ಇಬ್ಬರು ಉಪ ನೋಂದಣಾಧಿಕಾರಿಗಳು, ಸಹಾಯಕ ಎಂಜಿನಿಯರ್ ಎಸಿಬಿ ಬಲೆಗೆ
ಬೆಂಗಳೂರು, ಅಕ್ಟೋಬರ್ 18: ಇಬ್ಬರು ಉಪ ನೋಂದಣಾಧಿಕಾರಿಗಳು ಹಾಗೂ ಒಬ್ಬ ಸಹಾಯಕ ಎಂಜಿನಿಯರ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆ ಉಪ ನೋಂದಣಾಧಿಕಾರಿಗಳು ಮತ್ತು ಹುಬ್ಬಳ್ಳಿಯ ಕಿರಿಯ ಎಂಜಿನಿಯರ್ ಲಂಚ ಪಡೆಯುವಾಗ ಎಸಿಬಿ ವಶಕ್ಕೆ ಪಡೆಯಲಾಗಿದೆ.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳ ಮೂಲಕ ಉಪನೋಂದಣಾಧಿಕಾರಿ ನಾಗೆಂದ್ರ ಕುಮಾರ್ ಹಣ ವಸೂಲಿಯಲ್ಲಿ ತೊಡಗಿದ್ದರು ಎಂಬ ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡವು ಸೋಮವಾರ (ಅಕ್ಟೋಬರ್ 17) ದಾಳಿ ನಡೆಸಿತು.[ಐದು ಸಾವಿರಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಚಿತ್ತಾಪುರದ ನಿಂಗಮ್ಮ]

ಆ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಲೆಕ್ಕಕ್ಕೆ ಸಿಗದ 52,500 ರುಪಾಯಿ ವಶಪಡಿಸಿಕೊಳ್ಳಲಾಯಿತು. ಉಪನೋಂದಣಾಧಿಕಾರಿ ನಾಗೇಂದ್ರ ಕುಮಾರ್, ಮಧ್ಯವರ್ತಿಗಳಾದ ಹೋಮರಾಜ್ ಹಾಗೂ ನಿಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹುಬ್ಬಳ್ಳಿ: ನಗರದಲ್ಲಿ ಸಣ್ಣ ಕೈಗಾರಿಕೆಯ ಯಂತ್ರಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಲಂಚದ ಬೇಡಿಕೆ ಇಟ್ಟ ಸಹಾಯಕ ಎಂಜಿನಿಯರ್ ರಿಯಾಜ್ ಅಹಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ್ದಾಗ, ತಕ್ಷಣ ಕೆಲಸ ಆಗಲು ಸಹಾಯಕ ಲೈನ್ ಮೆನ್ ಮೊಹಮ್ಮದ್ ರಫೀಕ್ 70 ಸಾವಿರ ರುಪಾಯಿಗೆ ಬೇಡಿಕೆ ಇಟ್ಟಿದ್ದರು.[2 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ರು ತುಮಕೂರು ಕಾರ್ಪೊರೇಟರ್ ಕರುಣಾರಾಧ್ಯ]
ಆ ನಂತರ ರಿಯಾಜ್ ಅಹಮದ್ ಅಹಮದ್ ಕುದಾವಂದ್ ಹಾಗೂ ಮೊಹಮ್ಮದ್ ರಫೀಕ್ ಅರ್ಜಿದಾರರ ಸ್ಥಳಕ್ಕೆ ಭೇಟಿ ನೀಡಿ, 65 ಸಾವಿರ ಲಂಚ ಕೊಡುವಂತೆ ತಿಳಿಸಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ದೂರುದಾರರಿಂದ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಇಬ್ಬರೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಂಡ್ಯ: ಶ್ರೀರಂಗಪಟ್ಟಣ ಉಪನೋಂದಣಾಧಿಕಾರಿ ಕಚೇರಿಯ ಉಪನೋಂದಣಾಧಿಕಾರಿ ತ್ಯಾಗರಾಜ್ ವಿರುದ್ಧ ಕೂಡ ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ ಲೆಕ್ಕಕ್ಕೆ ಸಿಗದ 83 ಸಾವಿರ ರುಪಾಯಿ ಸಿಕ್ಕಿದೆ. ಪ್ರಭಾರ ಉಪನೋಂದಣಾಧಿಕಾರಿ ತ್ಯಾಗರಾಜ್, ಮಧ್ಯವರ್ತಿಗಳಾದ ಶಶಿಭೂಷಣ, ವಿನಯ್, ನಟರಾಜ್, ಕಿರಣ್, ರಾಜೀವ್, ಸಿದ್ದರಾಮು, ಗಂಗಾಧರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications