ಭ್ರಷ್ಟರಿಗೆ ಶ್ರೀರಕ್ಷಾ ಭಾಗ್ಯ! ಇದು ರಾಜ್ಯದ ದೌರ್ಭಾಗ್ಯ!
ಬೆಂಗಳೂರು, ಆಗಸ್ಟ್ 13 : "ಭ್ರಷ್ಟರಿಗೆ ಶ್ರೀರಕ್ಷಾ ಭಾಗ್ಯ! ಕಳಂಕಿತರಿಗೆ ಬಡ್ತಿ ಭಾಗ್ಯ! ಇದು ರಾಜ್ಯದ ಜನರ ದೌರ್ಭಾಗ್ಯ!" ಇಂಥದೊಂದು ಸ್ಲೋಗನ್ ಇಟ್ಟುಕೊಂಡು ಕರ್ನಾಟಕ ಆಮ್ ಆದ್ಮಿ ಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟವಿರೋಧಿ ಯುದ್ಧ ಸಾರಿದ್ದು, ಬೃಹತ್ ಪ್ರತಿಭಟನೆಯ ಕಾರ್ಯಕ್ರಮ ರೂಪಿಸಿದೆ.
ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಬೇಸತ್ತಿದ್ದ ಕರ್ನಾಟಕದ ಜನತೆ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದ್ದರು. ಆದರೆ ಜನತೆಯ ಭರವಸೆಯನ್ನು ಹುಸಿ ಮಾಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರ, ಆಡಳಿತಕ್ಕೆ ಬಂದಾಗಿನಿಂದಲೂ ಭ್ರಷ್ಟ ಹಾಗೂ ಬೇಜವಾಬ್ದಾರಿ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಶ್ರೀರಕ್ಷೆ ಒದಗಿಸುತ್ತಾ, ಕಳಂಕಿತ ಅಧಿಕಾರಿಗಳು ಹಾಗೂ ಮಂತ್ರಿಗಳಿಗೆ ಬಡ್ತಿ ನೀಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನ್ನ ಹೋರಾಟದ ರೂಪುರೋಷೆಗಳನ್ನು ಮಾಧ್ಯಮಗಳಿಗೆ ತಿಳಿಸಿದ ಆಮ್ ಆದ್ಮಿ ಪಕ್ಷ, ಆಗಸ್ಟ್ 16ರಂದು ಮಂಗಳವಾರ ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದು, ಕೆಪಿಎಸ್ಸಿಗೆ ಶ್ಯಾಂ ಭಟ್ ನೇಮಕಾತಿಯಲ್ಲಿ ರಾಜ್ಯಪಾಲ ವಜು ಭಾಯಿ ವಾಲಾ ಅವರು ಮಾಡಿರುವ ತಪ್ಪಿನ ಅರಿವು ಮೂಡಿಸುವ ಯತ್ನಕ್ಕಿಳಿಯಲಿದ್ದಾರೆ. [ಶ್ಯಾಂ ಭಟ್ ನೇಮಕದಲ್ಲಿ ಲಂಚಾವತಾರ: ಸಿಎಂಗೂ ಐತಂತೆ ಇದ್ರಲ್ಲಿ ಪಾಲು!]

ಎಚ್. ಆಂಜನೇಯ, ಕೆ.ಜೆ.ಜಾರ್ಜ್, ಬಾಬೂರಾವ್ ಚಿಂಚನಸೂರ, ಪರಮೇಶ್ವರ್ ನಾಯ್ಕ್, ಆರ್.ವಿ ದೇಶಪಾಂಡೆ, ಕೆಂಪಯ್ಯ ಒಳಗೊಂಡ ಭ್ರಷ್ಟ ಹಾಗೂ ಕಳಂಕಿತರ ಪಟ್ಟಿಯಲ್ಲಿ ಒಬ್ಬರಾದ ಮಾಜಿ ಬಿಡಿಎ ಆಯುಕ್ತ ಶ್ಯಾಂ ಭಟ್ರಿಗೆ, ಜನತೆಯ ಸಾಕಷ್ಟು ವಿರೋಧದ ನಡುವೆಯೂ ಕೆಪಿಎಸ್ಸಿಯಂತಹ ಪ್ರತಿಷ್ಠಿತ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿರುವುದು ಬಹಳಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆಪ್ ಆರೋಪಿಸಿದೆ.
ಮುಖ್ಯಮಂತ್ರಿಗಳ ಹೆಸರೂ ಕೇಳಿಬಂದಿರುವ ಅರ್ಕಾವತಿ ಬಡಾವಣೆ ಹಗರಣ, ಅಕ್ರಮ ಡಿನೋಟಿಫಿಕೇಶನ್ ಹಗರಣ ಹಾಗೂ ಬಿಡಿಎ ಬದಲಿ ನಿವೇಶನ ಅವ್ಯವಹಾರದಲ್ಲಿ ಶ್ಯಾಂ ಭಟ್ರವರೇ ನೇರವಾಗಿ ಭಾಗಿಯಾಗಿದ್ದು, ಈ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಈಗಾಗಲೇ ಲೋಕಾಯುಕ್ತದಲ್ಲಿ ಸುಮಾರು 21 ಕೇಸ್ಗಳ ತೂಗುಗತ್ತಿ ಶ್ಯಾಂ ಭಟ್ರ ಮೇಲೆ ಇದೆ ಎಂದು ಅವರ ವಿರುದ್ಧ ಇರುವ ಆರೋಪಗಳ ಪಟ್ಟಿಯನ್ನು ತೆರೆದಿಟ್ಟಿತು. [ಕೆಪಿಎಸ್ ಸಿ ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕ]
ಶ್ಯಾಂ ಭಟ್ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿರುವ ರಾಜ್ಯಪಾಲರ ನಡೆಯೂ ಅನುಮಾನ ಮೂಡಿಸುವಂತಿದೆ, ಈ ಹಿಂದೆ ಕೆಪಿಎಸ್ಸಿ ನೇಮಕಾತಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಶ್ಯಾಂ ಭಟ್ ಹೆಸರನ್ನು ಎರಡು ಬಾರಿ ತಿರಸ್ಕರಿಸಿದ್ದ ಇದೇ ರಾಜ್ಯಪಾಲರು, ಇದೀಗ ಇದ್ದಕ್ಕಿದಂತೆ ಅವರನ್ನು ಅದೇ ಸ್ಥಾನದಲ್ಲಿ ನೇಮಿಸಲು ಅವಕಾಶ ಕೊಟ್ಟಿದ್ದೇಕೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಆಪ್ ಪದಾಧಿಕಾರಿಗಳು ಪ್ರಶ್ನಿಸಿದರು.
ಅದಲ್ಲದೇ ಈ ವಿಷಯಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನೇ ಕುಳಿತು ಪರೋಕ್ಷವಾಗಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆ.ಡಿ.ಎಸ್ ಕೂಡ ತಮ್ಮ ಮೌನ ಮುರಿದು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಒತ್ತಡ ಹೇರಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸಿತು.
ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯಾದ್ಯಂತ ಮಂಗಳವಾರ ಎಲ್ಲಾ ಜಿಲ್ಲೆಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಿದೆ. ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟಿಸಲಿದ್ದಾರೆ. ಶ್ಯಾಂ ಭಟ್ರ ನೇಮಕಾತಿಯನ್ನು ಹಿಂಪಡೆಯುವವರೆಗೂ ಪಕ್ಷ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದೆ.












Click it and Unblock the Notifications