ಮದುವೆಗೆ ಬಂದವನು ಮುದ್ದೆ ತಿಂದು ಬಹುಮಾನ ಗೆದ್ದ
ಮಂಡ್ಯ, ಡಿಸೆಂಬರ್, 01: ಸಾಮಾನ್ಯವಾಗಿ ಮದುವೆ ಎಂದರೆ ವರ-ವಧುವಿಗೆ ಆಶೀರ್ವದಿಸಿ, ಉಡುಗೊರೆ ನೀಡಿ, ಊಟ ಮುಗಿಸಿ ಮನೆಗೆ ತೆರಳುತ್ತೇವೆ. ಆದರೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣಕ್ಕೆ ಮದುವೆಗೆಂದು ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು ಮದುವೆ ಮುಗಿಸಿ, ರಾಗಿ ಮುದ್ದೆ ತಿಂದು, ಬಹುಮಾನ ಗೆದ್ದಿದ್ದಾರೆ.
ಬೋಳೆಗೌಡನದೊಡ್ಡಿ ಗ್ರಾಮದ ಬಸವರಾಜು ರಾಗಿ ಮುದ್ದೆ ಊಟಮಾಡಿ ಜೊತೆಗೆ ಬಹುಮಾನ ತೆಗೆದುಕೊಂಡು ಹೋದ ವ್ಯಕ್ತಿ. ಮಳವಳ್ಳಿಯಲ್ಲಿ ನಡೆದ ಮದುವೆ ಮನೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಇವರು ಭಾಗವಹಿಸಿ 'ಉಂಡು ಹೋದ ಬಹುಮಾನ ಗೆದ್ದು ಹೋದ' ಎಂಬ ಮಾತಿಗೆ ಪುಷ್ಠಿ ನೀಡಿದ್ದಾರೆ.[ಅಡುಗೆ, ಮಕ್ಕಳ ಆರೈಕೆ, ಸೆಕ್ಯೂರಿಟಿ ಚಿಂತೆಗೆ ಇಲ್ಲಿದೆ ಉತ್ತರ]
ಮಳವಳ್ಳಿಯ ಶಾಂತಿ ಕಾಲೇಜಿನ ಮುಂಭಾಗದ ಆವರಣದಲ್ಲಿ ಜಯಕರ್ನಾಟಕ ಸಂಘಟನೆಯು ಕನ್ನಡ ರಾಜ್ಯೋತ್ಸವ ಮತ್ತು ನಾಡಪ್ರಭು ಕೆಂಪೇಗೌಡ ಹಾಗೂ ಭಕ್ತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ರಾಗಿಮುದ್ದೆ ಊಟದ ಸ್ಪರ್ಧೆಯಲ್ಲಿ ಬಸವರಾಜು ಪ್ರಥಮ ಬಹುಮಾನ ಪಡೆದಿದ್ದಾರೆ.[ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ]
ಬೋಳೆಗೌಡನದೊಡ್ಡಿ ಗ್ರಾಮದ ಬಸವರಾಜು 3.300 ಕೆ.ಜಿ. ಮುದ್ದೆ ಊಟ ಮಾಡಿ ಪ್ರಥಮ ಬಹುಮಾನ 4,444 ರೂ. ಪಡೆದರೆ, ಮಳವಳ್ಳಿಯ ಕೋಟೆ ಬೀದಿಯ ನಿವಾಸಿ ಎಂ.ಎಸ್. ಮಹದೇವ 2.900 ಕೆಜಿ ಮುದ್ದೆ ಊಟ ಮಾಡಿ ದ್ವಿತೀಯ ಬಹುಮಾನವಾಗಿ 2,222 ರೂ. ಹಾಗೂ ಉಗ್ರಾಣಪುರದೊಡ್ಡಿ ಗ್ರಾಮದ ನಾಗರಾಜು 2.5 ಕೆಜಿ ಮುದ್ದೆ ನುಂಗಿ ತೃತೀಯ ಬಹುಮಾನವಾಗಿ 1,111 ರೂ. ಪಡೆದರು.