ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಸ್ಥಾಪನೆ
ಬೆಂಗಳೂರು, ಫೆಬ್ರವರಿ 11 : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಸ್ಥಾಪನೆಯಾಗಲಿದೆ. ಕರ್ನಾಟಕ ಜನತಾ ರಂಗ ಎಂಬ ಪಕ್ಷ ಸ್ಥಾಪನೆಯಾಗಲಿದ್ದು, ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್.ಎಚ್.ಲಿಂಗೇಗೌಡ, ರವಿಕೃಷ್ಣಾ ರೆಡ್ಡಿ ಮುಂತಾದವರು ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಹಿತಿ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಎಚ್.ಲಿಂಗೇಗೌಡ ಅವರು, 'ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ನೀವು ಮಾಧ್ಯಮಗಳ ಮೂಲಕ ನೋಡುತ್ತಿದ್ದೀರಿ. ನಮ್ಮದು ಜನಪರ ಸರ್ಕಾರ ಎಂದು ಹೇಳುವ ಸರ್ಕಾರ ಜನರ ಹಿತವನ್ನು ಕಡೆಗಣಿಸಿದೆ' ಎಂದು ಆರೋಪಿಸಿದರು.
'ಬಸವಣ್ಣ ಮತ್ತು ಕುವೆಂಪು ಅವರುಗಳು ಹುಟ್ಟಿದ ಈ ನಾಡಿನಲ್ಲಿ ಸದೃಢ ರಾಜ್ಯದ ಮೂಲಕ ಸದೃಢ ದೇಶವನ್ನು ಕಟ್ಟಬಹುದು ಎಂಬುದು ನಮ್ಮ ನಂಬಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಾವು ಪರ್ಯಾಯವನ್ನು ಕಟ್ಟಲೇಬೇಕು' ಎಂದು ತೀರ್ಮಾನಿಸಲಾಗಿದೆ ಎಂದರು
'ರವಿ ಕೃಷ್ಣಾ ರೆಡ್ಡಿ ಸೇರಿದಂತೆ ಸುಮಾರು ಜನ 11/11/2018ರಂದು ಬೆಂಗಳೂರಿನಲ್ಲಿ ಸಭೆಯಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಎತ್ತಿ ಹಿಡಿಯುವ ತೀರ್ಮಾನವನ್ನು ಕೈಗೊಳ್ಳಲಾಯಿತು. ರಾಜಕಾರಣವನ್ನು ಸ್ವಚ್ಛಗೊಳಿಸುವ, ಆಡಳಿತದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ತರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಲು ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧರಿಸಲಾಯಿತು' ಎಂದು ಹೇಳಿದರು.
3/12/2018 ರಂದು 'ಕರ್ನಾಟಕ ಜನತಾ ರಂಗ' ಎನ್ನುವ ಪಕ್ಷವನ್ನು ನೋಂದಾವಣೆ ಮಾಡಲು ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಈಗ ಆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಲೋಕಸಭಾ ಚುನಾವಣೆಗೂ ಮೊದಲೇ ಪಕ್ಷ ನೋಂದಣಿಯಾಗುವ ನಿರೀಕ್ಷೆ ಇದೆ.
'ಕರ್ನಾಟಕ ಜನತಾ ರಂಗ'ದ ಪದಾಧಿಕಾರಿಗಳು
* ಅಧ್ಯಕ್ಷ - ರವಿ ಕೃಷ್ಣಾ ರೆಡ್ಡಿ
* ಉಪಾಧ್ಯಕ್ಷ - ಎಸ್.ಎಚ್.ಲಿಂಗೇಗೌಡ
* ಪ್ರಧಾನ ಕಾರ್ಯದರ್ಶಿ - ದೀಪಕ್ ಸಿ.ಎನ್.
* ಖಜಾಂಚಿ - ಅರವಿಂದ್ ಕೆ.ಬಿ.
* ಜಂಟಿ ಕಾರ್ಯದರ್ಶಿ- ರಘುಪತಿ ಭಟ್
'ಕರ್ನಾಟಕ ಜನತಾ ರಂಗ' ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
* ಎಸ್.ಎಚ್.ಲಿಂಗೇಗೌಡ - ಮಂಡ್ಯ
* ಮಲ್ಲಿಕಾರ್ಜುನ್ ಭಟ್ಟರಹಳ್ಳಿ - ತುಮಕೂರು
* ವಿಕಾಸ್ ಸೊಪ್ಪಿನ್ - ಧಾರವಾಡ/ಬಾಗಲಕೋಟೆ
* ರಘು ಜಾಣಗೆರೆ - ಬೆಂಗಳೂರು ಗ್ರಾಮಾಂತರ












Click it and Unblock the Notifications