KSRTC BMTC Strike ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಬಲ
ಬೆಂಗಳೂರು, ಮಾರ್ಚ್ 28: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಆಮ್ ಆದ್ಮಿ ಪಾರ್ಟಿಯು ಸಂಪೂರ್ಣ ಬೆಂಬಲ ನೀಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿ, "ನ್ಯಾಯಕ್ಕೆ ಆಗ್ರಹಿಸಿ ಅಹಿಂಸಾತ್ಮಕವಾಗಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ 2021ರಲ್ಲಿ ಮುಷ್ಕರದಲ್ಲಿ ಭಾಗವಹಿಸಿದ ಕಾರಣಕ್ಕೆ ಸಾರಿಗೆ ನೌಕರರನ್ನು ಸರ್ಕಾರ ವಜಾ ಮಾಡಿರುವುದು ಖಂಡನೀಯ"ವೆಂದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಟೆಕ್ಕಿ ಬಲಿ: ಪ್ರತಿಭಟಿಸಿದ ಆಪ್ ಮುಖಂಡರ ಬಂಧನ
"ಸರ್ಕಾರದ ಅಮಾನವೀಯ ನಡೆಯಿಂದಾಗಿ ಅನೇಕ ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬರುವ ಆತಂಕದಲ್ಲಿವೆ. ಆ ಎಲ್ಲ ನೌಕರರನ್ನು ಶೀಘ್ರವೇ ಮರುನೇಮಕ ಮಾಡಿಕೊಳ್ಳಬೇಕು. ಇದರ ಜೊತೆಗೆ, ವೇತನ ಪರಿಷ್ಕರಣೆ ಸೇರಿದಂತೆ ಸರ್ಕಾರವು ಸಾರಿಗೆ ನೌಕರರಿಗೆ ನೀಡಿದ್ದ ಅನೇಕ ಭರವಸೆಗಳನ್ನು ಶೀಘ್ರವೇ ಈಡೇರಿಸಬೇಕು," ಎಂದು ಆಗ್ರಹಿಸಿದರು.
"ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರದಂದು ಸಾರಿಗೆ ನೌಕರರು ನಡೆಸುತ್ತಿರುವ ಸಾರಿಗೆ ನೌಕರರ ಆಮರಣಾಂತ ಉಪವಾಸಕ್ಕೆ ಸ್ಥಳೀಯ ಆಮ್ ಆದ್ಮಿ ಪಾರ್ಟಿ ನಾಯಕರು ಹಾಗೂ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾರಿಗೆ ನೌಕರರು ನಡೆಸಲಿರುವ ಬೃಹತ್ ಪ್ರತಿಭಟನೆಗೆ ಕೂಡ ಆಮ್ ಆದ್ಮಿ ಪಾರ್ಟಿಯ ಸಂಪೂರ್ಣ ಬೆಂಬಲವಿದೆ. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರವು ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು," ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಯುವಘಟಕದ ಅಧ್ಯಕ್ಷ ಮುಕುಂದ ಗೌಡ ಮಾತನಾಡಿ, "ಕಳೆದ ವರ್ಷ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಸರ್ಕಾರ ಮಾತು ತಪ್ಪಿದೆ. ಸಾರಿಗೆ ಸಚಿವ ಬಿ. ಶ್ರೀರಾಮುಲುರವರ ತವರು ಜಿಲ್ಲೆ ಬಳ್ಳಾರಿಯಲ್ಲೇ ಸಾರಿಗೆ ನೌಕರರು ಆಮರಣಾಂತ ಉಪವಾಸ ನಡೆಸುತ್ತಿದ್ದರೂ ಸಚಿವರು ಅತ್ತ ಗಮನ ಹರಿಸದಿರುವುದು ನಾಚಿಕಗೇಡಿನ ಸಂಗತಿ. ತಮ್ಮ ಹಕ್ಕುಗಳನ್ನು ಕೇಳಲು ನೌಕರರು ಉಪವಾಸ ಮಾಡುವುದು ಸರ್ಕಾರಕ್ಕೆ ಶೋಭೆಯಲ್ಲ. ಸಚಿವರ ಭಂಡತನದಿಂದಾಗಿ ಸಾರಿಗೆ ನೌಕರರು ತೊಂದರೆ ಅನುಭವಿಸುವಂತಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
Recommended Video