ದೇವಾಲಯಕ್ಕೆ ಹೋಗುವುದರಿಂದ ಏನು ಲಾಭ?
ದೇವಾಲಯಕ್ಕೆ ಆಗಾಗ ಹೋಗುವುದು, ದೇವರ ಸನ್ನಿಧಿಯಲ್ಲಿ ಕುಳಿತು ಧ್ಯಾನಸ್ಥರಾಗುವುದು ಅಥವಾ ದೇವರ ಆರಾಧನೆಯಲ್ಲಿ ಮನಶ್ಶಾಂತಿ ಪಡೆಯುವುದೆಂದರೆ ಹಲವರಿಗೆ ಅಪ್ಯಾಯಮಾನ. ಕೆಲವರಿಗೆ ದೇವಾಲಯಕ್ಕೆ ಹೋಗಿ ಕಲ್ಲಿನ ವಿಗ್ರಹದ ಮುಂದೆ ಕೈಮುಗಿದು ನಿಂತರೆ ಏನು ಪ್ರಯೋಜನ ಎಂಬ ತಾತ್ಸಾರ.
ಆದರೆ, ದೇವಾಲಯಗಳಿಗೆ ಹೋಗುವುದರಿಂದ ದೇಹಕ್ಕೆ, ಮನಸ್ಸಿಗೆ ಆಗುವ ಲಾಭವಾದರೂ ಏನು? ಇದಕ್ಕೆ ವೈಜ್ಞಾನಿಕ ತಳಹತಿಯೇನು? ಎಂಬ ಸಂಗತಿಯ ಕುರಿತು ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿರುವ ಈ ಲೇಖನ ಚಿಂತನೆಗೆ ಹಚ್ಚಿದೆ. ಇದನ್ನು ಓದಿ, ಹೌದು ನಿಜ ಅಂತ ಅನ್ನಿಸಿದರೆ ಆಗಾಗ ಗುಡಿಗೆ ಹೋಗಿ ಪ್ರಯೋಜನ ಪಡೆದುಕೊಳ್ಳಿ.
ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಹಲವಾರಿವೆ.
ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ. ಹೇಗೆ ಗೊತ್ತೇ? ದೇವರ ಮೂಲಸ್ಥಾನ ಗರ್ಭಗುಡಿ. ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದಿಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು. ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ. [ದೊಮ್ಮಲೂರಿನ ಚೊಕ್ಕನಾಥಸ್ವಾಮಿ]
ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ. ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ.
ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ. ಮುಖ್ಯದ್ವಾರವೊಂದೇ ತೆರೆದಿರುತ್ತದೆ. ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತವೆ. ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ. ಒಂದೆಡೆ ದೇವರ ದರ್ಶನ, ಇನ್ನೊಂದೆಡೆ ಆಯಾಸ ಪರಿಹಾರ.
ಹೇಗಿದೆ ನೋಡಿ! ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ.
ಇನ್ನು ತೀರ್ಥಸೇವನೆ. ತೀರ್ಥವನ್ನು ಮಾಡುವುದು ಹೇಗೆ? ಯಾಲಕ್ಕಿ, ತುಳಸಿ, ಲವಂಗ ಮುಂತಾದವುಗಳಿಂದ. ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ. ತೀರ್ಥ ಸೇವನೆಯಿಂದ ದೇಹ ಆಹ್ಲಾದವಾಗುತ್ತದೆ. ಚೈತನ್ಯ ಮೂಡುತ್ತದೆ. ಆರೋಗ್ಯಕರವೂ ಹೌದು. ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು ಬರದಂತೇ ತಡೆಯುತ್ತದೆ. ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ. ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ.
ದೀಪಾರಾಧನೆ, ವಿಶೇಷ ಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು - ಹೆಚ್ಚು ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತಿರುತ್ತದೆ. ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು. ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ. ಆ ಕಾರಣದಿಂದಲೇ ಕೆಲವು ದೇವಸ್ಥಾನಗಳಲ್ಲಿ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ನಿಯಮವಿರುತ್ತದೆ.
ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ? ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ.