ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್, ರಾಜ್ಯದ 36 ಕಡೆ ದಾಳಿ
ಇಂದು (ಮಾರ್ಚ್ 09) ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿ ಶಾಕ್ ನೀಡಿದ್ದಾರೆ. ಕೋಲಾರ, ಬೆಳಗಾವಿ ಮಂಗಳೂರು, ಕೊಪ್ಪಳ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಲ್ವರು ಅಧಿಕಾರಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಇತರ ಕಡೆಗಳಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
ಕೋಲಾರದ ಮುಳಬಾಗಲು ವ್ಯಾಪ್ತಿಯ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆ ಎಇಇ ಅಪ್ಪಿರೆಡ್ಡಿ ಎಂಬುವರ ಮೇಲೆ ದಾಳಿ ನಡೆದಿದೆ. ಬೆಳಗಾವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜೇಶ್ವರಿ ಜೈನಾಪುರ ಹಾಗೂ ಉಡುಪಿ ಅಬಕಾರಿ ಉಪ ಅಧಿಕ್ಷಕ ವಿನೋದ್ ಕುಮಾರ್, ಕೊಪ್ಪಳದ ಜಿಲ್ಲಾ ಪಂಚಾಯಿತಿ ಕಚೇರಿ ಎಇಇ ವಿಜಯ್ ಕುಮಾರ್, ಕಡೂರು ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕ ಶಿವಕುಮಾರ್, ಚಿಕ್ಕಮಗಳೂರಿನ ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೀರೂಪಾಕ್ಷ ಕೆ.ಸಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೆಳ್ಳಂಬೆಳಗ್ಗೆ ಬಳ್ಳಾರಿ, ಗದಗನಲ್ಲಿ ಭ್ರಷ್ಟಾಚಾರ ನಿಗ್ರಹದಳ ದಾಳಿ
ಅಪ್ಪಿರೆಡ್ಡಿ ಅವರ ಶ್ರೀನಿವಾಸಪುರದ ಜಾಕೀರ್ ಹುಸೇನ್ ಬಡಾವಣೆಯ ಮನೆ ಮತ್ತು ಕಚೇರಿ ಹಾಗೂ ಹೂದಲಿ ಗ್ರಾಮದಲ್ಲಿನ ಕೋಳಿ ಫಾರಂ ಸೇರಿದಂತೆ ಒಟ್ಟು 5 ಕಡೆ ದಾಳಿ ನಡೆಸಲಾಗಿದ್ದು, ವಿವಿಧ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಎಸಿಬಿ ಡಿವೈಎಸ್ಪಿ ಮೋಹನ್ ಮತ್ತು ಇನ್ಸ್ಪೆಕ್ಟರ್ ರಂಗಸ್ವಾಮಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸಾರ್ವಜನಿಕರೊಬ್ಬರ ದೂರಿನನ್ವಯ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಇನ್ನು, ಬೆಳಗಾವಿಯ ಕುವೆಂಪು ನಗರದಲ್ಲಿರುವ ರಾಜೇಶ್ವರಿ ಅವರ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಜೆ.ರಘು ನೇತೃತ್ವದಲ್ಲಿ ಬೆಳಿಗ್ಗೆ 6 ರ ಸುಮಾರಿಗೆ ದಾಳಿ ನಡೆದಿದೆ. ಧಾರವಾಡದಲ್ಲಿನ ರಾಜೇಶ್ವರಿ ಅವರ ಪತಿ ಮನೆ, ವಿಜಯಪುರದಲ್ಲಿನ ಅವರ ಮತ್ತೊಂದು ಮನೆ ಸೇರಿದಂತೆ ರಾಜೇಶ್ವರಿ ಅವರ ಸಂಬಂಧಿಕರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ರಾಜೇಶ್ವರಿ ಅವರು ಈ ಹಿಂದೆ ಬೆಳಗಾವಿ ಜಿಲ್ಲೆಯ ಎಸಿ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಉಡುಪಿ ಅಬಕಾರಿ ಉಪ ಅಧಿಕ್ಷಕ ವಿನೋದ್ ಕುಮಾರ್ ಅವರ ಮಂಗಳೂರಿನ ಕುಂಟಿಕಾನದಲ್ಲಿರುವ ಮನೆ ಮೇಲೆ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಎಸಿಬಿ ಎಸ್ ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.
ಕೊಪ್ಪಳ ಜಿಲ್ಲಾ ಪಂಜಾಯಿತಿಯ ಎಇಇ ವಿಜಯ್ಕುಮಾರ್ ಅವರ ಗಂಗಾವತಿ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ.
ಕಡೂರು ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ತುಮಕೂರಿನ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯವರಾಗಿರುವ ಶಿವಕುಮಾರ್ ಅವರ ಮೇಲೆ ಎಸಿಬಿ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಚಿಕ್ಕಮಗಳೂರು ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿರೂಪಾಕ್ಷ ಅವರ ಮೇಲೆ ಎಸಿಬಿದ ದಾಳಿ ನಡೆಸಿದೆ, ನಗರದ ಜಯನಗರದಲ್ಲಿ ಇರುವ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು ಹಲವು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಹಾಸನ ಎಸಿಬಿ ಡಿವೈಎಸ್ಪಿ ಚಂದ್ರಪ್ಪ, ಮಂಡ್ಯ ಎಸಿಬಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ.
ಕೆ.ಜಿ.ಐ.ಡಿ ಅಧೀಕ್ಷಕರಾಗಿರುವ ರುದ್ರ ಪ್ರಸಾದ್ ಅವರ ಇವರ ಮಲ್ಲತಹಳ್ಳಿ, ಬೆಂಗಳೂರುನಲ್ಲಿರುವ ವಾಸದ ಮನೆ ಹಾಗೂ ಬನಶಂಕರಿ, ತುಮಕೂರಿನಲ್ಲಿರುವ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ತಂಡ ದಾಳಿ ನಡೆಸಿದೆ.
ಮಾಗಡಿ ತಾಲ್ಲೂಕಿನ ಬಣವಾಡಿಯ ವೈದೈಕೀಯ ಅಧಿಕಾರಿ ಡಾ. ರಘುನಾಥ ಅವರ ಕುದೂರು ವಾಸದ ಮನೆ, ಖಾಸಗಿ ಕ್ಲಿನಿಕ್ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರೈಮರಿ ಮೇಡಿಕಲ್ ಸೆಂಟರ್ ಯ ಮೇಲೂ ಎಸಿಬಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.