ಮೋದಿ, ಯೋಗಿಯನ್ನು 'ಮಹಾನ್ ನಟ'ರೆಂದ ಪ್ರಕಾಶ್ ರೈಗೆ 6 ಪ್ರಶ್ನೆಗಳು
ಗೌರಿ ಹತ್ಯೆಯ ವಿಚಾರದಲ್ಲಿ ಮೌನವಾಗಿರುವ ಪ್ರಧಾನಿ ಮೋದಿಗೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ, ನಾನ್ಯಾಕೆ ನನ್ನ ಪ್ರಶಸ್ತಿಯನ್ನು ನೀಡಬಾರದು ಎಂದು ಹೇಳಿಕೆ ನೀಡಿರುವ ಬಹುಭಾಷಾ ನಟ ಪ್ರಕಾಶ್ ರೈಗೆ ಆರು ಪ್ರಶ್ನೆಗಳು.
ಇಲ್ಲಿನ ಕಲಾವಿದನೊಬ್ಬ ಬೇರೆ ಊರಲ್ಲಿ ಮಿಂಚುತ್ತಿದ್ದಾಗ, ನಮ್ಮ ಕನ್ನಡದಲ್ಲಿ ಯಾಕೆ ಈ ಪ್ರತಿಭೆ ನಟಿಸುತ್ತಿಲ್ಲ ಎಂದು ಈ ಹಿಂದೆ ಅನಿಸಿದ್ದುಂಟು. ಕಲಾವಿದರು ಹೋರಾಟ ನಡೆಸುವುದರಲ್ಲಿ ತಪ್ಪೇನಿಲ್ಲ.. ಆದರೆ, ಸಾಮಾಜಿಕ ನ್ಯಾಯ ಎನ್ನುವ ವಿಚಾರದಲ್ಲಿ ನಡೆಯುವ ಹೋರಾಟಗಳಲ್ಲಿ ಭಾಗವಹಿಸುವ ಕಲಾವಿದರು ದಿಕ್ಕುತಪ್ಪಬಾರದು.. ಅಥವಾ ದಿಕ್ಕುತಪ್ಪಿಸುವವರ ಮಾತಿಗೆ ಸೊಪ್ಪು ಹಾಕಬಾರದು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಹೆಚ್ಚುಕಮ್ಮಿ ಒಂದು ತಿಂಗಳಾಗುತ್ತಾ ಬಂತು. ಹಂತಕರು ಯಾರೆಂದು ಗೊತ್ತು, ಯಾಕೆ ಮಾಡಿದ್ದಾರೆಂದು ಗೊತ್ತು ಎಂದು ಇವತ್ತಿನವರೆಗೂ (ಅ 2) ಹೇಳುತ್ತಿರುವ ರಾಜ್ಯ ಸರಕಾರ, ಹಂತಕರನ್ನು ಹೆಡೆಮುರಿ ಕಟ್ಟುವುದು ಯಾವಾಗ, ಅಸೆಂಬ್ಲಿ ಚುನಾವಣೆಯ ದಿನಾಂಕ ಘೋಷಣೆಯಾಗುವ ಹೊಸ್ತಿಲಲ್ಲಾ ಎಂದು ಸಾರ್ವಜನಿಕರಿಗೆ ಅನುಮಾನ ಕಾಡದೇ ಇರುತ್ತದೆಯೇ!
DYFI ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಟ ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ವಿಡಿಯೋ ಒಂದನ್ನು ನೋಡಿದೆ, ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು.
ಗೌರಿ ಹತ್ಯೆಯ ವಿಚಾರದಲ್ಲಿ ಮೌನವಾಗಿರುವ ಪ್ರಧಾನಿ ಮೋದಿಗೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ, ನಾನ್ಯಾಕೆ ನನ್ನ ಪ್ರಶಸ್ತಿಯನ್ನು ನೀಡಬಾರದು ಎಂದು ಆಲೋಚಿಸುತ್ತಿದ್ದೇನೆಂದು ಪ್ರಕಾಶ್ ರೈ ಹೇಳಿಕೆ ನೀಡಿದ್ದರು.
ತಮ್ಮ ಹೇಳಿಕೆ ಟ್ರೆಂಡಿಂಗ್ ಆಗುತ್ತಿದ್ದಂತೇ ಮತ್ತೆ ಹೇಳಿಕೆ ನೀಡಿದ ಪ್ರಕಾಶ್ ರೈ, ರಾಷ್ಟ್ರ ಪ್ರಶಸ್ತಿ ವಾಪಸ್ ಮಾಡಲು ನಾನು ಮೂರ್ಖನಲ್ಲ. ಗೌರಿ ಹತ್ಯೆಯಲ್ಲಿ ಸಾಮಾಜಿಕ ನ್ಯಾಯದ ಕೊಲೆಯಾಗಿದೆ. ಪ್ರಧಾನಿ ಮೌನವಾಗಿರುವುದಕ್ಕೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ, ಈ ದೇಶದ ಪ್ರಜೆಯಾಗಿ ಇದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಪ್ರಕಾಶ್ ರೈ ಅವರ ಈ ಹೇಳಿಕೆಯಿಂದ, ಕೆಲವು ಪ್ರಶ್ನೆಗಳು ಹುಟ್ಟುಕೊಳ್ಳುವುದಂತೂ ಸ್ವಾಭಾವಿಕ. ಮೋದಿ, ಯೋಗಿಯನ್ನು ಮಹಾನ್ ನಟರೆಂದ ಪ್ರಕಾಶ್ ರೈಗೆ ಕೆಲವು ಪ್ರಶ್ನೆಗಳು, ಮುಂದೆ ಓದಿ

ಪ್ರಧಾನಿ ಮೋದಿ ಮಾತ್ರ ಮಹಾನ್ ನಟರೆಂದು ಅನಿಸಿದ್ದು ಯಾಕೆ?
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿರುವ ನಿಮಗೆ, ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಮಾತ್ರ ಮಹಾನ್ ನಟರೆಂದು ಅನಿಸಿದ್ದು ಯಾಕೆ? ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತ್ರ ಚಾಣಾಕ್ಷ ಶೂಟರ್ ಎಂದು ನೀವು ಹೇಳಿದ್ದು ಯಾಕೆ? ದೇಶದ ಇತರ ಬೇರೆ ಬೇರೆ ಪಕ್ಷಗಳ ಮುಖಂಡರಲ್ಲಿ ಯಾರೂ ನಿಮ್ಮನ್ನು ಮೀರಿಸುವ ನಟರು ಇಲ್ಲವೇ?

ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ
ಕನ್ನಡ ಸೇರಿದಂತೆ ಪಂಚ ಭಾಷಾ ನಟರಾಗಿರುವ ನಿಮಗೆ ಕೇರಳದಲ್ಲೂ ಬಹಳಷ್ಟು ಮಂದಿ ಅಭಿಮಾನಿಗಳಿದ್ದಾರೆ. ಇತ್ತೀಚಿನ ಕೆಲವು ತಿಂಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿ ಬರ್ಭರವಾಗಿ ಹತ್ಯೆಯಾಗುತ್ತಿದ್ದಾರೆ. ಸಾಲು ಸಾಲು ಜನ ಹತ್ಯೆಯಾಗುತ್ತಿದ್ದಾಗ ನೀವ್ಯಾಕೆ ಸುಮ್ಮನಿದ್ದೀರಿ?

ಗೌರಿ ಹತ್ಯೆಯ ತನಿಖೆಯನ್ನು ನಡೆಸುತ್ತಿರುವ ಎಸ್ ಐಟಿ
ಗೌರಿ ಲಂಕೇಶ್ ಹತ್ಯೆಯಾಗಿದ್ದು ಕರ್ನಾಟಕದಲ್ಲಿ. ಹತ್ಯೆಯ ತನಿಖೆಯನ್ನು ಎಸ್ ಐಟಿ ನಡೆಸುತ್ತಿದೆ. ಒಂದು ವೇಳೆ ರಾಜ್ಯ ಸರಕಾರ ತನಿಖೆಯನ್ನು ಸಿಬಿಐಗೆ ವಹಿಸಿ, ತನಿಖೆಯಲ್ಲಿ ಏನೂ ಪ್ರಗತಿ ಕಾಣಿಸದಿದ್ದರೆ ನೀವು ಪ್ರಧಾನಿ ಮೋದಿಯನ್ನು ದೂರಬಹುದಿತ್ತು, ಅದು ಬಿಟ್ಟು ಪ್ರಧಾನಿಯನ್ನು ದೂರುವುದು ಎಷ್ಟು ಸರಿ?

ಕಾವೇರಿ ವಿಚಾರ ಮಾತನಾಡುವುದು ಸಾಮಾಜಿಕ ನ್ಯಾಯವಲ್ಲವೇ
ನಿಮ್ಮ ಹೋಮ್ ಬ್ಯಾನರಿನ ಚಿತ್ರದ ಪ್ರಮೋಗಾಗಿ ಟಿವಿ ವಾಹಿನಿಗೆ ಹೋಗಿದ್ದ ಘಟನೆಯನ್ನು ಒಮ್ಮೆ ನೆನೆಪಿಸಿಕೊಳ್ಳಿ, ನಿರೂಪಕಿ, ದಶಕಗಳಿಂದ ಸಮಸ್ಯೆಯಾಗಿರುವ ಕೂತಿರುವ ಕಾವೇರಿ ನದಿನೀರು ಹಂಚಿಕೆಯ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ ಕಾಲರ್ ಮೈಕ್ ಎಸೆದು, ಚಿತ್ರದ ಬಗ್ಗೆ ಮಾತನಾಡಿ, ಕಾವೇರಿ ಬಗ್ಗೆ ಮಾತನಾಡಬೇಡಿ ಎಂದು ಕೂಗಾಡಿದಿರಿ. ಕಾವೇರಿ ವಿಚಾರ ಮಾತನಾಡುವುದು ನಿಮಗೆ ಸಾಮಾಜಿಕ ನ್ಯಾಯ ಎಂದು ಅನಿಸಲಿಲ್ಲವೇ?

ಪೂರ್ವನಿರ್ಧರಿತವಾಗಿ ಗುಮಾನಿಯಿಟ್ಟುಕೊಳ್ಳುವುದು ಸರಿಯೇ
ಗೌರಿ ಲಂಕೇಶ್ ಹತ್ಯೆಯ ಹಿಂದೆ ಸನಾತನ ಸಂಸ್ಥೆ ಅಥವಾ ಹಿಂದೂಪರ ಸಂಘಟನೆಗಳ ಕೈವಾಡವಿದೆ ಎನ್ನುವುದಕ್ಕೆ ಖಚಿತ ಪುರಾವೆ/ಮಾಹಿತಿಗಳಿದ್ದರೆ ಅದನ್ನು ವಿಶೇಷ ತನಿಖಾ ದಳಕ್ಕೆ ನೀಡಬಹುದಲ್ಲವೇ? ಅದು ಬಿಟ್ಟು ಪೂರ್ವನಿರ್ಧರಿತವಾಗಿ ಬಲಪಂಥೀಯ ಸಂಘಟನೆಗಳತ್ತ ಗುಮಾನಿಯಿಟ್ಟುಕೊಳ್ಳುವುದು ಸರಿಯೇ?

ಪೂಜಾರಿಯೊಬ್ಬರು ರಾಜ್ಯದ ಸಿಎಂ ಆಗಬಾರದಾ
ಕೊನೆಯದಾಗಿ, ಪೂಜಾರಿಯೊಬ್ಬರು ರಾಜ್ಯದ ಸಿಎಂ ಆಗಬಾರದಾ? ತನ್ನ ಹದಿನೆಂಟನೇ ವಯಸ್ಸಿನಲ್ಲಿ ಮನೆಬಿಟ್ಟು, ಅಯೋಧ್ಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ತದನಂತರ ಸನ್ಯಾಸತ್ವ ಸ್ವೀಕರಿಸಿದವರು. ಸಿಎಂ ಆಗುವ ಮುನ್ನ ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್ ಅವರದ್ದು ನಿಮ್ಮ ಪ್ರಕಾರ ನಟನೆ ಅನ್ನುವುದಾದರೆ, ಅವರನ್ನು ಗೆಲ್ಲಿಸುತ್ತಿರುವ ಮತದಾರ ಮೂರ್ಖನೇ?












Click it and Unblock the Notifications