ಯಡಿಯೂರಪ್ಪ ಹೋದಲೆಲ್ಲಾ ಅವರನ್ನು ಹಿಂಬಾಲಿಸಲು ಕಾಂಗ್ರೆಸ್ ನಿರ್ಧಾರ
ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವರಿಷ್ಠರು ಘೋಷಿಸಿದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿನ ಚಟುವಟಿಕೆಗಳು ತೀವ್ರಗೊಳ್ಳುತ್ತಿದೆ. ಜೊತೆಗೆ, ರಾಜ್ಯ ಪ್ರವಾಸ ಹೊರಡಲು ಅಣಿಯಾಗಿರುವ ಯಡಿಯೂರಪ್ಪನವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ಯೋಜನೆ ಸಿದ್ದಪಡಿಸಿದೆ.
ಯಡಿಯೂರಪ್ಪ ಹೋದಲೆಲ್ಲಾ ಅವರನ್ನು ಹಿಂಬಾಲಿಸಿ, ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಮತ್ತು ನಡೆಸಿದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. (ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ)
ಈ ನಡುವೆ, ಅಂಬೇಡ್ಕರ್ ಜಯಂತಿ ಮತ್ತು ಸೌರಮಾನ ಯುಗಾದಿಯ ದಿನವಾದ ಏಪ್ರಿಲ್ 14ರಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಳ್ಳುತ್ತಿರುವ ಯಡಿಯೂರಪ್ಪ, ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಖುದ್ದು ತಾನೇ ರಾಜ್ಯ ಪ್ರವಾಸ ಕೈಗೊಂಡು ಬರ ಅಧ್ಯಯನ ನಡೆಸುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾನೂ ಉತ್ತರ ಕರ್ನಾಟಕ ಪ್ರವಾಸಕ್ಕೆ ಮುಂದಾಗಿದ್ದಾರೆ. (ಬರಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ಹೊರಟ ಸಿಎಂ)
ಬಿಎಸ್ವೈ ಒಬ್ಬ ಜನನಾಯಕ ಎಂದು ಕಾಂಗ್ರೆಸ್ ಮುಖಂಡರೇ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಮುಖ್ಯಮಂತ್ರಿಗಳು ಏಪ್ರಿಲ್ 15ರಿಂದ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಬಿಎಸ್ವೈಗಾಗಿ ಬದಲಾದ ಮುಖ್ಯಮಂತ್ರಿಗಳ ಟೈಂ ಟೇಬಲ್, ಸ್ಲೈಡಿನಲ್ಲಿ..
ಪೂರ್ವ ನಿಗದಿತ ಕಾರ್ಯಕ್ರಮ ರದ್ದು
ಪೂರ್ವ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ ಹದಿನೈದರಿಂದ ಎರಡು ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ಏಪ್ರಿಲ್ 20ರ ನಂತರ ಪಕ್ಷದ ಮುಖಂಡರ ಜೊತೆ ತಾನೇ ಖುದ್ದಾಗಿ ರಾಜ್ಯ ಪ್ರವಾಸಕ್ಕೆ ಹೋಗುವ ನಿರ್ಧಾರವನ್ನು ಯಡಿಯೂರಪ್ಪ ಪ್ರಕಟಿಸಿದ ನಂತರ, ಮುಖ್ಯಮಂತ್ರಿಗಳ ಟೈಂ ಟೇಬಲ್ ನಲ್ಲಿ ಬದಲಾವಣೆಯಾಗಿರುವುದು ಗಮನಿಸಬೇಕಾದ ಅಂಶ.
ಬರಪೀಡಿತ ಜಿಲ್ಲೆ
ಸಿಎಂ ಸಿದ್ದರಾಮಯ್ಯ ಏಪ್ರಿಲ್ 15ರಂದು ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಏಪ್ರಿಲ್ 16ರಂದು ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಗತಿ ಪರಿಶೀಲನಾ ಸಭೆ ಸಹ ನಡೆಸಲಿದ್ದಾರೆ.
ಅಂಬೇಡ್ಕರ್ ಜಯಂತಿ
ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷರಾಗಿ ನಿಯೋಜಿಸಿದ ನಂತರ ಅವರಿಗೆ ಅಬ್ಬರದ ಪ್ರಚಾರ, ಸ್ವಾಗತ ಎಲ್ಲೆಲ್ಲೂ ಸಿಗುತ್ತಿದೆ. ಹೀಗಾಗಿ, ಕಾಂಗ್ರೆಸ್ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಶ್ರದ್ಧೆಯಿಂದ ಆಚರಣೆಗೆ ಮುಂದಾಗಿದೆ. ಬುಧವಾರ (ಏ 13) ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದೆ.
ಬಿ ಎಲ್ ಶಂಕರ್ ಹೇಳಿದ್ದು
ಯಡಿಯೂರಪ್ಪ ಒಬ್ಬ ಜನನಾಯಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಒಬ್ಬರಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್, ಬಿಎಸ್ವೈ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗ ಪ್ರತಿಕ್ರಿಯಿಸಿದ್ದರು.
ವಿ ಎಸ್ ಉಗ್ರಪ್ಪ
ಯಡಿಯೂರಪ್ಪನವರು ಹೋದಲ್ಲೆಲ್ಲ ನಾವೂ ಹೋಗುತ್ತೇವೆ. ಅವರ ಭ್ರಷ್ಟಾಚಾರದ ಚರಿತ್ರೆಯನ್ನು ಜನರ ಮುಂದೆ ಬಿಚ್ಚಿಡುತ್ತೇವೆ. ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದ್ದೂ ಸೇರಿದಂತೆ ಅವರ ವಿರುದ್ಧದ ಅನೇಕ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಜೆಪಿಗೆ ಇದಕ್ಕಿಂತ ದುಸ್ಥಿತಿ ಇನ್ನೊಂದಿದೆಯಾ ಎಂದು ವಿಧಾನ ಪರಿಷತ್ ಸದಸ್ಯ ವಿ ಎಸ್ ಉಗ್ರಪ್ಪ ಲೇವಡಿ ಮಾಡಿದ್ದಾರೆ.
ಬಿಎಸ್ವೈ ಹೋದಲೆಲ್ಲಾ ನಾವೂ ಹೋಗುತ್ತೇವೆ
ಅಧ್ಯಕ್ಷರಾಗಿ ನಿಯೋಜನೆಗೊಂಡ ನಂತರ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಪ್ರವಾಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ನಡೆಸಿದ ಭ್ರಷ್ಟಾಚಾರಗಳು, ಹಗರಣಗಳು, ಜೈಲಿಗೆ ಹೋಗಿ ಬಂದಿದ್ದನ್ನು ಅವರು ಎಲ್ಲೆಲ್ಲಿ ಪ್ರವಾಸ ಮಾಡುತ್ತಾರೋ, ಅಲ್ಲಿಗೆಲ್ಲಾ ನಾವು ಹೋಗಿ ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆಂದು ಉಗ್ರಪ್ಪ ಹೇಳಿದ್ದಾರೆ.