಹತ್ಯೆ ಮಾಡಬೇಕು ಎಂದು ಸಂಚು ರೂಪುಗೊಂಡಿತ್ತು ಎಂದು ಹೇಳುವುದು ಸಾಧ್ಯವಿಲ್ಲ. ಹೀಗಿರುವಾಗ ಯಾಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹೆಸರುಗಳನ್ನು ಎಳೆದು ತರಲಾಯಿತು? ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಉತ್ತರ ನೀಡಬೇಕಿದೆ.












Click it and Unblock the Notifications