ಜಾವಡೇಕರ್ ಬಂದು ಹೋದ ಮೇಲೆ ಬದಲಾಯಿತು ತುಮಕೂರು ಬಿಜೆಪಿ ಹವಾಮಾನ
ತುಮಕೂರು, ಜನವರಿ 23: ಜಿಲ್ಲಾ ಬಿಜೆಪಿಯಲ್ಲಿದ್ದ ಅಸಮಾಧಾನ ಒಂದು ಹಂತಕ್ಕೆ ತಣ್ಣಗಾಗಿದೆ ಎಂದುಕೊಳ್ಳುವಷ್ಟರಲ್ಲಿ ಮೊನ್ನೆ ಜಿಲ್ಲೆಗೆ ಬಂದಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಅತೃಪ್ತರ ಗುಂಪು ಮನವಿಯೊಂದನ್ನು ನೀಡಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಕೂಡ ಅದರಲ್ಲಿ ಹೇಳಲಾಗಿದೆ.
ಪರಿವರ್ತನಾ ಯಾತ್ರೆಯು ಜಿಲ್ಲೆಗೆ ಬಂದಾಗ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಪಡೆಯಲಿಲ್ಲ. ಅದಕ್ಕೆ ಕಾರಣವಾಗಿದ್ದು ಸಿದ್ಧತೆಯ ಕೊರತೆ ಹಾಗೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಎಂದು ಸಹ ಅದರಲ್ಲಿ ತಿಳಿಸಿದ್ದು, ಕೆಜೆಪಿ ಹಾಗೂ ಕಾಂಗ್ರೆಸ್ ನಲ್ಲಿದ್ದ ಜಿ.ಬಿ.ಜ್ಯೋತಿಗಣೇಶ್ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಅಂತ ಪಕ್ಷ ಮಾಡಿ, ಅಭ್ಯರ್ಥಿಯನ್ನು ಹಾಕಿದ ಕಾರಣಕ್ಕೇ ಬಿಜೆಪಿಗೆ ಹಿನ್ನಡೆ ಆಯಿತು. ಆಗ ಕೆಜೆಪಿಯಲ್ಲಿ ಯಾರಿದ್ದರೋ ಅವರನ್ನೇ ಕರೆದುಕೊಂಡು ಬಂದು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ಪ್ರಮುಖ ಸಭೆಗಳಿಗೆ ನಿಷ್ಠಾವಂತ ಹಾಗೂ ಪ್ರಮುಖ ಮುಖಂಡರಿಗೇ ಆಹ್ವಾನ ನೀಡುವುದಿಲ್ಲ ಎಂದು ದೂರಲಾಗಿದೆ.

ಹೇಳಿಕೆ ನೀಡದಂತೆ ತಾಕೀತು
ಪ್ರಕಾಶ್ ಜಾವಡೇಕರ್ ಅವರ ಸಮ್ಮುಖದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಜಿ.ಎಸ್.ಬಸವರಾಜು, ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಇದ್ದು, ಪಕ್ಷದ ಟಿಕೆಟ್ ವಿಚಾರವಾಗಿ ಅಂತಿಮ ತೀರ್ಮಾನ ಆಗಿಲ್ಲ. ಅಮಿತ್ ಶಾ ಈ ಬಗ್ಗೆ ನಿರ್ಧರಿಸುತ್ತಾರೆ. ಮಾಧ್ಯಮಗಳ ಮುಂದೆ ಪಕ್ಷದ ವಿಚಾರವಾಗಿ ಯಾವುದೇ ಹೇಳಿಕೆ ನೀಡದಿರುವಂತೆ ಜಾವಡೇಕರ್ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆಗೆ ಶಿವಣ್ಣ, ಲೋಕಸಭೆಗೆ ಜ್ಯೋತಿಗಣೇಶ್
ತುಮಕೂರು ನಗರ ಕ್ಷೇತ್ರದ ಟಿಕೆಟ್ ಸೊಗಡು ಶಿವಣ್ಣ ಅವರಿಗೂ ಮುಂದಿನ ಲೋಕಸಭೆ ಚುನಾವಣೆಗೆ ತುಮಕೂರಿನಿಂದ ಜ್ಯೋತಿ ಗಣೇಶ್ ಗೂ ಟಿಕೆಟ್ ನೀಡುವ ಒಪ್ಪಂದ ಮಾಡಿಕೊಂಡಿದ್ದು, ಪಕ್ಷದ ನಿಯಮದ ಪ್ರಕಾರ 76 ವರ್ಷದ ಜಿ.ಎಸ್.ಬಸವರಾಜ್ ಗೆ ಮುಂದಿನ ಸಂಸತ್ ಚುನಾವಣೆಗೆ ಟಿಕೆಟ್ ಅನುಮಾನ. ಆದ್ದರಿಂದ ಅವರ ಮಗ ಜ್ಯೋತಿಗಣೇಶ್ ರನ್ನು ಕಣಕ್ಕಿಳಿಸಿ, ಸದ್ಯದ ಅಸಮಾಧಾನ ನಿವಾರಿಸುವ ಪ್ರಯತ್ನವಾಗಿದೆ ಎಂದು ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ.

ಪ್ರಚಾರ ಆರಂಭಿಸಿದ ಸೊಗಡು ಶಿವಣ್ಣ
ನಗರ ಕ್ಷೇತ್ರದಿಂದ ಅದಾಗಲೇ ತಮ್ಮ ಪ್ರಚಾರವನ್ನು ಸೊಗಡು ಶಿವಣ್ಣ ಸಹ ಆರಂಭಿಸಿದ್ದಾರೆ. ಬಡಾವಣೆಗಳಿಗೆ ಭೇಟಿ, ಅಲ್ಲಿನ ಅಹವಾಲುಗಳನ್ನು ಆಲಿಸುವುದು, ಜನರ ಜತೆ ಹೆಚ್ಚು ಬೆರೆಯುವುದು ಹೀಗೆ ತಮ್ಮ ಚುನಾವಣೆ ಪ್ರಚಾರವನ್ನು ಶುರು ಮಾಡಿಕೊಂಡಿದ್ದಾರೆ. ತಮಗೆ ಟಿಕೆಟ್ ಸಿಗುವ ಬಗ್ಗೆ ಕೂಡ ವಿಶ್ವಾಸದಿಂದ ಇದ್ದಾರೆ.

ಬಿಜೆಪಿಯ ಒಳಿತಿಗಾಗಿ ಹೋರಾಟ
ತುಮಕೂರಿನಲ್ಲಿ ಆಡಳಿತ ವ್ಯವಸ್ಥೆ ಬಹಳ ಹಾಳಾಗಿದೆ. ನಾನು ಶಾಸಕನಾಗಿದ್ದಾಗ ಕಾನೂನು ವ್ಯವಸ್ಥೆ ಹದ್ದುಬಸ್ತಿನಲ್ಲಿತ್ತು. ಈಗ ಅಧಿಕಾರಿಗಳೇ ಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಪಕ್ಷದೊಳಗೆ ಅದು ಸರಿಯಿಲ್ಲ- ಇದು ಸರಿಯಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಬಿಜೆಪಿಯ ಒಳಿತಿಗಾಗಿ ಹೋರಾಟ ಅನಿವಾರ್ಯ. ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ಸೊಗಡು ಶಿವಣ್ಣ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.












Click it and Unblock the Notifications